
ಉದ್ಯಾನ ಜಾಗದ ಶೇ 5ರಷ್ಟು ಬಳಕೆ: ಸದನದಲ್ಲಿ ಚರ್ಚಿಸೋಣ ಎಂದ ಮುಖ್ಯಮಂತ್ರಿ ಡಿಕೆಶಿ
ಬೆಂಗಳೂರು: ಉದ್ಯಾನಗಳಲ್ಲಿ ಶೇ 5ರಷ್ಟು ಜಾಗ ನೀಡುವ ಪ್ರಸ್ತಾವ ಏಕೆ ಬಂತು, ಹಿಂದಿನವರು ಏನು ಮಾಡಿದ್ದಾರೆ, ಯಾವ ಜಾಗವನ್ನು ಯಾರಿಗೆ ನೀಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ. ಈ ಬಗ್ಗೆ ವಿಧಾನಸಭೆಯಲ್ಲಿ ಮತ್ತೆ ಚರ್ಚಿಸಬಹುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, 'ಲಾಲ್ ಬಾಗ್ ನಲ್ಲಿ ಮೆಟ್ರೋಗೆ ಜಾಗ ನೀಡಿರುವುದು ಸೇರಿದಂತೆ ಬೆಂಗಳೂರಿನ ವಿವಿಧೆಡೆ ಜಾಗ ನೀಡಿರುವ ವಿಚಾರಗಳನ್ನೂ ಪರಿಶೀಲಿಸಬೇಕಿದೆ' ಎಂದರು.
ಬೆಂಗಳೂರಿನ ಉದ್ಯಾನಗಳ ಜಾಗಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರೂ ಆತಂಕಪಡುವ ಅಗತ್ಯವಿಲ್ಲ. ಉದ್ಯಾನ ಜಾಗವನ್ನು ಹೇಗೆ ರಕ್ಷಿಸಬೇಕು ಎಂಬುದು ನನಗೆ ಗೊತ್ತಿದೆ’ ಎಂದರು.
ಲಾಲ್ ಬಾಗ್ ಸೇರಿದಂತೆ ಉದ್ಯಾನಗಳ ಜಾಗದ ಕುರಿತು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆದು ಪರಿಶೀಲಿಸುವುದಾಗಿ ಹೇಳಿದರು. ಈ ವಿಚಾರವನ್ನು ವಿಧಾನಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಲು ಅವಕಾಶ ಕಲ್ಪಿಸುವುದಾಗಿಯೂ ತಿಳಿಸಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಧಾರ
ʼಪ್ರತಿಪಕ್ಷದ ಸಲಹೆಗಳಿಗೆ ನಾನು ಮುಕ್ತವಾಗಿದ್ದೇನೆ. ಸಾರ್ವಜನಿಕರ ಸಲಹೆಗಳನ್ನೂ ಪರಿಗಣಿಸುತ್ತೇನೆ. ಯಾವುದೇ ಗೊಂದಲ ಸೃಷ್ಟಿಸುವುದು ನನ್ನ ಉದ್ದೇಶವಲ್ಲ. ಸಾರ್ವಜನಿಕರ ದೊಡ್ಡ ಹಿತದೃಷ್ಟಿಯಿಂದಲೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.
ನಿಯಮಾನುಸಾರ ಪರಿಶೀಲಿಸಿ ಬರ ಪೀಡಿತ ತಾಲ್ಲೂಕು ಘೋಷಣೆ
ರಾಜ್ಯದಲ್ಲಿ ಈಗಾಗಲೇ ಉಪಮುಖ್ಯಂತ್ರಿ ಜಿ.ಪರಮೇಶ್ವರ ಅವರು 102 ತಾಲ್ಲಃಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದಾರೆ. ಇನ್ನೂ ಕೆಲವು ತಾಲ್ಲೂಕುಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ಪ್ರತಿ ತಾಲ್ಲೂಕಿನಿಂದ ನಿರಂತರವಾಗಿ ವರದಿ ಪಡೆದು, ನಿಯಮಾನುಸಾರ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಸಮರ್ಥನೆ ಮಾಡಿಕೊಳ್ಳಬೇಕಿರುವುದರಿಂದ ಬರ ಘೋಷಣೆಯ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.
ಧಾರವಾಡ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರ ಘೋಷಣೆಗೆ ಸಂಬಂಧಿಸಿದಂತೆ ಮಾಹಿತಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಅವರು, ಬಾಗಲಕೋಟೆಗೂ ಭೇಟಿ ನೀಡುವುದಾಗಿ ಹೇಳಿದರು.
ಯಾವ ತಾಲ್ಲೂಕಿನ ಯಾವ ಜಿಲ್ಲೆಯಲ್ಲಿ ನಿಜವಾಗಿಯೂ ಬರ ಪರಿಸ್ಥಿತಿ ಉಂಟಾಗಿದೆಯೋ ಅದನ್ನು ಪರಿಶೀಲಿಸುತ್ತೇವೆ. ನನಗೆ ನನ್ನದೇ ಕ್ಷೇತ್ರ ಎಂಬ ಯಾವುದೇ ಪ್ರಶ್ನೆಯಿಲ್ಲ. ಬರ ಘೋಷಣೆಗೆ ಕೇಂದ್ರ ಸರ್ಕಾರದ ನಿಯಮಗಳಿವೆ. ಕಂದಾಯ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಒಟ್ಟಾಗಿ ಪರಿಶೀಲನೆ ನಡೆಸಿ, ನಿಯಮದ ಪ್ರಕಾರವೇ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
ರಾಹುಲ್ ವಿರುದ್ಧ ಎಫ್ಐಆರ್ ಗೆ ಖಂಡನೆ
ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಎಂದು ಹೇಳಿದರು.
‘ರಾಹುಲ್ ಗಾಂಧಿ ಅವರು ತಪ್ಪೇನು ಮಾಡಿದ್ದಾರೆ ? ಯುವಜನತೆ ಮತ್ತು ದೇಶಕ್ಕಾಗಿ ಹೋರಾಡುವುದು ಅವರ ಹಕ್ಕು. ಅದು ಸಂವಿಧಾನ ನೀಡಿರುವ ಹಕ್ಕು. ಅವರು ಹೋರಾಡುತ್ತಿರುವ ವಿಚಾರದಲ್ಲಿ ನಾವೆಲ್ಲರೂ ಅವರೊಂದಿಗೆ ಇದ್ದೇವೆ’ ಎಂದು ಹೇಳಿದರು.
ಬಿಜೆಪಿ ಪಾದಯಾತ್ರೆಗೆ ಪಕ್ಷದ ಪ್ರತಿತಂತ್ರ
ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು, ‘ಅವರು ಪಾದಯಾತ್ರೆ ಮಾಡುವುದು ಒಳ್ಳೆಯದೇ. ಅವರು ನೀಡುತ್ತಿರುವುದು ನಮಗೆ ಒಳ್ಳೆಯ ಅವಕಾಶ. ಅದಕ್ಕೆ ಬೇಕಾದ ಪ್ರತಿತಂತ್ರ ರೂಪಿಸಲು ನಮ್ಮ ಪಕ್ಷವೂ ಸಿದ್ಧವಿದೆ’ ಎಂದು ಹೇಳಿದರು.