
ನಾಚಿಕೆ ಆಗಬೇಕಿರುವುದು ಯಾರಿಗೆ: ಸಚಿವ ನರೇಂದ್ರಸ್ವಾಮಿ ಪ್ರಶ್ನೆ
ಮಡಿಕೇರಿ: ‘ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡುತ್ತದೆ. ಬಡವರಿಗೆ ಉಚಿತವಾಗಿ ಹಣ ಕೊಡುವ ನಮ್ಮನ್ನು ಟೀಕಿಸುತ್ತಾರೆ. ನಾಚಿಕೆ ಆಗಬೇಕಾಗಿರುವುದು ಯಾರಿಗೆ’ ಎಂದು ಕೃಷಿ ಖಾತೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಪ್ರಶ್ನಿಸಿದರು.
'ಚುನಾವಣೆಗೆ ಬನ್ನಿ ಎಂದು ನಮ್ಮನ್ನು ಕೇಳುತ್ತಿರುವ ಬಿಜೆಪಿಯವರಿಗೆ ನಿಜವಾಗಿಯೂ ಮಾನಮರ್ಯಾದೆ ಇದ್ದರೆ, ಚುನಾವಣೆ ಬದಿಗಿಟ್ಟು ರಾಜ್ಯದ ಪಾಲನ್ನು ಕೇಳಲು ಪಕ್ಷಭೇದ ಮರೆತು ಬರಲಿ’ ಎಂದು ಅವರು ಇಲ್ಲಿ ಶನಿವಾರ ಸವಾಲೆಸೆದರು.
‘ಕೇಂದ್ರ ಸರ್ಕಾರ ರಾಜೀನಾಮೆ ಕೊಟ್ಟು ಚುನಾವಣೆಗೆ ಬರುವುದಾದರೇ ನಾವೂ ರಾಜೀನಾಮೆ ನೀಡಿ ಚುನಾವಣೆಗೆ ಎದುರಿಸುತ್ತೇವೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಳೆದ 3 ವರ್ಷದಿಂದ ನಿದ್ದೆ ಮಾಡುತ್ತಿದ್ದ ಬಿಜೆಪಿ ರಾಜ್ಯ ನಾಯಕರು ಈಗ ಪ್ರಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. 3 ವರ್ಷದಲ್ಲಿ ಅವರು ಜನಪರ ಕಾಳಜಿಯ ಹೋರಾಟ ಮಾಡಿಲ್ಲ ಎಂದರು.
ರಾಜ್ಯದಲ್ಲಿ ಭೀಕರವಾದ ಬರ ಬಂದಿದೆ. 6ರಿಂದ 7 ವಾರಗಳ ಶುಷ್ಕ ವಾತಾವರಣದಿಂದ ಅಂತರ್ಜಲ ಕುಸಿದಿದೆ. ಪ್ರಾಯೋಗಿಕ ಮೋಡಬಿತ್ತನೆ ಮಾಡುತ್ತಿದ್ದೇವೆ. ಕೊಡಗಿನಲ್ಲಿ ಮೋಡ ಬಿತ್ತನೆ ಮಾಡುವುದಿಲ್ಲ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-51-1015025519