
ಬಂಟ್ವಾಳ: ಅಮ್ಮೆಂಬಳ ಬಾಳಪ್ಪರ ಮನೆ ಅನಾಥ
ಬಂಟ್ವಾಳ: ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಕರಾವಳಿ ಜಿಲ್ಲೆಯಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ್ದ ಸೇನಾನಿ ಡಾ. ಅಮ್ಮೆಂಬಳ ಬಾಳಪ್ಪ ಅವರು ಜೀವನದ ಕೊನೆಯ ಕ್ಷಣಗಳನ್ನು ಕಳೆದ ‘ಅಹಿಂಸಾ’ ಮನೆ ಇದೀಗ ನಿರ್ವಹಣೆ ಇಲ್ಲದೆ ಅನಾಥವಾಗಿದೆ.
ಇಲ್ಲಿನ ಕುರ್ನಾಡು ಸಮೀಪದ ಅಮ್ಮೆಂಬಳದಲ್ಲಿ ಜನಿಸಿದ್ದ ಬಾಳಪ್ಪ ಅವರು ಬಳಿಕ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ನೆಲೆಸಿ, ತನ್ನ ಜೀವಿತಾವಧಿಯ ಬಹುತೇಕ ದಿನಗಳನ್ನು ಅಲ್ಲೇ ಕಳೆದಿದ್ದರು.
ಅವಿವಾಹಿತರಾಗಿದ್ದ ಅವರು 2014ರಲ್ಲಿ ನಿಧನರಾದ ಬಳಿಕ ಅವರ ಸಹೋದರ ಕುಟುಂಬ ಸಹಿತ ಇಲ್ಲಿ ವಾಸವಾಗಿದ್ದರು. ಅವರೂ ನಿಧನರಾದ ಬಳಿಕ ಮನೆ ನಿರ್ವಹಣೆ ಇಲ್ಲದೆ ಅನಾಥ ಸ್ಥಿತಿಗೆ ಬಂದು ತಲುಪಿದೆ ಎನ್ನುತ್ತಾರೆ ಸ್ಥಳೀಯರು. ಈ ಮನೆ ಸುತ್ತಲೂ ಪೊದೆ ಮತ್ತು ಗಿಡಗಂಟಿ ದಟ್ಟವಾಗಿ ಬೆಳೆದಿದ್ದು, ‘ಅಹಿಂಸಾ’ ನಾಮಫಲಕ ಮಾತ್ರ ಎದ್ದು ಕಾಣುತ್ತಿದೆ. ಈ ದೃಶ್ಯ ಅವರ ಅಭಿಮಾನಿಗಳು ಮತ್ತು ದೇಶಪ್ರೇಮಿಗಳ ಮನಸ್ಸಿಗೆ ನೋವು ತಂದಿದೆ.
ಮೂಲತಃ ಕುಂಬಾರ ಕುಟುಂಬದಲ್ಲಿ ಜನಿಸಿದ ಅಮ್ಮೆಂಬಳ ಬಾಳಪ್ಪ ಅವರು 1942ರಲ್ಲಿ ಮಹಾತ್ಮ ಗಾಂಧಿ ಕರೆಗೆ ಓಗೊಟ್ಟು ‘ಕ್ವಿಟ್ ಇಂಡಿಯ ಚಳವಳಿ’ಗೆ ಧುಮುಕಿದರು. ಆ ಸಂದರ್ಭದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ವೆಲ್ಲೂರು ಜೈಲು ಪಾಲಾಗಿ, 18 ತಿಂಗಳ ಶಿಕ್ಷೆ ಅನುಭವಿಸಿದ್ದರು. ಆ ಬಳಿಕ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದ ಬಾಳಪ್ಪರು ಬಂಟ್ವಾಳ ಭೂನ್ಯಾಯ ಮಂಡಳಿ ಸದಸ್ಯರಾಗಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ 46 ವರ್ಷಗಳ ಹಿಂದೆ ಕುಲಾಲ ಸಮಾಜದ ವತಿಯಿಂದ ‘ಸಮಾಜ ಸೇವಾ ಸಹಕಾರ ಸಂಘದ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿದ್ದರು.
ಅಮ್ಮೆಂಬಳ ಬಾಳಪ್ಪ ಅವರು ವಾಸವಾಗಿದ್ದ ಮನೆಯಲ್ಲಿ ಅವರು ಬಳಸುತ್ತಿದ್ದ ಹಲವಾರು ಪುಸ್ತಕ ಮತ್ತಿತರ ಅಮೂಲ್ಯ ವಸ್ತುಗಳು ಗೆದ್ದಲು ಪಾಲಾಗದಂತೆ ರಕ್ಷಿಸಬೇಕಿದೆ. ಕೇಂದ್ರದ ಮಾಜಿ ಸಚಿವ, ದಿ.ಜಾರ್ಜ್ ಫರ್ನಾಂಡಿಸ್ ಜೊತೆಗೆ ಅವರು ಹೊಂದಿದ್ದ ಒಡನಾಟದ ಫೊಟೊ ಮತ್ತಿತರ ದಾಖಲೆಗಳನ್ನು ಸಂರಕ್ಷಿಸುವ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯ ಅಭಿಮಾನಿಗಳು.
ಅಮ್ಮೆಂಬಳ ಬಾಳಪ್ಪ ಅವರು ಜೀವಿತಾವಧಿ ಕಳೆದ ಮಾರ್ನಬೈಲು ‘ಅಹಿಂಸಾ’ ಮನೆ ಮ್ಯೂಸಿಯಂ ರೀತಿ ಅಭಿವೃದ್ಧಿಪಡಿಸುವ ಕನಸಿದೆ. ಈ ಬಗ್ಗೆ ಕುಟುಂಬಿಕರ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅಳಿಯ (ಸಹೋದರಿ ಪುತ್ರ) ರವೀಂದ್ರನಾಥ್ ಪ್ರತಿಕ್ರಿಯಿಸಿದ್ದಾರೆ.
ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿ ಯಲ್ಲಿ ಈಗಾಗಲೇ ಅಮ್ಮೆಂಬಳ ಬಾಳಪ್ಪರ ‘ಪುತ್ಥಳಿ’ ಅನಾವರಣಗೊಳಿಸಲಾಗಿದೆ. ಅವರ ಮನೆ ಮ್ಯೂಸಿಯಂ ಆಗಿ ಪರಿವರ್ತಿಸಲು ಟ್ರಸ್ಟಿನ ಬೇಡಿಕೆ ಬಂದಲ್ಲಿ ಸಹಕರಿಸಲು ಸಮಾಜ ಸೇವಾ ಸಹಕಾರಿ ಸಂಘ ಸಿದ್ಧವಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಕುಲಾಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.