
ಸಾಧನ ಕೆರೆಗೆ ಕೊಳಚೆ ನೀರು ಸೇರಿ ದುರ್ವಾಸನೆ
ಧಾರವಾಡ: ನಗರದ ಸಾಧನ ಕೆರೆಗೆ ಸುತ್ತಲಿನ ಪ್ರದೇಶಗಳ ಚರಂಡಿ ನೀರು ಸೇರುತ್ತಿದ್ದು, ಕೆರೆ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ.
ಈ ಕೆರೆ ಕೊಳಕು ನೀರಿನಿಂದ ಕೂಡಿದೆ. ಪೊಲೀಸ್ ಹೆಡ್ ಕ್ವಾರ್ಟರ್ಸ್, ಸಾಧನಕೇರಿ, ಮಂಗಳಗಟ್ಟಿ ಪ್ಲಾಟ್, ಸಿದ್ಧಾರ್ಥ ಕಾಲೊನಿ ಹಾಗೂ ಕೆಸಿಡಿ ವೃತ್ತ, ಜರ್ಮನ್ ಆಸ್ಪತ್ರೆ ಸುತ್ತಲಿನ ಪ್ರದೇಶಗಳ ಚರಂಡಿ ನೀರು ನೇರವಾಗಿ ಕೆರೆ ಹರಿಯುತ್ತದೆ. ಸುಮಾರು 10 ಎಕರೆ ವಿಸ್ತೀರ್ಣದ ಈ ಸುಂದರ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ.
ಕೆರೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಪೊಟ್ಟಣಗಳು, ತ್ಯಾಜ್ಯಗಳು ತೇಲುತ್ತಿವೆ ಕೊಳಚೆ ನೀರು ಜಲಚರಗಳಿಗೆ ಕಂಟಕವಾಗಿದೆ. ಮುಂಜಾನೆ ಮತ್ತು ಸಂಜೆ ವಾಯವಿಹಾರಕ್ಕೆ ಈ ಕೆರೆ ಪ್ರದೇಶಕ್ಕೆ ಬರುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.
‘ಈ ಹಿಂದೆ ಕೆರೆಯ ಅಭಿವೃದ್ಧಿ ಹಾಗೂ ಉದ್ಯಾನದ ಸೌಂದರ್ಯೀಕರಣಕ್ಕಾಗಿ ₹3.75 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿ ಆರಂಭಿಸಿದ್ದ ಲ್ಯಾಂಡ್ ಆರ್ಮಿ ಸಂಸ್ಥೆ ಅರೆಬರೆ ಕಾಮಗಾರಿ ನಿರ್ವಹಿಸಿದೆ. ಕೆರೆಯ ಹೂಳು ತೆಗೆಯುವುದು, ಚರಂಡಿ ನೀರು ಕೆರೆಗೆ ಹರಿಯುವುದನ್ನು ತಪ್ಪಿಸುವುದು, ಉದ್ಯಾನ ಅಭಿವೃದ್ಧಿ ಕಾಮಗಾರಿ ಸರಿಯಾಗಿ ಮಾಡಿಲ್ಲ’ ಎಂದು ಪಾಲಿಕೆ ಸದಸ್ಯೆ ಅನಿತಾ ಚಳಗೇರಿ ದೂರಿದರು.
ಹಲವು ವರ್ಷಗಳಿಂದ ಈ ಕೆರೆಯನ್ನು ನೋಡುತ್ತಿದ್ದೇವೆ. ಹಿಂದೆ ಇಲ್ಲಿನ ವಾತಾವರಣ ಹಿತಕರವಾಗಿತ್ತು. ಬೆಳಿಗ್ಗೆ-ಸಂಜೆ ಹಕ್ಕಿಗಳ ಕಲರವ, ಸಾಲುಗಟ್ಟಿ ಹಾರಾಡುತ್ತಿದ್ದದು ಮನೋಹರವಾಗಿತ್ತು. ಈಗ ಕೆರೆಯ ಹತ್ತಿರವೂ ನಿಲ್ಲಲು ಸಾಧ್ಯವಾಗದಷ್ಟು ದುರ್ವಾಸನೆ ಇದೆ.
ದ.ರಾ.ಬೇಂದ್ರೆ ಅವರ ಮನೆ ಮುಂದೆಯೇ ಇರುವ, ಸಾಹಿತ್ಯ ರಚನೆಗೆ ಅವರಿಗೆ ಸ್ಫೂರ್ತಿಯಾಗಿದ್ದ ಸಾಧನಕೆರೆ ಅಂದ ಹೆಚ್ಚಿಸಬೇಕಿದೆ. ಕೆರೆಗೆ ಚರಂಡಿ ನೀರು ಸೇರದಂತೆ ತಡೆ, ವ್ಯವಸ್ಥಿತ ನಿರ್ವಹಣೆಗೆ ಪಾಲಿಕೆ ಕ್ರಮ ವಹಿಸಬೇಕು. ಚರಂಡಿ ನೀರಿಗೆ ‘ಡೈವರ್ಷನ್ ಚಾನೆಲ್’ ನಿರ್ಮಿಸಿ ಕೊಳಚೆ ನೀರು ಕೆರೆಗೆ ಸೇರದಂತೆ ಶಾಶ್ವತ ತಡೆ ಒಡ್ಡಬೇಕು ಎಂಬುದು ಜನರ ಆಗ್ರಹವಾಗಿದೆ.
ಮಲಿನ ನೀರಿನಲ್ಲೇ ಬೋಟಿಂಗ್
ನಿಂತ ನೀರು ಸೊಳ್ಳೆ, ಕ್ರಿಮಿಗಳ ಉತ್ಪತ್ತಿ ತಾಣವಾಗಿದೆ. ಕೆರೆಯ ಮಲಿನ ನೀರಿನಲ್ಲಿಯೇ ಬೋಟಿಂಗ್ ಆರಂಭಿಸಲಾಗಿದೆ. ಸಣ್ಣ ಮಕ್ಕಳು ಬೋಟಿಂಗ್ನಲ್ಲಿ ನೀರಿನಲ್ಲಿ ಆಟವಾಡುತ್ತಾರೆ. ಕೊಳಕು ನೀರಿನಿಂದ ರೋಗಗಳು ತಗುಲುವ ಸಾಧ್ಯತೆ ಇರುತ್ತದೆ.
ಸಾಧನಕೆರೆಗೆ ಕೊಳಚೆ ನೀರು ಸೇರಿ ಪೂರ್ತಿ ಮಲಿನವಾಗಿದೆ. ದುರ್ವಾಸನೆ ಸಮಸ್ಯೆ ಇದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ. ಚರಂಡಿ ನೀರು ಕೆರೆಗೆ ಸೇರದಂತೆ ಪಾಲಿಕೆಯವರು ಕ್ರಮವಹಿಸಬೇಕು ವೆಂಕಟೇಶ ದೇಸಾಯಿ, ಸ್ಥಳೀಯ ನಿವಾಸಿ