
ಜೈಲಿನಲ್ಲಿರುವಾಗ ಆಹಾರಕ್ಕೆ ವಿಷ ಬೆರೆಸಿರುವ ಅನುಮಾನ ಇದೆ: ಸಂಜಯ್ ರಾವುತ್ ಆರೋಪ
ಮುಂಬೈ: ಜೈಲಿನಲ್ಲಿದ್ದಾಗಲೇ ನನಗೆ ಕ್ಯಾನ್ಸರ್ ಬಂದಿತ್ತು ಎಂಬ ಅನುಮಾನವಿದೆ. ಅಲ್ಲಿ ನೀಡಲಾಗಿದ್ದ ಆಹಾರದಲ್ಲಿ ವಿಷ ಬೆರೆಸಲಾಗಿದೆಯೇ ಎಂದು ಪತ್ತೆಹಚ್ಚಲು 'ಟಾಕ್ಸಿಸಿಟಿ' (ವಿಷಕಾರಿ ಅಂಶ ಪತ್ತೆ) ಪರೀಕ್ಷೆಗೆ ಒಳಗಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದರು ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, 'ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರವು ಅತ್ಯಂತ ನಿರ್ದಯಿಯಾಗಿದ್ದು, ವಿರೋಧ ಪಕ್ಷಗಳ ನಾಯಕರ ವಿರುದ್ಧ ಏನು ಬೇಕಾದರೂ ಮಾಡಬಲ್ಲದು' ಎಂದು ಆರೋಪಿಸಿದ್ದಾರೆ.
ಮುಂದುವರಿದು, ವಿರೋಧ ಪಕ್ಷಗಳ ನಾಯಕರಿಗೆ ಜೈಲಿನಲ್ಲಿ ಏನು ಬೇಕಾದರೂ ಆಗಬಹುದು ಎಂದು ರಾಹುಲ್ ಗಾಂಧಿ ಕೂಡ ಅನುಮಾನ ವ್ಯಕ್ತಪಡಿಸಿದ್ದರು. ಜೈಲಿನಲ್ಲಿ ಕಾಲ ಕಳೆದ ಇತರ ರಾಜಕೀಯ ನಾಯಕರ ಆರೋಗ್ಯ ಸ್ಥಿತಿಯೂ ಪ್ರಸ್ತುತ ಕೆಟ್ಟದಾಗಿದೆ' ಎಂದು ಅವರು ಆಪಾದಿಸಿದ್ದಾರೆ.
ಮುಂಬೈನಲ್ಲಿ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪತ್ರಾ ಚಾಲ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾವುತ್ 2022 ರಲ್ಲಿ 100 ದಿನಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದರು.
ಜೈಲಿನಲ್ಲಿರುವಾಗಲೇ ಕ್ಯಾನ್ಸರ್ ಬಂದಿರುವ ಬಗ್ಗೆ ಅನುಮಾನವಿದೆ. ಸರ್ಕಾರವನ್ನು ಪ್ರಶ್ನಿಸುವ ನಾಯಕರಿಗೆ ಜೈಲಿನಲ್ಲಿ ನೀಡಲಾಗುವ ಆಹಾರ ಮತ್ತು ನೀರಿನಲ್ಲಿ ಅಧಿಕಾರಿಗಳು ವಿಷ ಬೆರೆಸುವ ಸಾಧ್ಯತೆಯಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದರು. ಅಲ್ಲದೇ ವಿಶಪ್ರಾಶನವಾಗಿದೆಯೇ ಎಂದು ಪತ್ತೆಹಚ್ಚಲು ಪರೀಕ್ಷೆ ಮಾಡಿಸಿಕೊಳ್ಳಿ ಎಂದೂ ಅವರು ಸಲಹೆ ನೀಡಿದ್ದರು ಎಂದು ರಾವುತ್ ಹೇಳಿದ್ದಾರೆ.