
ಮೈಸೂರಲ್ಲಿ ಚಿಕ್ಕಣ್ಣ ಮದುವೆ ಸಂಭ್ರಮ
ಹಾಸ್ಯನಟ ಚಿಕ್ಕಣ್ಣ ಹಾಗೂ ಕೆ.ಸಿ.ಪಾವನಾ ಅವರ ವಿವಾಹ ಭಾನುವಾರ ಮೈಸೂರಿನ ಸ್ಪೆಕ್ಟ್ರಾ ಕಲ್ಯಾಣಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಸ್ಯಾಂಡಲ್ವುಡ್ನ ಹಲವು ಪ್ರಮುಖರ ಕುಟುಂಬವೇ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಶನಿವಾರ ಸಂಜೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ನೀಲಿ ಬ್ಲೇಸರ್ ತೊಟ್ಟು ಮಿಂಚಿದರೆ, ಪಾವನಾ ಸಹ ನೀಲಿ ಬಣ್ಣದ ಧಿರಿಸಿನಲ್ಲಿ ಕಂಗೊಳಿಸಿದರು. ನೆಂಟರು, ಸ್ನೇಹಿತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಇಬ್ಬರೂ ಭಾನುವಾರ ಸಪ್ತಪದಿ ತುಳಿದರು.
ನಟರಾದ ಉಪೇಂದ್ರ, ಗಣೇಶ್, ಡಾಲಿ ಧನಂಜಯ, ಶ್ರೀಮುರುಳಿ, ಶರಣ್, ಪ್ರಥಮ್, ರಂಗಾಯಣ ರಘು, ಮಂಡ್ಯ ರಮೇಶ್, ‘ಮುಖ್ಯಮಂತ್ರಿ’ ಚಂದ್ರು, ನಿರ್ದೇಶಕ ತರುಣ್–ಸೋನಾಲ್ ಮೊಂಥೆರೊ ದಂಪತಿ, ನಟಿಯರಾದ ಸುಧಾರಾಣಿ, ತಾರಾ, ಆದಿತಿ ಪ್ರಭುದೇವ, ರಚನಾ ರೈ, ಮೇಘನಾ, ಸಂಗೀತ ನಿರ್ದೇಶಕ ಹಂಸಲೇಖ, ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಜಿ.ಟಿ.ದೇವೇಗೌಡ ಸೇರಿ ಹಲವು ಪ್ರಮುಖರು ಭೇಟಿ ಕೊಟ್ಟು ಸಂಭ್ರಮ ಹೆಚ್ಚಿಸಿದರು.
ಮೈಸೂರು ಸಮೀಪದ ಬಲ್ಲಹಳ್ಳಿ ಗ್ರಾಮದ ಚಿಕ್ಕಣ್ಣ ಅವರು ಕಿರುಪಾತ್ರಗಳಿಂದ ನಟನೆ ಆರಂಭಿಸಿ ಹಾಸ್ಯನಟನಾಗಿ ಛಾಪು ಮೂಡಿಸಿ ಈ ನಾಯಕನಟನಾಗಿ ಬೆಳೆದಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದವರಾದ ಪಾವನಾ ಎಂಜಿನಿಯರಿಂಗ್ ಪದವೀಧರೆ.