
ಹಗರಿಬೊಮ್ಮನಹಳ್ಳಿ: ರಸ್ತೆಗಳಲ್ಲಿ ಗುಂಡಿ, ಪ್ರಾಣ ಕೈಯಲ್ಲಿ...
ಹಗರಿಬೊಮ್ಮನಹಳ್ಳಿ: ಕುಡಿಯುವ ನೀರಿನ ಪೈಪ್ಲೈನ್, ಗ್ಯಾಸ್ ಪೈಪ್ಲೈನ್ಗಳಿಗಾಗಿ ಪಟ್ಟಣದ 23 ವಾರ್ಡ್ಗಳ ಎಲ್ಲ ಮುಖ್ಯ ಮತ್ತು ಒಳರಸ್ತೆಗಳನ್ನು ಅಗೆದು ಹಾಕಲಾಗಿದ್ದು, ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ಬಂದೊದಗಿದೆ.
ವರ್ಷದ ಹಿಂದೆಯಷ್ಟೇ ನಿರ್ಮಿಸಿದ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಗಳನ್ನು ಯಂತ್ರಗಳಿಂದ ಮನಸೋ ಇಚ್ಛೆ ಕಿತ್ತು ಹಾಕಲಾಗಿದೆ. ಸೌಲಭ್ಯಗಳ ಹೆಸರಿನಲ್ಲಿ ವಿವಿಧ ಏಜೆನ್ಸಿಗಳು ಮತ್ತು ಗುತ್ತಿಗೆದಾರರು ರಸ್ತೆಗಳು ಮತ್ತು ಚರಂಡಿಗಳನ್ನು ಒಡೆಯುತ್ತಲೇ ಇದ್ದಾರೆ.
ಕೇಂದ್ರ ಸರ್ಕಾರದ ಅಮೃತ್-2 ಹಾಗೂ ಜಲಜೀವನ್ ಮಿಷನ್ ಕುಡಿಯುವ ನೀರಿನ ಪೈಪ್ಲೈನ್, ಬಿಪಿಸಿಎಲ್ನ ಗ್ಯಾಸ್ ಪೈಪ್ಲೈನ್ ಹೆಸರಿನಲ್ಲಿ ಪಟ್ಟಣದಲ್ಲಿರುವ ಸಿಮೆಂಟ್ ಕಾಂಕ್ರೀಟ್ ಮತ್ತು ಡಾಂಬರ್ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದಿದ್ದರಿಂದ ಗುಂಡಿಗಳು ಬಿದ್ದಿವೆ. ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ಬೀಳುವುದು, ಕೈಕಾಲು ಮುರಿದುಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ.
‘ಹಿಂದೆ ಅಳವಡಿಸಲಾಗಿದ್ದ ಕುಡಿಯುವ ನೀರಿನ ಪೈಪ್ಗಳು ಒಡೆದು ಹೋಗುತ್ತಿವೆ, ನೀರು ಪೋಲಾಗಿ ಹರಿಯುತ್ತಿದ್ದರೂ ಯಾರೂ ಗಮನಿಸುತ್ತಿಲ್ಲ, ದುರಸ್ತಿ ಮಾಡಬೇಕಾದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ, ಮನೆಗಳ ಮಾಲೀಕರು ದುರಸ್ತಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದು 22ನೇ ವಾರ್ಡ್ನ ಪಿ.ವೆಂಕಟೇಶ್ ತಮ್ಮ ಅಳಲು ತೋಡಿಕೊಂಡರು.
ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆಯ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ರಸ್ತೆಗಳನ್ನೆಲ್ಲಾ ವಿರೂಪಗೊಳಿಸಲಾಗಿದೆ. ಹಗಲು, ರಾತ್ರಿ ಎನ್ನದೇ ರಸ್ತೆಗಳನ್ನು ಅಗೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಚೆಗೆ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ದೀಪಕ್ ಸಾ ಕಠಾರೆ, ಪೈಪ್ಲೈನ್ ಕಾಮಗಾರಿಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು, ಕಳಪೆ ಕಾಮಗಾರಿಗಳ ವಿರುದ್ಧ ಗಲಾಟೆ ಮಾಡಿದ್ದರು, ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿದೆ ಎಂದು ಆರೋಪಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-25-1465279910