
ಕೊಡಿಗೇನಹಳ್ಳಿ: ಸೀಮೆಜಾಲಿ ಗಿಡಗಳಿಂದ ನದಿ, ಕೆರೆ ಪಾತ್ರಕ್ಕೆ ಕಂಟಕ
ಕೊಡಿಗೇನಹಳ್ಳಿ: ಸೀಮೆಜಾಲಿ ಗಿಡಗಳು ನದಿ, ಕೆರೆ, ಕುಂಟೆಗಳನ್ನು ಆವರಿಸಿಕೊಂಡಿದ್ದು, ಜಲಮೂಲಗಳ ಅಸ್ತಿತ್ವವೇ ಗುರುತಿಸದಂತಾಗಿದೆ. ಇದರಿಂದಾಗಿ ಅಪರಾಧ ಚಟುವಟಿಕೆ, ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ತಕ್ಷಣವೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನೀರಿನಿಂದ ತುಂಬಿ ತುಳುಕುತ್ತಿದ್ದ ಜಯಮಂಗಲಿ, ಕುಮದ್ವತಿ ಇಂದು ಸೀಮೆಜಾಲಿ ಕಾಡಾಗಿ ಮಾರ್ಪಟ್ಟಿವೆ. ನದಿ ಪಾತ್ರದಲ್ಲಿ ನೀರಿನ ಹರಿವಿನ ದಾರಿಯೇ ಕಾಣದಾಗಿದೆ. ಸೀಮೆಜಾಲಿ ತೆರವುಗೊಳಿಸಿದರೆ ಮಾತ್ರ ನದಿ ಪಾತ್ರ ಕಾಣಲು ಸಾಧ್ಯ ಎಂಬಂತಾಗಿದೆ.
ಮಧುಗಿರಿ ತಾಲ್ಲೂಕಿನಲ್ಲಿನ ಬಹುತೇಕ ಕೆರೆಗಳ ದಂಡೆ, ಏರಿ, ಕೋಡಿಗಳನ್ನು ಸೀಮೆಜಾಲಿ ಆಕ್ರಮಿಸಿಕೊಂಡಿದೆ. ಕೆಲವು ಕಡೆ ಕೆರೆಯೊಳಗೇ ದಟ್ಟವಾಗಿ ಬೆಳೆದಿರುವುದರಿಂದ ಕೆರೆಯ ಕುರುಹೇ ಕಾಣದಂತಾಗಿದೆ.
ದಟ್ಟವಾಗಿ ಪೊದೆಯಾಗಿ ಬೆಳೆದಿರುವ ಸೀಮೆಜಾಲಿ ಕುಡುಕರಿಗೆ, ಜೂಜಾಟ, ಕಳ್ಳತನದಂತಹ ಅಪರಾಧ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಅಡಗುತಾಣವಾಗಿದೆ. ಸಂಜೆಯಾದರೆ ಕೆರೆ, ನದಿ ಪಾತ್ರದ ಕಡೆ ಹೋಗಲು ಜನರು ಭಯಪಡುತ್ತಾರೆ. ಮಹಿಳೆಯರು, ಮಕ್ಕಳು ಅತ್ತ ಸುಳಿಯದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಾಡುಹಂದಿ, ನರಿ, ಹಾವುಗಳಂತಹ ವಿಷ ಜಂತುಗಳು ಈ ಪೊದೆಗಳಲ್ಲಿ ವಾಸ ಮಾಡುತ್ತಿದ್ದು, ಪಕ್ಕದ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ರೈತರು ರಾತ್ರಿ ವೇಳೆ ಜಮೀನಿಗೆ ನೀರು ಹಾಯಿಸಲು ಹೋಗಲೂ ಭಯಪಡುವಂತಾಗಿದೆ. ಈ ಸೀಮೆಜಾಲಿ ನಮ್ಮ ಜಲಮೂಲವನ್ನೇ ನುಂಗಿ ಹಾಕಿದೆ. ಅಂತರ್ಜಲಕ್ಕೂ ಮಾರಕವಾಗಿದೆ. ಸರ್ಕಾರ ಯಾವುದಾದರೂ ಯೋಜನೆಯಡಿ ತೆರವುಗೊಳಿಸಬೇಕು ಎಂದು ರೈತ ಮಂಜುನಾಥ್ ಒತ್ತಾಯಿಸಿದ್ದಾರೆ.