
ಈ ದಿನದ ಟಾಪ್ 10 ಸುದ್ದಿಗಳು: ಮಂಗಳವಾರ, 01 ಸೆಪ್ಟೆಂಬರ್ 2026
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..
ಕೆಪಿಎಸ್ಸಿ ಅಕ್ರಮ: ಪ್ರಶ್ನೆ ಪತ್ರಿಕೆ ₹40 ಲಕ್ಷಕ್ಕೆ ಬಿಕರಿ?
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಹಿಂದಿನ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಕೆಲವು ಅಭ್ಯರ್ಥಿಗಳ ಜತೆಗೆ ಮಧ್ಯವರ್ತಿ ಬಸವರಾಜ್ ಕನ್ನಾಳೆ ನಂಟು ಹೊಂದಿರುವುದನ್ನು ಸಿಐಡಿ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು
ಮುಂಬೈ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತ ಸಹಾಯಕರು ಮಂಗಳವಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಇಂದಿನಿಂದ ಹೋರಾಟ: ಬೃಹತ್ ಪಾದಯಾತ್ರೆಗೆ ಬಿಜೆಪಿ ಸಜ್ಜು
ಲಿಂಗಸುಗೂರು (ರಾಯಚೂರು ಜಿಲ್ಲೆ): ರಾಜ್ಯದ ಕಾಂಗ್ರೆಸ್ ಸರ್ಕಾರವು ಹಗರಣಗಳಲ್ಲಿ ಮುಳುಗಿದೆ ಹಾಗೂ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕವು ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿದೆ.
ಹಿಮ ಬಂಡೆಗಳೇ ಭೀಕರ ಪ್ರವಾಹಕ್ಕೆ ಕಾರಣ: ಎನ್ಇಎಸ್ ವರದಿ
ಕಠ್ಮಂಡು, ನೇಪಾಳ : ‘ಬೋಟೆಕೋಶಿ–ತ್ರಿಶೂಲಿ ನದಿ ಕಾರಿಡಾರ್ ಪ್ರದೇಶದಲ್ಲಿ ಬೃಹತ್ ಹಿಮ ಬಂಡೆಗಳಿಂದಲೇ ಭೀಕರ ಪ್ರವಾಹ ಸಂಭವಿಸಿದ್ದು, ಸಾಂಪ್ರದಾಯಿಕ ಸುರಿಯುವ ಮಳೆಯಿಂದ ಅಲ್ಲ’ ಎಂದು ನೇಪಾಳದ ವಿಜ್ಞಾನಿಗಳು ತಯಾರಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ನೇಪಾಳ ಪರಿಸರ ಸೊಸೈಟಿ (ಎನ್ಇಎಸ್) ತಯಾರಿಸಿದ ವರದಿಯನ್ನು ಭಾನುವಾರ ಬಿಡುಗಡೆಗೊಳಿಸಲಾಗಿದೆ.
ಅಂತರರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಘೋಷಿಸಿದ ಮೆಸ್ಸಿ
ಮಯಾಮಿ: ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತರಾಗುವುದಾಗಿ ಅರ್ಜೆಂಟೀನಾದ ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ಅವರು ಸೋಮವಾರ ಪ್ರಕಟಿಸಿದರು. ಜುಲೈನಲ್ಲಿ ಅವರು ಸತತ ಎರಡನೇ ಬಾರಿ ತಮ್ಮ ತಂಡವನ್ನು ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ತಲುಪಿಸಿದ್ದರು.
ಉಕ್ರೇನ್ ವಿರುದ್ಧ ಯುದ್ಧ ತಕ್ಷಣವೇ ನಿಲ್ಲಿಸಿ: ಪುಟಿನ್ಗೆ ಮೋದಿ ಆಗ್ರಹ
ಬಿಷ್ಕೆಕ್: ‘ಉಕ್ರೇನ್–ರಷ್ಯಾ ಯುದ್ಧವನ್ನು ತಕ್ಷಣವೇ ನಿಲ್ಲಿಸಿ. ಗಾಂಧಿ ಮತ್ತು ಬುದ್ಧನ ನಾಡಾಗಿರುವ ಭಾರತವು ಶಾಂತಿ ಸ್ಥಾಪಿಸುವ ಎಲ್ಲ ಪ್ರಯತ್ನವನ್ನು ಸದಾ ಬೆಂಬಲಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಆಗ್ರಹಿಸಿದರು.
