
ಬಾಗೇಪಲ್ಲಿ: ಗುರುಭವನ ನಿರ್ಮಾಣಕ್ಕೆ ಮತ್ತೆ ಗ್ರಹಣ
ಬಾಗೇಪಲ್ಲಿ: ಶಿಕ್ಷಕರು, ಶಿಕ್ಷಣ ಇಲಾಖೆಯ ಸಭೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲಕ್ಕಾಗಿ ಈಗಾಗಲೇ ಪಟ್ಟಣದಲ್ಲಿ ಗುರುಭವನ ನಿರ್ಮಾಣವಾಗಬೇಕಿತ್ತು. ಆದರೆ, ಇಚ್ಛಾಶಕ್ತಿ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಗುರುಭವನ ನಿರ್ಮಾಣವಾಗಬೇಕೆಂಬ ಕನಸು ಇನ್ನೂ ಕನಸಾಗಿಯೇ ಉಳಿದಿದೆ.
ತಾಲ್ಲೂಕು ಕೇಂದ್ರದಲ್ಲಿ 20 ವರ್ಷಗಳ ಹಿಂದೆ ಗುರುಭವನ ಕಟ್ಟಡ ನಿರ್ಮಾಣಕ್ಕೆ ಕಾಶಾಪುರ ಮತ್ತು ಶ್ರೀರಾಮರೆಡ್ಡಿ ಬಡಾವಣೆ ಬಳಿ ಜಾಗ ಗುರುತಿಸಿ, ಭೂಮಿಪೂಜೆಯನ್ನು ನೆರವೇರಿಸಲಾಗಿತ್ತು. ಆದರೆ, ಈ ಸ್ಥಳವು ಪಟ್ಟಣದಿಂದ ದೂರ ಇದೆ ಎಂಬ ಕಾರಣಕ್ಕೆ ಶಿಕ್ಷಕರ ಸಂಘಟನೆ ಮತ್ತು ಶಿಕ್ಷಕರು ಗುರುಭವನ ನಿರ್ಮಾಣಕ್ಕೆ ಅಡ್ಡಿಪಡಿಸಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸಿ, ಗುರುಭವನ ಕಟ್ಟಡ ನಿರ್ಮಿಸಬೇಕು. ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾರ್ವಜನಿಕರ ಕಾರ್ಯಕ್ರಮಗಳನ್ನು ಆಯೋಜಿಸಲು ಗುರುಭವನ ನಿರ್ಮಿಸಿಕೊಡುವಂತೆ ಅಧಿಕಾರಿಗಳು ಮತ್ತು ಶಾಸಕ ಸುಬ್ಬಾರೆಡ್ಡಿ ಅವರಿಗೆ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಆಟದ ಮೈದಾನದಲ್ಲಿ ಗುರುಭವನ ನಿರ್ಮಾಣಕ್ಕಾಗಿ 2025ರ ಸೆಪ್ಟೆಂಬರ್ 5ರಂದು ಭೂಮಿಪೂಜೆ ನೆರವೇರಿಸಲಾಗಿತ್ತು. ಆಗ 2026ರ ಶಿಕ್ಷಕರ ದಿನಾಚರಣೆಯನ್ನು ಹೊಸದಾಗಿ ನಿರ್ಮಾಣವಾಗಲಿರುವ ಗುರುಭವನದಲ್ಲೇ ಆಚರಿಸಲಾಗುವುದು ಎಂದು ಭಾಷಣ ಮಾಡಲಾಗಿತ್ತು. 2026ರ ಶಿಕ್ಷಕರ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಗುರುಭವನ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
ಸರ್ಕಾರಿ ಪ್ರಾಥಮಿಕ, ಪ್ರೌಢಶಿಕ್ಷಣದ ಶಿಕ್ಷಕರ ಸಂಘಟನೆಗಳ ನಡುವಿನ ಸಮನ್ವಯ ಕೊರತೆಯೇ ಗುರುಭವನ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಪ್ರತಿವರ್ಷ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಂದಿನ ಶಿಕ್ಷಕರ ದಿನವನ್ನು ಹೊಸದಾಗಿ ನಿರ್ಮಾಣವಾಗಲಿರುವ ಗುರುಭವನದಲ್ಲೇ ಆಚರಿಸಬೇಕು ಎಂಬುದು ಭಾಷಣಕ್ಕೆ ಸೀಮತವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಹೇಳಿದರು.
‘ನೂತನ ಗುರುಭವನದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಅನುದಾನದ ಕೊರತೆಯಿಂದ ಈ ವರ್ಷ ಶಿಕ್ಷಕರ ದಿನಾಚರಣೆಯನ್ನು ಹೊಸ ಕಟ್ಟಡದಲ್ಲಿ ಆಚರಿಸಲಾಗದು. 2027ರ ಸೆ. 5ರ ಶಿಕ್ಷಕರ ದಿನಾಚರಣೆಯನ್ನು ಹೊಸ ಗುರುಭವನದ ಕಟ್ಟಡದಲ್ಲಿ ಆಚರಿಸಲಾಗುವುದು’ ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ವೆಂಕಟರಾಯಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-16-1180363894