
ಎಂಟು ದಿನದಲ್ಲಿ ಅಹವಾಲು ಇತ್ಯರ್ಥಪಡಿಸಿ:ಪ್ರಜಾಸೇವೆ ಆಂದೋಲನದಲ್ಲಿ ಶಾಸಕ ರವಿಕುಮಾರ್
ಶಿಡ್ಲಘಟ್ಟ: ‘ಜನರು ಸಲ್ಲಿಸುವ ಅರ್ಜಿ, ಅಹವಾಲು ಮತ್ತು ಸಮಸ್ಯೆಗಳನ್ನು ಅಧಿಕಾರಿಗಳು ಎಂಟು ದಿನಗಳಲ್ಲಿ ಪರಿಹರಿಸಬೇಕು. 30 ದಿನಗಳಲ್ಲಿ ಕಡ್ಡಾಯವಾಗಿ ಬಗೆಹರಿಸಬೇಕು ಎಂದು ಸರ್ಕಾರ ಸೂಚಿಸಿದೆ’ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ಬಶೆಟ್ಟಿಹಳ್ಳಿ ಕೆಪಿಎಸ್ ಶಾಲೆಯಲ್ಲಿ ಶನಿವಾರ ನಡೆದ ಪ್ರಜಾಸೇವೆ ಆಂದೋಲನದ ತಾಲ್ಲೂಕು ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಂದಾಯ, ರೈತರು ಮತ್ತು ನಕಾಶೆ ರಸ್ತೆ ವಿಷಯಗಳ ಬಗ್ಗೆ ಹಲವು ದೂರುಗಳು ಬಂದಿವೆ. ಅಧಿಕಾರಿಗಳು ವಿಳಂಬ ಮಾಡದೆ ಸ್ಥಳದಲ್ಲೇ ಪರಿಶೀಲಿಸಿ ಪರಿಹಾರ ಕೊಡಬೇಕು’ ಎಂದರು.
‘ಕ್ಷೇತ್ರದಲ್ಲಿ ಪ್ರತಿದಿನ 2ರಿಂದ 4 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪಿಡಿಒಗಳು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಗುರುತಿಸಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.
‘ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ನೀರಿನ ಸಮಸ್ಯೆಗೆ ಕೂಡಲೇ ಪಿಡಿಒ ಮತ್ತು ಇಒ ಮೇಲಧಿಕಾರಿಗಳಿಗೆ ತಿಳಿಸಿ ಬೇಗ ಪರಿಹಾರ ಮಾಡಬೇಕು’ ಎಂದರು.
‘ಪ್ರಜಾಸೇವೆ ಆಂದೋಲನ ಜನರಿಗೆ ಅಹವಾಲು ಸಲ್ಲಿಸಲು ಉತ್ತಮ ಅವಕಾಶ. ಜನರು ಇದರ ಪ್ರಯೋಜನ ಪಡೆಯಬೇಕು’ ಎಂದು ಮನವಿ ಮಾಡಿದರು.
ಅಂಗವಿಕಲರಿಗೆ ತ್ರಿಚಕ್ರ ವಾಹನ: ‘2025–26ನೇ ಸಾಲಿನ ಶಾಸಕರ ₹2 ಕೋಟಿ ಅನುದಾನದಲ್ಲಿ ಶೇ10ರಷ್ಟು ಅಂದರೆ ಸುಮಾರು ₹20 ಲಕ್ಷವನ್ನು ಅಂಗವಿಕಲರಿಗೆ ನೆರವು ನೀಡಲು ಮೀಸಲಿಡಲಾಗಿದೆ. ಈ ಅನುದಾನದಡಿ ತ್ರಿಚಕ್ರ ವಾಹನ ವಿತರಿಸಲಾಗುವುದು’ ಎಂದು ಶಾಸಕರು ಹೇಳಿದರು.
ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಕೆಲವು ಪಿಂಚಣಿ ಮಂಜೂರಾತಿ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಆರೋಗ್ಯ ಇಲಾಖೆಯಿಂದ ಪೌಷ್ಟಿಕ ಆಹಾರ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ಗಗನಸಿಂಧು, ಇ.ಒ ಆರ್.ಹೇಮಾವತಿ, ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸ್ಥಳೀಯರು ಹಾಜರಿದ್ದರು.