
ಕೆಪಿಎಸ್ಸಿ ಹಗರಣದ ಪಾಲಿನ ಬಗ್ಗೆ ಬಿಜೆಪಿ ಪಾದಯಾತ್ರೆ ಮಾಡಲಿ: ಪ್ರಿಯಾಂಕ್ ಖರ್ಗೆ
ಬೀದರ್: ‘ಕೆಪಿಎಸ್ಸಿ ಹಗರಣದಲ್ಲಿನ ಪಾಲಿನ ಬಗ್ಗೆ ಬಿಜೆಪಿಯವರು ಪಾದಯಾತ್ರೆ ಮಾಡಬೇಕು. ಜೊತೆಗೆ ಕೆಪಿಎಸ್ಸಿಯಲ್ಲಿ ಏನೇನು ಆಗುತ್ತಿದೆ ಎನ್ನುವುದನ್ನು ಜನರಿಗೆ ತಿಳಿಸಲಿ’ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಿಜೆಪಿ ಪಾದಯಾತ್ರೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಬಿಜೆಪಿಯಲ್ಲಿರುವವರು ಎಲ್ಲರೂ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ದುಡ್ಡಿಗೋಸ್ಕರ ಯುವಕರ ಭವಿಷ್ಯ ಮಾರಾಟಕ್ಕಿಟ್ಟಿದ್ದಾರೆ. ಬಿಜೆಪಿಯ ನಂಟಿರುವವರು ಕೆಪಿಎಸ್ಸಿ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಕೆಪಿಎಸ್ಸಿ ಅಧ್ಯಕ್ಷ, ಸದಸ್ಯ, ಮದ್ಯವರ್ತಿ ಎಲ್ಲರೂ ಬಿಜೆಪಿ ಪಕ್ಷದ ಕಾರ್ಯಕರ್ತರು. ಈ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಕೆಪಿಎಸ್ಸಿ ಅಕ್ರಮದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ಮಾತನಾಡುವುದಲ್ಲ. ಮಾಜಿ ಮುಖ್ಯಮಂತ್ರಿ ತೂಕದ ಮಾತನಾಡಬೇಕು. ಕುಮಾರಸ್ವಾಮಿ ಅವರು ಕೇವಲ ಹಿಟ್ ಆ್ಯಂಡ್ ರನ್ ಮಾಡುತ್ತಾರೆ. ಪರೀಕ್ಷೆ ಮಾಡುವ ಜವಾಬ್ದಾರಿ ಕೆಪಿಎಸ್ಸಿಯದ್ದು. ನಾನೇನು ರೆಸಾರ್ಟ್ಗೆ ಹೋಗಿ ನಾನು ಪರೀಕ್ಷೆ ಬರೆಸಿದ್ದೀನಾ? ಅಥವಾ ಮೈತ್ರಿಕೂಟದ ನಾಯಕರು ಬರೆಸಿದ್ದಾ? ಒಂದು ದಾಖಲೆ ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬಿಜೆಪಿ, ಜೆಡಿಎಸ್ನವರು ಅಸ್ತಿತ್ವದಲ್ಲಿ ಇರಲು ಮಾತನಾಡುತ್ತಾರೆ. ಆರ್ಎಸ್ಎಸ್ನಲ್ಲಿ ಅಂಕ ಪಡೆಯುವುದಕ್ಕಾಗಿ ನನ್ನ ಹೆಸರು ಬಳಸುತ್ತಾರೆ ಎಂದು ಕುಟುಕಿದರು.
ವಿಧಾನಸಭೆಯ ಅಧಿವೇಶನದಲ್ಲಿ ಬರ ಹಾಗೂ ನಾಗೇಂದ್ರ ವಿಚಾರದ ಕುರಿತು ಚರ್ಚೆ ಮಾಡೋಣ ಅಂತ ಕರೆದಿದ್ದೇವು. ಆದರೆ, ಅವರು ಚರ್ಚೆಗೆ ಬರಲಿಲ್ಲ. ಆಗ ಕತ್ತೆ ಕಾಯುತ್ತಿದ್ದಾರಾ?. ಪಕ್ಷಕ್ಕೆ ಮುಜುಗರ ಆಗಬಾರದು ಅಂತ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ನಾಗೇಂದ್ರ ವಿಚಾರದಲ್ಲಿ ಸಿಬಿಐ ಹೇಗೆ ನಡೆದುಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ' ಎಂದರು.
ಬರದ ವಿಚಾರವಾಗಿ ಸಿಎಂ, ಡಿಸಿಎಂ ನವದೆಹಲಿಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಕೇಂದ್ರಕ್ಕೆ ಪತ್ರ ಕೂಡ ಬರೆದಿದ್ದೇವೆ ಎಂದರು.
‘ಮುಸ್ಲಿಮರು ನಮ್ಮ ದೇಶದಲ್ಲೇ ಇರಬೇಕು. ಅವರು ಇರದೇ ಈ ದೇಶ ಕಟ್ಟುವುದಕ್ಕೆ ಆಗಲ್ಲ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅಮೆರಿಕದಿಂದ ಡಾಲರ್ಸ್ ದೇಣಿಗೆ ಬಂದಾಗ ಐಕ್ಯತೆ ನೆನಪಾಗುತ್ತೆ. ಇಲ್ಲಿಗೆ ಬಂದಾಗ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಹಿಂದೂ ರಾಷ್ಟ್ರ ಎನ್ನುತ್ತಾರೆ‘ ಎಂದು ಟೀಕಿಸಿದರು.