
ಮಳೆ ಕೊರತೆ: ಮೋಡ ಬಿತ್ತನೆಗೆ ಇಂದು ಚಾಲನೆ
ಬೆಂಗಳೂರು: ಮಳೆ ಕೊರತೆ ನೀಗಿಸಲು ಜಲಸಂಪನ್ಮೂಲ ಇಲಾಖೆಯು ಶುಕ್ರವಾರದಿಂದ (ಸೆ. 4) ಮೋಡ ಬಿತ್ತನೆ ಕಾರ್ಯ ಆರಂಭಿಸಲಿದೆ.
ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಎಚ್ಎಎಲ್ ವಿಮಾನನಿಲ್ದಾಣದಲ್ಲಿ ಬೆಳಿಗ್ಗೆ 10ಕ್ಕೆ ಚಾಲನೆ ನೀಡಲಿದ್ದಾರೆ. ಮೋಡ ಬಿತ್ತನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮೇಲ್ವಿಚಾರಣಾ ಸಮಿತಿ, ತಾಂತ್ರಿಕ ಸಮಿತಿ, ಕ್ಷೇತ್ರ ಕಾರ್ಯಾಚರಣೆ ಹಾಗೂ ಮೌಲ್ಯಮಾಪನ ಸಮಿತಿಗಳನ್ನು ರಚಿಸಲಾಗಿದೆ.
ತಾಂತ್ರಿಕ ಸಮಿತಿಯಲ್ಲಿ ಐಐಟಿ, ಐಐಎಸ್ಸಿ ಹಾಗೂ ಹವಾಮಾನ ಇಲಾಖೆಯ ತಜ್ಞರು ಇದ್ದು, ಏಕಕಾಲಕ್ಕೆ ನಾಲ್ಕು ಕಂದಾಯ ವಿಭಾಗಗಳ ವ್ಯಾಪ್ತಿಯಲ್ಲಿ ಮೋಡಗಳ ಲಭ್ಯತೆಯ ಆಧಾರದ ಮೇಲೆ ಕಾರ್ಯ ನಡೆಯಲಿದೆ. ಬಿತ್ತನೆಯಾದ 15 ಕಿ.ಮೀ ವ್ಯಾಪ್ತಿಯಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ₹27 ಕೋಟಿ ವೆಚ್ಚದಲ್ಲಿ 60 ದಿನಗಳು (ಸುಮಾರು 200 ಗಂಟೆ) ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ.
‘ರಾಜ್ಯದಲ್ಲಿ ಇದುವರೆಗೆ ಮೂರು ಬಾರಿ ಮೋಡ ಬಿತ್ತನೆ ನಡೆಸಲಾಗಿದೆ. ಶೇ 18ರಿಂದ 20ರಷ್ಟು ಯಶಸ್ಸು ಸಿಕ್ಕಿದೆ. ಈ ಬಾರಿ ಶೇ 30ರಷ್ಟು ಯಶಸ್ಸಿನ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮಳೆ ಕೊರತೆಯಿಂದ ನೀರಿನ ಅಭಾವ ಸೃಷ್ಟಿಯಾಗದಂತೆ ಮುನ್ನಚ್ಚರಿಕೆ ವಹಿಸಲು, ಅಂತರ್ಜಲ ಕೊರತೆ ನೀಗಿಸಲು ವೆಚ್ಚವನ್ನು ಲೆಕ್ಕಹಾಕದೆ ಜನರ ಹಿತಾಸಕ್ತಿ, ನಿರೀಕ್ಷೆ ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.