ಕಾರವಾರ: ಗಣೇಶೋತ್ಸವ ಸಮಿತಿಯ ಉತ್ಸಾಹ ಕಸಿದ ನಿರ್ಬಂಧ

ಕಾರವಾರ: ಗಣೇಶೋತ್ಸವ ಸಮಿತಿಯ ಉತ್ಸಾಹ ಕಸಿದ ನಿರ್ಬಂಧ

ಕಾರವಾರ: ಗಣೇಶೋತ್ಸವ ಸಮಿತಿಯ ಉತ್ಸಾಹ ಕಸಿದ ನಿರ್ಬಂಧ

ಕಾರವಾರ: ಡಿಜೆ, ಪಿಒಪಿ ಮೂರ್ತಿ, ಅಲಂಕಾರಕ್ಕೆ ಹಾನಿಕಾರಕ ಸಾಮಗ್ರಿ ಸೇರಿದಂತೆ ಹಲವು ನಿಬಂಧನೆಗಳನ್ನು ಸಾರ್ವಜನಿಕ ಗಣೇಶೋತ್ಸವಕ್ಕೆ ವಿಧಿಸಿರುವುದಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನಿಯಮಗಳು ಜನ, ಪರಿಸರದ ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬ ಸಮರ್ಥನೆ ಕೆಲವರದ್ದು. ಸರ್ಕಾರಿ ಉತ್ಸವ, ಇತರ ಧಾರ್ಮಿಕ ಮೆರವಣಿಗೆಗೆ ಇಲ್ಲದ ಕಟ್ಟಳೆ ಗಣೇಶೋತ್ಸವಕ್ಕೆ ಮಾತ್ರ ಎಂಬ ಅಸಮಾಧಾನ ಹಲವರದ್ದು.

ಜಿಲ್ಲೆಯಲ್ಲಿ 1,492 ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ಉತ್ಸವ ಆಯೋಜನೆ ನಡೆಯುತ್ತಿದೆ. ಪ್ರತಿ ಮಂಟಪಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸದಂತೆ ಸೂಚನೆ ನೀಡಲಾಗಿದೆ. ಹಸಿರು ಪಟಾಕಿ ಮಾತ್ರ ಸಿಡಿಸಬೇಕು, ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆ ಮಾಡಬಾರದು ಎಂಬುದಾಗಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ.

‘ಕರಾವಳಿ ಉತ್ಸವದಂತಹ ಸರ್ಕಾರಿ ಉತ್ಸವದಲ್ಲಿ ತಡರಾತ್ರಿವರೆಗೆ ಡಿಜೆ ಬಳಸಿ ಕಾರ್ಯಕ್ರಮ ನಡೆಯುತ್ತದೆ. ಹಲವು ಕಿ.ಮೀ ದೂರದವರೆಗೆ ಶಬ್ದ ಅಪ್ಪಳಿಸುತ್ತದೆ. ಈಗ ನಿಬಂಧನೆ ವಿಧಿಸುವ ಅಧಿಕಾರಿಗಳೇ ಮುಂದೆ ನಿಂತು ಉತ್ಸವ ಮಾಡುತ್ತಾರೆ. ಆಗ ಇಲ್ಲದ ನಿರ್ಬಂಧ, ಗಣೇಶೋತ್ಸವಕ್ಕೆ ಮಾತ್ರ ಏಕೆ?’ ಎಂಬುದು ಕಾರವಾರದ ಹಲವು ಗಣೇಶೊತ್ಸವ ಸಮಿತಿಗಳ ಪ್ರಮುಖರ ಪ್ರಶ್ನೆ.

‘ಪರಿಸರಕ್ಕೆ ಹಾನಿ ಮಾಡದೆ ಉತ್ಸವ ಆಯೋಜಿಸಬೇಕು. ಶಬ್ದಮಾಲಿನ್ಯ, ವಾಯುಮಾಲಿನ್ಯಕ್ಕೆ ಅವಕಾಶ ನೀಡುವ ಆಚರಣೆ ನಡೆಯಬಾರದು ಎಂಬುದಾಗಿ ನ್ಯಾಯಾಲಯದ ಆದೇಶವೂ ಇದೆ. ಅದರ ಪಾಲನೆಗೆ ನಿರ್ಬಂಧ ಅನಿವಾರ್ಯ’ ಎಂಬುದು ಅಧಿಕಾರಿಗಳ ಸಮರ್ಥನೆ.

ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸಣ್ಣ ಮಟ್ಟದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಮಿತಿಗಳಿಗೆ ಖರ್ಚಿನ ಬಾಬ್ತು ಹೆಚ್ಚಿದೆ ಎಂಬುದಾಗಿ ಸಮಿತಿ ಪ್ರಮುಖರು ಹೇಳುತ್ತಿದ್ದಾರೆ.

‘ಅಲಂಕಾರಕ್ಕೆ ಪ್ಲಾಸ್ಟಿಕ್ ಪೇಪರ್ ಬಳಕೆ ಅನಿವಾರ್ಯ. ಪರಿಸರ ಸ್ನೇಹಿ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ಮತ್ತು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳಿಗೆ ತಡೆಯೊಡ್ಡಿರುವುದರಿಂದ ಮಂಟಪ ಅಲಂಕಾರದ ವೆಚ್ಚ ದುಪ್ಪಟ್ಟಾಗುತ್ತದೆ’ ಎನ್ನುತ್ತಾರೆ ಬಾಳೆಗದ್ದೆ ಗಣೇಶೋತ್ಸವ ಸಮಿತಿಯ ರಾಜು ನಾಯ್ಕ.

ಮುಂಡಗೋಡ ತಾಲ್ಲೂಕಿನಲ್ಲಿ ಹೊಸದಾಗಿ 8 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಭಕ್ತರು ಮುಂದಾಗಿದ್ದಾರೆ. ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ ಪಡೆಯಬೇಕಿರುವ ಅನುಮತಿ ಕುರಿತು ಸಂಘಟಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಮಣ್ಣಿನ ಗಣಪನನ್ನು ವಾಹನದಲ್ಲಿ ತರಬೇಕೆಂದರೆ, ಲೋಕೋಪಯೋಗಿ ಇಲಾಖೆಯ ರಸ್ತೆಗಳೇ ಸರಿಯಿಲ್ಲ. ಹೊಂಡ ಗಳಿಂದ ತುಂಬಿರುವ ರಸ್ತೆಯಲ್ಲಿ ಮಣ್ಣಿನ ಗಣಪನನ್ನು ತರುವಾಗ, ಭಗ್ನಗೊಂಡರೆ ಅದರ ಅಪವಾದ ಯಾರು ಹೊರಬೇಕು’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಂಜುನಾಥ ಪಾಟೀಲ ಪ್ರಶ್ನಿಸುತ್ತಾರೆ.

ಭಟ್ಕಳದಲ್ಲಿ ಮಾಲಿನ್ಯ ಹಾನಿಕಾರಕ ಬಣ್ಣ ಬಳಕೆ, ಪ್ಲಾಸ್ಟಿಕ್‌ ಸಾಮಗ್ರಿ ಬಳಸದಂತೆ ನಿರ್ಬಂಧ ಹೇರಿರುವುದನ್ನು ಸ್ವಾಗತಿಸಿದ್ದರೂ, ಡಿಜೆ ಬಳಕೆ, ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆಯಂತಹ ನಿಯಮಗಳ ವಿರುದ್ಧ ಗಣೇಶೋತ್ಸವ ಸಮಿತಿಯವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಜನರಲ್ಲಿ ಒಗ್ಗಟ್ಟು ಮೂಡಿಸಲು ಸಾರ್ವಜನಿಕವಾಗಿ ಕಳೆದ ಹಲವು ವರ್ಷಗಳಿಂದ ಗಣೇಶನನ್ನು ಪೂಜಿಸುತ್ತಿದ್ದೇವೆ. ಹಬ್ಬಕ್ಕೆ ಅಧಿಕಾರಿಗಳು ವಿಧಿಸುತ್ತಿರುವ ನಿಬಂಧನೆಗಳ ಪೂರೈಸುವುದೇ ಕಷ್ಟವಾಗಿದೆ’ ಎಂದು ತಲಗೇರಿ ಯುವಕ ಸಂಘದ ಅಧ್ಯಕ್ಷ ವಿಶಾಲ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಅಂಕೋಲಾದಲ್ಲಿ ಗಣೇಶೋತ್ಸವ ಮಂಟಪಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ರಸ್ತೆಗಳಲ್ಲಿ ಗುಂಡಿಗಳಿದ್ದಲ್ಲಿ ದುರಸ್ತಿ ಮಾಡುವುದು ಹಾಗೂ ಮೆರವಣಿಗೆ ಸಾಗುವ ಮಾರ್ಗವನ್ನು ಸುಗಮಗೊಳಿಸುವಂತೆ ಸಮಿತಿಗಳ ಪ್ರಮುಖರು ಆಗ್ರಹಿಸಿದ್ದಾರೆ.

