
ಹೊಸದುರ್ಗದ: ದೊಡ್ಡಕರ್ಪೂರದಕಟ್ಟೆ ಗ್ರಾಮದಲ್ಲಿ ದುರಸ್ತಿಯಾಗದ ನೀರಿನ ಘಟಕ
ಹೊಸದುರ್ಗ: ತಾಲ್ಲೂಕಿನ ಮತ್ತೋಡು ಹೋಬಳಿಯ ಕಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕರ್ಪೂರದಕಟ್ಟೆ ಗ್ರಾಮದ ಬಸ್ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಬಂದು ಮೂರು ತಿಂಗಳು ಕಳೆದರೂ, ಅಧಿಕಾರಿಗಳು ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡಕರ್ಪೂರದಕಟ್ಟೆ 100 ಮನೆಗಳಿರುವ ಗ್ರಾಮ. ಗ್ರಾಮಸ್ಥರು 2 ಕಿ.ಮೀ. ದೂರದಲ್ಲಿರುವ ಲಕ್ಷ್ಮಿದೇವರಹಳ್ಳಿ ಅಥವಾ 3 ಕಿ.ಮೀ. ದೂರದಲ್ಲಿರುವ ಕಿಟದಾಳ್ ಗ್ರಾಮಕ್ಕೆ ತೆರಳಿ ಕುಡಿಯುವ ನೀರು ತರುವ ಪರಿಸ್ಥಿತಿ ಎದುರಾಗಿದೆ. ಬೈಕ್ ಸೇರಿದಂತೆ ವಾಹನಗಳಿರುವವರು ಹೇಗೋ ನೀರು ತಂದುಕೊಳ್ಳುತ್ತಿದ್ದಾರೆ. ಆದರೆ, ವಾಹನಗಳ ಸೌಲಭ್ಯವಿಲ್ಲದ ವೃದ್ಧರು, ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮದ ನಿವಾಸಿ ಧನಂಜಯ ಬೇಸರ ವ್ಯಕ್ತಪಡಿಸಿದರು.
ಇದೀಗ ಸಾಲು ಹಬ್ಬಗಳಿರುವುದರಿಂದ ಗ್ರಾಮದಲ್ಲಿ ಜನ ಸಂಚಾರವೂ ಹೆಚ್ಚಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ, ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.