
ಯಾದಗಿರಿ: ಹೆಸರುಕಾಳು ಇಳುವರಿ ಕುಸಿತ, ರೈತರಿಗೆ ಸಂಕಷ್ಟ
ಯಾದಗಿರಿ: ಮಳೆ ಕೊರತೆ ನಡುವೆಯೂ ಬಿತ್ತನೆಯಾಗಿದ್ದ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರುಕಾಳು ಇಳುವರಿ ಕುಸಿತದೊಂದಿಗೆ ಮಾರುಕಟ್ಟೆಗೆ ಬಂದಿದೆ. ಆದರೆ, ಬೆಳೆಗೆ ಸಮರ್ಪಕ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ನೀರಾವರಿ ಪ್ರದೇಶದಲ್ಲಿ 170 ಹೆಕ್ಟೇರ್ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ 13,600 ಹೆಕ್ಟೇರ್ ಸೇರಿ ಒಟ್ಟು 13,770 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. ಮಳೆಯ ಅವಕೃಪೆಯಿಂದಾಗಿ 74 ಹೆಕ್ಟೇರ್ ನೀರಾವರಿ ಹಾಗೂ 9,079 ಹೆಕ್ಟೇರ್ ಮಳೆಯಾಶ್ರಿತ ಒಳಗೊಂಡು ಒಟ್ಟು 9,153 (ಶೇ 66.47) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಈ ಹಿಂದಿನ ವರ್ಷ ಪ್ರತಿ ಕ್ವಿಂಟಲ್ ಗರಿಷ್ಠ ದರ ₹ 9,449ಕ್ಕೆ ಏರಿಕೆಯಾಗಿತ್ತು. ಈ ವರ್ಷ ಅದು, ₹ 10,012ಕ್ಕೆ (ಆ.4ರಂದು) ತಲುಪಿದ್ದರೂ ಈ ಧಾರಣೆಯು ಎಲ್ಲಾ ಬೆಳೆಗಾರರಿಗೆ ಸಿಗತ್ತಿಲ್ಲ. ನೀರಾವರಿ ಪ್ರದೇಶದಲ್ಲಿ ಬೆಳೆದ ಕೆಲವೇ ರೈತರಿಗೆ ಮಾತ್ರ ಉತ್ತಮ ದರ ಸಿಗುತ್ತಿದೆ. ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆದ ಹೆಸರುಕಾಳು ಗಾತ್ರದಲ್ಲಿ ಚಿಕ್ಕದಾಗಿ, ಬಣ್ಣ ಮಾಸಿದಂತೆ ಆಗಿದೆ. ಇದರಿಂದಾಗಿ ಒಂದು ಕ್ವಿಂಟಲ್ ಹೆಸರುಕಾಳು ದರ ₹ 7,000 ಆಸುಪಾಸಿನಲ್ಲಿ ಇದೆ.
‘ಸರಿಯಾಗಿ ಮಳೆಯಾದರೆ ಪ್ರತಿ ಎಕರೆಗೆ 4 ಕ್ವಿಂಟಲ್ನಷ್ಟು ಇಳುವರಿ ಬರುತ್ತಿತ್ತು. ಆದರೆ, ಈ ವರ್ಷ ಎಕರೆಗೆ ಒಂದು, ಒಂದೂವರಿ ಕ್ವಿಂಟಲ್ನಷ್ಟು ಇಳುವರಿ ಬಂದಿದೆ. ಇಳುವರಿ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಸರಿಯಾಗಿ ಧಾರಣೆಯೂ ಸಿಗುತ್ತಿಲ್ಲ’ ಎಂದು ನೆರೆಯ ಸೇಡಂ ತಾಲ್ಲೂಕಿನ ಕೋಲ್ಕುಂದ ಗ್ರಾಮದ ರೈತ ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ಟ್ರ್ಯಾಕ್ಟರ್ನಿಂದ ಬಿತ್ತನೆ ಮಾಡಲು ಎಕರೆಗೆ ₹ 1,600 ಕೊಟ್ಟಿದ್ದೇನೆ. ಬಿತ್ತನೆ ಬೀಜ, ರಸಗೊಬ್ಬರ, ಗಳೆ ಹೊಡೆದದ್ದು, ಔಷಧಿ ಸಿಂಪರಣೆ, ಕಳೆ ತೆಗೆಯಿಸಿದ್ದು ಸೇರಿಸಿದರೆ ₹ 50 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ಕಳೆದ ವರ್ಷ ಹೆಸರುಕಾಳು ಮಳೆಗೆ ಸಿಲುಕಿ ಒಂದು ಕ್ವಿಂಟಲ್ ಕಾಳು ₹ 1 ಸಾವಿರಕ್ಕೆ ಮಾರಾಟ ಆಗಿತ್ತು. ಈ ವರ್ಷ ಇಳುವರಿ ಕಡಿಮೆಯಾಗಿದ್ದರೂ ಒಳ್ಳೆಯ ಬೆಲೆ ಸಿಗದೆ ಮತ್ತೊಂದು ಆರ್ಥಿಕ ಹೊರೆ ಅನುಭವಿಸುವಂತೆ ಆಗಿದೆ’ ಎಂದು ಅಲವತ್ತುಕೊಂಡರು.
