
ಮಳೆ ಕೊರತೆ: ಮಂಡ್ಯ ಜಿಲ್ಲೆಯಲ್ಲಿ ₹54 ಕೋಟಿ ಬೆಳೆ ನಷ್ಟ ಅಂದಾಜು
ಮಂಡ್ಯ: 2026–27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ 48,591 ಹೆಕ್ಟೇರ್ ಕೃಷಿ ಬೆಳೆ ಮತ್ತು 3 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿದಂತೆ ಒಟ್ಟು 48,594 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಏಳು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲಾಗಿದೆ. ಬೆಳೆ ಹಾನಿ ಬಗ್ಗೆ ನಡೆಸಿದ ಜಂಟಿ ಸಮೀಕ್ಷಾ ವರದಿಯಲ್ಲಿ ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ₹54.53 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳಿಂದ ಬೆಳೆಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆದಿದ್ದು, ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ನಾಗಮಂಗಲ ತಾಲ್ಲೂಕಿನಲ್ಲಿ 18,762 ಹೆಕ್ಟೇರ್ ಮತ್ತು ಕೆ.ಆರ್.ಪೇಟೆಯಲ್ಲಿ 12,883 ಹೆಕ್ಟೇರ್ ಬೆಳೆ ನಾಶವಾಗಿದ್ದು, ಜಿಲ್ಲೆಯಲ್ಲಿ ಹೆಚ್ಚು ನಷ್ಟಕ್ಕೊಳಗಾದ ತಾಲ್ಲೂಕು ಎನಿಸಿವೆ. ಪಾಂಡವಪುರ ತಾಲ್ಲೂಕಿನಲ್ಲಿ ತೋಟಗಾರಿಕಾ ಬೆಳೆಯಾದ ಸೇವಂತಿಗೆ 3 ಹೆಕ್ಟೇರ್ನಷ್ಟು ಹಾನಿಯಾಗಿದೆ.
ಬಾಡಿದ ಬೆಳೆ: ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದ ಅಲಸಂದೆ, ಹುರುಳಿ, ಶೇಂಗಾ, ಜೋಳ, ಕಬ್ಬು, ರಾಗಿ, ಎಳ್ಳು, ಉದ್ದು, ಹೆಸರುಕಾಳು ಬೆಳೆಗಳು ತೀವ್ರ ಮಳೆ ಕೊರತೆಯಿಂದ ಬಾಡಿ ಹೋಗಿವೆ. ನೀರಾವರಿ ಪ್ರದೇಶದಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಬೆಳೆಗಳು ಉಳಿದುಕೊಂಡಿವೆ.
ಮಳೆಯಾಶ್ರಿತ ಪ್ರದೇಶದಲ್ಲಿ 33,036 ಹೆಕ್ಟೇರ್ ಮತ್ತು ನೀರಾವರಿ ಪ್ರದೇಶದಲ್ಲಿ 15,555 ಬೆಳೆ ಹಾನಿಯಾಗಿರುವುದು ವರದಿಯಾಗಿದೆ. ಬಿತ್ತನೆಬೀಜ, ಉಳುಮೆ, ರಸಗೊಬ್ಬರ, ಕೂಲಿಕಾರ್ಮಿಕರು ಖರ್ಚು ಸೇರಿದಂತೆ ಕೃಷಿ ಚಟುವಟಿಕೆಗೆ ಹಾಕಿದ ಬಂಡವಾಳವೂ ಈ ಬಾರಿ ಕೈಸೇರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬರ ಪರಿಹಾರವನ್ನು ಎದುರು ನೋಡುತ್ತಿದ್ದಾರೆ.
ಬಿತ್ತನೆಗೆ ಭಾರಿ ಹಿನ್ನಡೆ: ಈ ಬಾರಿ ಜಿಲ್ಲೆಯಲ್ಲಿ 2,06,835 ಹೆಕ್ಟೇರ್ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿತ್ತು. ಆದರೆ, ಮಳೆ ವೈಫಲ್ಯದಿಂದ ಇದುವರೆಗೆ 37,873 (ಶೇ 18.3) ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ 1,78,530 ಹೆಕ್ಟೇರ್ (ಶೇ 92.9ರಷ್ಟು) ಬಿತ್ತನೆ ಪ್ರಗತಿಯಾಗಿತ್ತು.
ಮುಂಗಾರು ಹಂಗಾಮಿನಲ್ಲಿ ಭತ್ತ (ಶೇ 28), ರಾಗಿ (ಶೇ 31), ಮುಸುಕಿನ ಜೋಳ (ಶೇ 2), ಅಲಸಂದೆ (ಶೇ 10), ಕಬ್ಬು (ಶೇ 20), ಇತರೆ ಬೆಳೆಗಳು (ಶೇ 9)ರಷ್ಟು ಮಾತ್ರ ಬಿತ್ತನೆಯಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-40-1686199469