ಉತ್ಸವ ಆಯೋಜನೆಗೆ ಹಲವು ಇಲಾಖೆಗಳಿಂದ ಅನುಮತಿ ಪಡೆಯುವ ನಿಯಮ ಹೇರಿರುವುದಕ್ಕೆ ಹಳಿಯಾಳ ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಅಸಮಾಧಾನ ಹೊರಹಾಕುತ್ತಿದ್ದಾರೆ. ‘ಡಿಜೆ ಬಳಕೆ ಮಾಡದೆ, ಗ್ರಾಮೀಣ ಭಾಗದ ವಾದ್ಯ ಮೇಳಗಳ ತಂಡಗಳನ್ನು ಕರೆಸಿ ವಿಸರ್ಜನಾ ಮೆರವಣಿಗೆ ನಡೆಸುತ್ತೇವೆ. ಮೆರವಣಿಗೆಗೆ ಹೆಚ್ಚುವರಿ ಸಮಯ ನೀಡಬೇಕು’ ಎಂಬುದು ದುರ್ಗಾ ನಗರದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶುಭಂ ಉಲ್ಲಾಸ ಬೀಡಿಕರ ಒತ್ತಾಯ.

ಹೊನ್ನಾವರ ಪಟ್ಟಣದಲ್ಲಿ ಕೆಲ ಪೆಂಡಾಲ್‌ಗಳು ಪ್ರಸ್ತುವ ವರ್ಷ ಹೊಸದಾಗಿ ಪಟ್ಟಿಗೆ ಸೇರ್ಪಡೆಯಾಗಿವೆ. ಡಿಜೆ ನಿರ್ಬಂಧದ ಕಾನೂನು ಜಾರಿಗೆ ತಂದ ನಿದರ್ಶನಗಳು ಕಡಿಮೆ ಇರುವುದರಿಂದ ಈ ಬಾರಿಯೂ ವಿಸರ್ಜನಾ ಮೆರವಣಿಗೆ ಹಾಗೂ ಇತರ ಸಂದರ್ಭಗಳಲ್ಲಿ ಡಿಜೆಯನ್ನು ಅಬ್ಬರಿಸುವ ಹುಮ್ಮಸ್ಸಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಇರುವ ಹಾಗೆ ಕಾಣುತ್ತಿದೆ.

‘ಸಾಂಪ್ರದಾಯಿಕ ಭಜನೆ, ನೃತ್ಯ ಹಾಡುಗಳ ಮೂಲಕ ಹಬ್ಬದ ಆಚರಣೆ ಮಾಡಲಿದ್ದೇವೆ. ಗಣೇಶ ಪ್ರತಿಷ್ಠಾಪನೆಗೆ ನಗರಸಭೆ ಪ್ರತ್ಯೇಕವಾಗಿ ₹1,000 ಶುಲ್ಕ ಪಡೆಯುತ್ತಿದೆ. ಹಬ್ಬ ಮಾಡಲು ಏಕೆ ಹಣಕೊಡಬೇಕು’ ಎಂದು ಪ್ರಶ್ನಿಸುತ್ತಾರೆದಾಂಡೇಲಿಯ ಸಂಡೇ ಮಾರುಕಟ್ಟೆ ಗಣೇಶ ಮಂಡಳಿಯ ಪ್ರಮುಖ ವಿಷ್ಣು ನಾಯರ್.

‘5ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ಮಾತ್ರ ಪೋಲಿಸರು ಧ್ವನಿವರ್ಧಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಅವಸರದಲ್ಲಿ ಮುಗಿಸಿ ಎಂದು ಒತ್ತಾಯಿಸುತ್ತಾರೆ’ ಎಂದು ದೂರುತ್ತಾರೆ ಕೋಗಿಲಬನ ಗಣೇಶ ಮಂಡಳಿಯ ಚನ್ನಬಸಪ್ಪ ಮೂರಗೋಡ.

