
ಸಾಹಿತ್ಯವು ಸಮಾಜದ ಸಂವೇದನೆಯಾಗಲಿ: ಎಲ್.ಹನುಮಂತಯ್ಯ
ಧರ್ಮಪುರ: ‘ಸಾಹಿತ್ಯವು ಸಮಾಜದ ಸಂವೇದನೆಯಾಗಬೇಕು. ಕವಿಯಾದವರು ಸಮಾಜದ ಅಂಕು– ಡೊಂಕುಗಳನ್ನು ತಿದ್ದುವ, ಸಮಾಜಮುಖಿ ಪರಿವರ್ತನೆಯ ರೂವಾರಿಯಾಗಬೇಕು’ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಪಂಚಲಿಂಗೇಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಧರ್ಮಪುರ ಹೋಬಳಿ ಕಸಾಪ ಘಟಕ, ಪಂಚಲಿಂಗೇಶ್ವರ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ, ಸಕ್ಕರ ಗೌತಮಿ ಪ್ರಕಾಶನ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬುದ್ಧ ಕರುಣೆಯ ಹೊತ್ತು’ ಕವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಸಾಹಿತ್ಯದ ಕಾರ್ಯಕ್ರಮಗಳು ನಗರ ಕೇಂದ್ರದಿಂದ ಬಿಡುಗಡೆ ಪಡೆದು ಗ್ರಾಮೀಣ ಪ್ರದೇಶಗಳ ಕಡೆ ಮುಖ ಮಾಡಿವೆ. ನಗರಗಳು ವ್ಯಾಪಾರೀಕರಣದ ಕೇಂದ್ರಗಳಾಗಿವೆ. ಪ್ರಪಂಚದ ಬಹುತೇಕ ಕವಿಗಳು ತಮ್ಮ ಊರು, ಕೇರಿಯ ಕುರಿತಾದ ಕಥನಗಳನ್ನೇ ಆಯ್ದು ಕೃತಿಗಳನ್ನು ಬರೆದಿದ್ದಾರೆ. ಅದೇ ರೀತಿ ಸಕ್ಕರ ನಾಗರಾಜು ಅವರು ಕವನ ಸಂಕಲನದಲ್ಲಿ ತಮ್ಮ ಬದುಕಿನ ಚಿಂತನೆಗಳ ಕುರಿತು ಬರೆದಿದ್ದಾರೆ ಎಂದರು.
‘ಸಹನೆ, ಸಾಮರಸ್ಯ ಕಳೆದುಕೊಳ್ಳುತ್ತಿರುವ ಕಾಲಮಾನದಲ್ಲಿ ಮತ್ತೆ ಕಟ್ಟುವ ಕಾಯಕವನ್ನು ಸಾಹಿತ್ಯ ಮಾಡುತ್ತಿದೆ. ಅಕ್ಷರ ನಮ್ಮ ಆಸ್ತಿಯಾಗಬೇಕು, ಶಕ್ತಿಯಾಗಬೇಕು. ನಮ್ಮ ಮಾತುಗಳನ್ನು ಹದ ಗೊಳಿಸಿದಾಗ ಕವಿತೆ ರೂಪಗೊಳ್ಳುತ್ತದೆ’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಪ್ರೊ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.
‘ಧರ್ಮಪುರ ಹೋಬಳಿ ನೊಳಂಬರ, ಅವಧೂತರ, ಕವಿ, ಕವಿಯತ್ರಿಯರ, ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಛಾಪು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕಣಜನಹಳ್ಳಿ ನಾಗರಾಜ್, ಹರಿಯಬ್ಬೆ ಕೆಂಚಮ್ಮ, ಹರಿಯಬ್ಬೆ ಪ್ರೇಮ್ ಕುಮಾರ್, ಸಕ್ಕರ ರಂಗಸ್ವಾಮಿ, ಗಢಾರಿ ಕೃಷ್ಣಪ್ಪ, ವೈದ್ಯ ಕೆ.ಜೆ.ತಿಮ್ಮರಾಜು ತಮ್ಮದೇ ಆದ ಕೊಡುಗೆ ನೀಡಿದ್ದಾರೆ’ ಎಂದು ಪ್ರಾಂಶುಪಾಲ ಪ್ರೊ.ವಿ.ವೀರಣ್ಣ ತಿಳಿಸಿದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಚ್.ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ, ಕೆ.ಜೆ.ತಿಮ್ಮರಾಜು, ಕವಿ ಶಿವಶಂಕರ ಸೀಗೇಹಟ್ಟಿ, ಗಢಾರಿ ಕೃಷ್ಣಪ್ಪ, ಜಿ.ಆರ್.ರಘುನಾಥ್, ಮುಖ್ಯ ಶಿಕ್ಷಕ ಜೆ.ಮಂಜುನಾಥ್, ಒ.ರಂಗನಾಥ್, ಎಸ್.ಡಿ.ಹನುಮಂತರಾಯ, ರಂಗಸ್ವಾಮಿ, ಎಸ್.ಶ್ರೀನಿವಾಸ್, ಎಂ.ರಮೇಶ್, ಆರ್.ಎ.ಸ್ವಪ್ನ ಕುಮಾರಿ, ಪ್ರಹಲ್ಲಿಕ ಟಿ.ಕುಂಬಾರ, ರಂಗರಾಜು, ಪುಟ್ಟರಾಜನಾಯಕ್, ಲಕ್ಷ್ಮಣ್ ಉಪಸ್ಥಿತರಿದ್ದರು.