ವರ್ಷದಿಂದ ವರ್ಷಕ್ಕೆ ಆವಕವೂ ಕುಸಿತ
ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ನಿರ್ಧಾರ ಹಾಗೂ ಹೊರ ರಾಜ್ಯಗಳಿಂದ ವರ್ತರು ಬಂದು ನೇರವಾಗಿ ಖರೀದಿಸುವುದರಿಂದ ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಪ್ರಾಂಗಣಕ್ಕೆ ಜಿಲ್ಲೆ ಮಾತ್ರವಲ್ಲದೆ ನೆರೆಯ ರಾಯಚೂರು, ಕಲಬುರಗಿ, ವಿಜಯಪುರದಿಂದಲೂ ಹೆಸರುಕಾಳು ಆವಕ ಆಗುತ್ತದೆ. ಆದರೆ, ಎರಡು ವರ್ಷಗಳಿಂದ ಆವಕ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. 2024–25ರಲ್ಲಿ ₹201.77 ಕೋಟಿ ಮೌಲ್ಯದ 2.81 ಲಕ್ಷ ಟನ್ ಹೆಸರುಕಾಳು ಬಂದಿತ್ತು. ಮರು ವರ್ಷದಲ್ಲಿ (2025–26) ಅದು ₹118.12 ಕೋಟಿ ಮೌಲ್ಯಕ್ಕೆ ತಗ್ಗಿ, 1.94 ಲಕ್ಷ ಕ್ವಿಂಟಲ್ ಹೆಸರುಕಾಳು ಆವಕ ಆಗಿತ್ತು. ಪ್ರಸ್ತಕ್ತ ವರ್ಷದ ಆಗಸ್ಟ್ ಅಂತ್ಯದ ವರೆಗೆ ₹44.64 ಕೋಟಿ ಮೌಲ್ಯದ 57,822 ಕ್ವಿಂಟಲ್ ಹೆಸರುಕಾಳು ಬಂದಿದೆ. ಹೆಸರುಕಾಳು ಮಾರಾಟದ ಅವಧಿ ಇನ್ನೂ ಎರಡ್ಮೂರು ವಾರಗಳಿದಿದ್ದರೂ ಈ ಹಿಂದಿನ ವರ್ಷದ ಅರ್ಧದಷ್ಟೂ ಬಂದಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದರು.
‘ಕೇಂದ್ರ ಸರ್ಕಾರವು ಎಫ್ಎಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಲ್ ಹೆಸರುಕಾಳಿಗೆ ₹ 8,750 ಬೆಂಬಲ ಬೆಲೆ ನಿಗದಿ ಮಾಡಿದೆ. ಉತ್ತಮ ಗುಣಮಟ್ಟದ ಹೆಸರು ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಆಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ರೈತರು ಖರೀದಿ ಕೇಂದ್ರಗಳಲ್ಲಿ ಹೆಸರುಕಾಳು ಮಾರಲು ಆಸಕ್ತಿ ತೋರಿಸಲಿಲ್ಲ‘ ಎಂದು ಎಪಿಎಂಸಿ ಕಾರ್ಯದರ್ಶಿ ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು. ಉತ್ತಮ ಗುಣಮಟ್ಟ ಹೆಸರುಕಾಳು ₹ 9,000 ಆಸುಪಾಸಿನಲ್ಲಿ ಖರೀದಿಯಾಗುತ್ತಿದೆ. ಮಧ್ಯಮ ಗುಣಮಟ್ಟದ್ದು ₹ 8,000 ಹಾಗೂ ಸಾಧಾರಣ ಗುಣಟ್ಟದ್ದು ₹ 7 ಸಾವಿರ ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ’ ಎಂದು ವರ್ತಕ ನಾಗಪ್ಪ ಸುಗ್ಗಾ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-30-168180316