
ಬಿಗ್ ಬಾಸ್ಗೆ ಹೋಗುವ ಅವಕಾಶ ಕಳೆದುಕೊಂಡ ಲಾವಣ್ಯ ಕುಮಾರಿಗೆ ಒಲಿದ ಅದೃಷ್ಟ...
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13, ಸೆಪ್ಟೆಂಬರ್ 6ರಿಂದ ಆರಂಭವಾಗುತ್ತಿದೆ. ಈ ಬಾರಿಯ ಬಿಗ್ ಬಾಸ್ ಮನೆಗೆ ಮೂವರು ಜನಸಾಮಾನ್ಯರು ಎಂಟ್ರಿ ಕೊಡುತ್ತಿದ್ದಾರೆ. ಅವರು ಯಾರೆಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಗೊತ್ತಾಗಲಿದೆ.
ಒಮ್ಮೆಯಾದರೂ ಬಿಗ್ ಬಾಸ್ನಲ್ಲಿ ಭಾಗವಹಿಸಬೇಕೆಂಬುದು ಅದೆಷ್ಟೋ ಜನರ ಆಸೆ. ಅದಕ್ಕಾಗಿಯೇ ಈ ಬಾರಿ ಸಾಮಾನ್ಯ ಜನರಿಗೆ ಅವಕಾಶ ನೀಡುವ ಸಲುವಾಗಿಯೇ ಬಿಗ್ ಬಾಸ್ ಅಗ್ನಿ ಪರೀಕ್ಷೆಯನ್ನು ಮಾಡಿತು. ಅದರಲ್ಲಿ ತಮ್ಮ ಮುಗ್ಧತೆಯಿಂದಲೇ ಎಲ್ಲರ ಮನ ಗೆದ್ದಿದ್ದ ಸ್ಪರ್ಧಿ ಲಾವಣ್ಯ ಕುಮಾರಿಗೆ ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ ಸಿಗದಿದ್ದರೂ ಅನಿರೀಕ್ಷಿತವಾಗಿ ₹5 ಲಕ್ಷ ನಗದು ಬಹುಮಾನ ಮತ್ತು ಶಿಕ್ಷಣದ ನಂತರ ಉದ್ಯೋಗದ ಅವಕಾಶ ಸಿಕ್ಕಿದೆ.
ಬಿಗ್ ಬಾಸ್ಗೆ ಬಂದರೆ ಅದೃಷ್ಟ ಹೇಗೆ ಬೇಕಾದರೂ ಬದಲಾಗುತ್ತದೆ ಎಂಬುದಕ್ಕೆ ಕುಮಾರಿ ಸಾಕ್ಷಿಯಾಗಿದ್ದಾರೆ. ಕಾರ್ಯಕ್ರಮದ ಪ್ರಾಯೋಜಕರಾದ ‘ಇಕೋ ಪ್ಲ್ಯಾನೆಟ್ ಎಲಿವೇಟರ್’ ಸಂಸ್ಥೆಯು ಕುಮಾರಿಗೆ ₹5 ಲಕ್ಷ ನಗದನ್ನು ನೀಡಿದೆ. ಇಷ್ಟೇ ಅಲ್ಲದೆ, ಕುಮಾರಿಯ ಶಿಕ್ಷಣ ಪೂರ್ಣಗೊಂಡ ಬಳಿಕ ಸಂಸ್ಥೆಯ ವತಿಯಿಂದ ಉದ್ಯೋಗದ ಆಫರ್ ಘೋಷಿಸಲಾಗಿದೆ. ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಸಂಸ್ಥೆಯ ಶಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶವನ್ನು ಕುಮಾರಿಗೆ ನೀಡಲಾಗಿದೆ.
ನಾನು ಹಳ್ಳಿ ಹುಡುಗಿ ಕುಮಾರಿ ಅಂತ ಹೇಳಿಕೊಂಡು ಎಂಟ್ರಿ ಕೊಟ್ಟಿದ್ದ ಲಾವಣ್ಯ ಕುಮಾರಿ ಮುಗ್ಧವಾಗಿ ಮಾತನಾಡಿ ನಾಲ್ಕೂ ತೀರ್ಪುಗಾರರ ಮನಸನ್ನು ಗೆದ್ದಿದ್ದರು. ‘ಸ್ಟಾರ್ ಕಂಟೆಂಡರ್’ ಆಗಿ ಸೆಲೆಕ್ಟ್ ಕೂಡ ಆಗಿದ್ದರು. ಆದರೆ ಅನಾರೋಗ್ಯದ ಕಾರಣ ಲಾವಣ್ಯ ಕುಮಾರಿ ಅವರು ಬಿಗ್ ಬಾಸ್ ಆಟ ಮುಂದುವರಿಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕುಮಾರಿ ಬಿಗ್ ಬಾಸ್ನಿಂದ ಹೊರಕ್ಕೆ ಹೋಗುತ್ತಿದ್ದಾರೆ.
ಕುಮಾರಿ ಅಳುತ್ತಲೇ ‘ನಾನು ಹುಟ್ಟಿದಾಗಿನಿಂದ ಒಂದು ದಿನನೂ ಬೆಂಗಳೂರು ನೋಡೇ ಇರಲಿಲ್ಲ. ಹಾಗಾಗಿ ನಾನು ಊರಿಂದ ಬರುವಾಗ ಎಲ್ಲವನ್ನು ಎಂಜಾಯ್ ಮಾಡಿಕೊಂಡು ಬಂದೆ. ನಾನು ವಾಪಸ್ ಹೋದ್ರೆ ಯಾವಾಗ ಬರುತ್ತೇನೆ ಗೊತ್ತಿಲ್ಲ. ಇದು ಲಾಸ್ಟ್ ಆಗುತ್ತದೆ ಅನ್ನೋದು ನನಗೆ ಬೇಸವಾಗುತ್ತಿದೆ’ ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನು, ಕುಮಾರಿ ಮಾತಿಗೆ ಸಹ ಸ್ಪರ್ಧಿಗಳು ಕೂಡ ಕಣ್ಣೀರಿಟ್ಟಿದ್ದಾರೆ. ತೀರ್ಪುಗಾರರಾದ ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ, ವಿನಯ್ ಗೌಡ ಹಾಗೂ ನಟಿ ಶ್ರುತಿ ಅವರು ಕುಮಾರಿಗೆ ಧೈರ್ಯ ತುಂಬಿ ಕಳುಹಿಸಿಕೊಟ್ಟಿದ್ದಾರೆ.