‘ಉತ್ಸವ ಸಮಿತಿಯವರು ಕೋರುವ ಅನುಮತಿಗಳು ತ್ವರಿತವಾಗಿ ಸಿಗುವಂತಾಗಬೇಕು, ಸರಳವಾಗಿಬೇಕು.ಉತ್ಸವ ಸಮಿತಿಗಳೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆದರೆ, ಹಿಂದೂ ಆಚರಣೆಗಳಿಗೆ ಮಾತ್ರ ಕಟ್ಟುನಿಟ್ಟಿನ ನಿಯಮ ಸೀಮಿತವಾಗಬಾರದು’ ಎಂದು ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ ಕಾರ್ಯದರ್ಶಿ ಗುರುಮೂರ್ತಿ ಶಾನಭಾಗ ಹೇಳಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಮೋಹನ ನಾಯ್ಕ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಎಂ.ಜಿ.ಹೆಗಡೆ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಸುಜಯ್ ಭಟ್, ಅಜಿತ್ ನಾಯಕ.

ಬಿದಿರು, ಹುಲ್ಲು ಬಳಸಿ ಮಂಟಪ

ಜೊಯಿಡಾ ತಾಲ್ಲೂಕಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರದ ಹಲವು ನಿಯಮಾವಳಿಗಳು ಯುವ ಜನತೆಯ ಉತ್ಸಾಹವನ್ನು ಕಡಿಮೆ ಮಾಡಿದೆ. ಗ್ರಾಮೀಣ ಪ್ರದೇಶದಿಂದ ಕೂಡಿರುವ ಜೊಯಿಡಾ ಸಾರ್ವಜನಿಕ ಗಣೇಶೋತ್ಸವದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದು, ಸಮಿತಿಯ ಸದಸ್ಯರ ಸಂಖ್ಯೆ ಸಹ ಕಡಿಮೆ ಇದೆ. ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆಗೆ ಹಣ ಹೊಂದಿಸಲು ಸಮಿತಿಯವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಬಿದಿರು, ಹುಲ್ಲು ಬಳಸಿ ಪರಿಸರ ಸ್ನೇಹಿ ಗಣೇಶೋತ್ಸವ ನಡೆಸಲು ಗಣೇಶೋತ್ಸವ ಸಮಿತಿಯವರು ತಯಾರಿ ನಡೆಸಿದ್ದಾರೆ. ‘ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆಯು ಹೆಚ್ಚು ಜನ ಸೇರುವಲ್ಲಿ ಕಡ್ಡಾಯವಾಗಲಿ. ಗ್ರಾಮೀಣ ಪ್ರದೇಶದಲ್ಲಿ ರಿಯಾಯಿತಿ ನೀಡಬೇಕು’ ಎನ್ನುತ್ತಾರೆ ಜೊಯಿಡಾ ಮಲ್ಹಾರ ಗಣೇಶೋತ್ಸವ ಸಮಿತಿ ಪ್ರಮುಖ ಅರುಣ ಕಾಮ್ರೇಕರ ಮತ್ತು ದಿನೇಶ ಗಾವಡಾ.

ಯಲ್ಲಾಪುರ ತಾಲ್ಲೂಕಿನಲ್ಲಿ ಸಾರ್ವಜನಿಕ ಗಜಾನನೋತ್ಸವ ಆಚರಣೆಗೆ ಅತಿಯಾದ ಕಟ್ಟಳೆ ವಿಧಿಸಲಾಗುತ್ತಿದೆ. ಹಳ್ಳಿಯಲ್ಲಿ 10-20 ಮನೆಯವರು ಸೇರಿ ಆಚರಿಸುವ ಸಾರ್ವಜನಿಕ ಗಜಾನನೋತ್ಸವಕ್ಕೂ ಅನುಮತಿ ಪಡೆಯಲು ಪೊಲೀಸ್ ಠಾಣೆ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಿದೆ ಎಂಬ ದೂರುಗಳಿವೆ.

‘ಗ್ರಾಮಾಂತರ ಪ್ರದೇಶದಲ್ಲಿ ವಿಶೇಷವಾಗಿ ಯುವಕರ ಕೊರತೆ ಇದೆ. ಗಜಾನನೋತ್ಸವದ ಸಿದ್ದತೆಯ ನಡುವೆ ಅನುಮತಿ ಪಡೆಯಲು ಅಡ್ಡಾಡುವುದು ಹೊರೆಯಾಗಿ ಪರಿಣಮಿಸಿದೆ’ ಎಂಬುದಾಗಿ ವಜ್ರಳ್ಳಿ ಗಜಾನನೋತ್ಸವ ಸಮಿತಿ ಅಧ್ಯಕ್ಷ ಜಿ.ಸತೀಶ್ ದೂರಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