ಉತ್ತರ ಪ್ರದೇಶ| ಕೌಶಂಬಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 11 ಬಲಿ
ಕೌಶಂಬಿ (ಉತ್ತರ ಪ್ರದೇಶ): ಇಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಬೃಹತ್ ಸ್ಫೋಟದಿಂದ 11 ಮಂದಿ ಮೃತಪಟ್ಟಿದ್ದಾರೆ.
ಪಿಒಪಿ ಗಣೇಶ ಮೂರ್ತಿ ತಯಾರಕರು, ಮಾರಾಟಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಬೆಂಗಳೂರು: ‘ಪರಿಸರಕ್ಕೆ ಹಾನಿಕಾರಕವಾದ ಪಿಒಪಿ ಗಣೇಶನ ಮೂರ್ತಿ ತಯಾರಿಸುವವರು ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ’ ಎಂದು ಅರಣ್ಯ ಸಚಿವ ಎ.ರಾಮಲಿಂಗಾರೆಡ್ಡಿ ತಿಳಿಸಿದರು.
ಗ್ರಂಥಪಾಲಕರ ಹುದ್ದೆಗಳ ನೇಮಕಕ್ಕೆ ಸಚಿವ ಮಧು ಬಂಗಾರಪ್ಪ ಭರವಸೆ
ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಖಾಲಿ ಇರುವ ಮುಖ್ಯ ಗ್ರಂಥಪಾಲಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಭರ್ತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ದುಲೀಪ್ ಟ್ರೋಫಿ ಸೆಮಿಫೈನಲ್: ತಿಲಕ್ ತಾಳ್ಮೆಯ ಶತಕ; ಶ್ರೇಯಸ್ ಆಸರೆ
ಬೆಂಗಳೂರು: ‘ಚುಟುಕು ಕ್ರಿಕೆಟ್’ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆಯುವ ತಿಲಕ್ ವರ್ಮಾ ಸೋಮವಾರ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಮೊದಲ ಬೌಂಡರಿ ಗಳಿಸಲು ಆಡಿದ್ದು 154 ಎಸೆತಗಳನ್ನು! ದಕ್ಷಿಣ ವಲಯ ತಂಡದ ನಾಯಕ ವರ್ಮಾ ಅವರು ಇಂತಹ ಅಗಾಧ ತಾಳ್ಮೆಯ ಆಟದ ಮೂಲಕ ಅಜೇಯ ಶತಕ (ಬ್ಯಾಟಿಂಗ್ 106; 225ಎ, 4X7) ಗಳಿಸಿದರು. ಅಲ್ಲದೇ ಉತ್ತರ ವಲಯದ ವೇಗಿ ಗುರ್ನೂರ್ ಬ್ರಾರ್ ಅವರ ದಾಳಿಯ ಮುಂದೆ ತತ್ತರಿಸುವ ಆತಂಕದಲ್ಲಿದ್ದ ದಕ್ಷಿಣ ವಲಯಕ್ಕೆ 90 ರನ್ ಮುನ್ನಡೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ಕನ್ನಡಿಗ ಶ್ರೇಯಸ್ ಗೋಪಾಲ್ (88; 169ಎ, 4X11) ಜೊತೆ ನೀಡಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 175 (334ಎ) ರನ್ ಸೇರಿಸಿದರು. ಒಂದು ಹಂತದಲ್ಲಿ 80 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡವು ದಿನದಾಟದ ಅಂತ್ಯಕ್ಕೆ 94 ಓವರ್ಗಳಲ್ಲಿ 9ಕ್ಕೆ 285 ರನ್ ಗಳಿಸಿತು. ತಿಲಕ್ ಮತ್ತು ಕೆ. ಸಾಯಿತೇಜ ಕ್ರೀಸ್ನಲ್ಲಿದ್ದಾರೆ.