
ಹಾವೇರಿಯಲ್ಲಿನ ಪಂಜಮಸಾಲಿ ಸಂಘದ ಸಭೆಗೆ ಬಂದು ಸಲಹೆ ಕೊಡಿ ಎಂದ ಮಾಜಿ ಅಧ್ಯಕ್ಷ
ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆ ಇದೇ 19ರಂದು ಹಾವೇರಿಯ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸಂಘದ ಸದಸ್ಯರು ಯಾವುದೇ ಗೊಂದಲ ಅಥವಾ ಅಪಪ್ರಚಾರಗಳಿಗೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ನಿಕಟಪೂರ್ವ ಅಧ್ಯಕ್ಷರು ಮನವಿ ಮಾಡಿದ್ದಾರ.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷರಾದ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು, ನಾಗನಗೌಡ ಹಾಗೂ ಜಿ.ಪಿ. ಪಾಟೀಲ್, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಯಾವುದೇ ವ್ಯಕ್ತಿ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಸ್ಥಾಪನೆಯಾದ ಸಂಸ್ಥೆಯಲ್ಲ. ಇದು ಇಡೀ ಸಮಾಜದ ಸಮಗ್ರ ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು ರೂಪುಗೊಂಡ ಸಂಘ ಎಂದರು.
ಇತ್ತೀಚಿನ ದಿನಗಳಲ್ಲಿ ಹರಿಹರ ಪೀಠದಲ್ಲಿ ನಡೆದ ಕೆಲವು ಘಟನೆಗಳಿಂದ ಸಮಾಜದ ಜನರಲ್ಲಿ ಗೊಂದಲ ಉಂಟಾಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪೀಠ, ಟ್ರಸ್ಟ್ ಹಾಗೂ ಸಂಘದ ವಿಚಾರಗಳನ್ನು ಪರಸ್ಪರ ಜೋಡಿಸಿ ಗೊಂದಲ ಸೃಷ್ಟಿಸುವ ಮತ್ತು ಅಪಪ್ರಚಾರ ಮಾಡುವ ಯತ್ನ ನಡೆಸುತ್ತಿವೆ ಎಂದು ಅವರು ಆರೋಪಿಸಿದರು.
ಸಂಘದ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಅದು ಸಂಘದ ಸಂವಿಧಾನ, ನಿಯಮಾವಳಿ ಹಾಗೂ ಸದಸ್ಯರ ಸಾಮಾನ್ಯ ಸಭೆಯ ಮೂಲಕವೇ ನಡೆಯಬೇಕು. ಸಂಘದ ಸದಸ್ಯರೇ ಸಂಘದ ಪ್ರಮುಖ ಶಕ್ತಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ವೈಯಕ್ತಿಕ ಅಭಿಪ್ರಾಯಗಳು ಮತ್ತು ಅಪಪ್ರಚಾರಗಳನ್ನು ನಂಬದಂತೆ ಅವರು ವಿನಂತಿಸಿದರು.
ಸಂಘದ ಭವಿಷ್ಯದ ಬೆಳವಣಿಗೆ ಹಾಗೂ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಸದಸ್ಯರು ಈ ಮಹಾಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಮನವಿ ಮಾಡಿದರು.
ಸಂಘದ ಹಾಲಿ ಹಂಗಾಮಿ ಅಧ್ಯಕ್ಷ ಶಂಕರ್ ಆರ್. ಬಿಸರಹಳ್ಳಿ, ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ, ಯುವ ಘಟಕದ ರಾಜ್ಯ ಅಧ್ಯಕ್ಷ ಕಿಚಿಡಿ ಕೊಟ್ರೇಶ್, ಪ್ರಮುಖರಾದ ಸಿದ್ಧೇಶ್ ಹಣಸಿ, ಕುಮಾರಸ್ವಾಮಿ, ಷಣ್ಮುಖಪ್ಪ, ಸಿದ್ಧೇಶ್ ಬೇಗೂರು, ವಸಂತ ಉಲ್ಲತ್ತಿ, ರಶ್ಮಿ ಕುಂಕದ, ಶಿವಕುಮಾರ ಬಳಗಾರ ಇದ್ದರು.