
ಹಳ್ಳಿ ಪವರ್: ಮೊದಲ ದಿನವೇ ಹಜೀರಾ, ರಗಡ್ ರಚನಾ ಗಡೀಪಾರು.. ಹೋಗಿದ್ದು ಎಲ್ಲಿಗೆ?
ಜೀ ಕನ್ನಡದಲ್ಲಿ ಇಂದಿನಿಂದ (ಆ.10) ‘ಹಳ್ಳಿ ಪವರ್ ರಿಲೋಡೆಡ್’ ಆರಂಭವಾಗುತ್ತಿದೆ. ಆಗಸ್ಟ್ 8ರಂದು ಹಳ್ಳಿ ಪವರ್ ರಿಲೋಡೆಡ್ಗೆ ಅದ್ದೂರಿಯಾಗಿ ಚಾಲನೆ ಸಿಕ್ಕಿತ್ತು. ಶೋ ಶುರುವಾದ ದಿನವೇ ಸ್ಪರ್ಧಿಗಳಿಗೆ ರಿಯಲ್ ಚಾಲೆಂಜ್ ಎದುರಾಗಿದೆ.
ಜೀ ಕನ್ನಡ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಶೋ ಮೊದಲ ದಿನವೇ ಇಬ್ಬರು ಸ್ಪರ್ಧಿಗಳು ಗಡೀಪಾರಾಗಿದ್ದಾರೆ. ಕಡಿಮೆ ಮತಗಳನ್ನು ಪಡೆದ ಬೆಂಕಿ ಬಿ ಬಿ ಹಜೀರಾ ಹಾಗೂ ರಗಡ್ ರಚನಾ ಅವರಿಗೆ ಹಳ್ಳಿಯಿಂದ ಗಡೀಪಾರಾಗುವ ಸ್ಥಿತಿ ಎದುರಾಗಿದೆ.
ನಿರೂಪಕ ಅಕುಲ್ ಬಾಲಾಜಿ ಅವರು, ‘ಕಡಿಮೆ ಮತಗಳು ಬಂದಿರುವ ಕಾರಣ ಬಿ ಬಿ ಹಜೀರಾ ಹಾಗೂ ರಗಡ್ ರಚನಾ ಅವರ ಪ್ರಯಾಣ ಇಲ್ಲಿಗೆ ಮುಕ್ತಾಯವಾಗುತ್ತಿದೆ’ ಎನ್ನುತ್ತಾರೆ. ಆ ಕೂಡಲೇ ಎಲ್ಲಾ ಸ್ಪರ್ಧಿಗಳು ಅಚ್ಚರಿಗೊಳಗಾಗುತ್ತಾರೆ. ಆಗ ರಚನಾ, ‘ಸರ್ ನಾವಿನ್ನೂ ಆಟವನ್ನೇ ಶುರು ಮಾಡಿಲ್ಲ’ ಎನ್ನುತ್ತಾರೆ. ಆಗ ಅಕುಲ್ ಬಾಲಾಜಿ, ‘ಕಡಿಮೆ ಮತಗಳು ಬಂದಿದೆ ಹೀಗಾಗಿ ಈ ತಕ್ಷಣ ಗಡಿ ದಾಟಿ ಹೋಗಬೇಕು’ ಎನ್ನುತ್ತಾರೆ.
ಬಳಿಕ ರಚನಾ ಹಾಗೂ ಹಜೀರಾ ಗಂಟುಮೂಟೆ ಎತ್ತಿಕೊಂಡು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಾರೆ. ಕೊಳಕಾದ ಟೆಂಟ್ ಹೌಸ್ ನೋಡಿದ ರಚನಾ ಕಣ್ಣೀರು ಹಾಕುತ್ತಾ, ‘ನಾವು ಇಲ್ಲಿಯೇ ಮಲಗಬೇಕಾ ಅಂತ’ ಅತ್ತುಬಿಡುತ್ತಾರೆ. ಇಡೀ ರಾತ್ರಿ ನಿದ್ದೆ ಗೆಟ್ಟ ರಚನಾ ಕಣ್ಣೀರಿಟ್ಟಿದ್ದು ಪ್ರೋಮೊದಲ್ಲಿ ಕಾಣಿಸಿದೆ.
ಇನ್ನು, ಹಳ್ಳಿ ಪವರ್ಗೆ ಎಂಟ್ರಿ ಕೊಟ್ಟ ಈ ಸ್ಪರ್ಧಿಗಳಿಗೆ ಟಿವಿ, ಮೊಬೈಲ್, ಇಂಟರ್ನೆಟ್ ಸೇರಿದಂತೆ ಯಾವುದೇ ಐಷಾರಾಮಿ ಸೌಲಭ್ಯಗಳು ಸಿಗುವುದಿಲ್ಲ. ಹಳ್ಳಿಯ ಸರಳ ಜೀವನಕ್ಕೆ ಒಗ್ಗಬೇಕು ಹಾಗೂ ಕುಟುಂಬದವರಿಂದ ದೂರವಿರಬೇಕು. ಕೃಷಿ ಕೆಲಸ, ಜಾನುವಾರುಗಳ ಆರೈಕೆ, ಅಡುಗೆ, ಮನೆಯ ಜವಾಬ್ದಾರಿಗಳು, ಹಳ್ಳಿಯ ದಿನನಿತ್ಯದ ಕಠಿಣ ಕೆಲಸಗಳು... ಹೀಗೆ ಪ್ರತಿಯೊಂದು ಸವಾಲೂ ಸ್ಪರ್ಧಿಗಳನ್ನು ಪರೀಕ್ಷಿಸಲಿದೆ.
ಇವರೇ ಹಳ್ಳಿ ಪವರ್ ಸೀಸನ್ 2 ಸ್ಪರ್ಧಿಗಳು
ಸ್ನೇಹ ಹೆಚ್, ಬಿಬಿ ಹಾಜಿರಾ, ಏಂಜೆಲೀನ್, ರಿಗ್ಮ್ಯಾ ರಾಜಶ್ರೀ, ದರ್ಶಿನಿ ಗೌಡ, ಪೂಜಾ ಚಂದ್ರಶೇಖರ್, ಅನಿಷಾ ಲಕ್ಷ್ಮಣ್, ಸುಷ್ಮಾ ತೊಗರೆ, ತೇಜಸ್ವಿನಿ, ಅಂಕಿತ ದೇವ್, ಪೂರ್ವಿಕ ಆರ್ ಕೆ, ಚಿತ್ರಶ್ರೀ, ಪೂರ್ವ ವೈ, ರಚನಾ, ನಿಖಿತಾ ಸ್ವಾಮಿ, ನಿವೇದಿತಾ ರೈ ಹೀಗೆ ಸಿಟಿಯಲ್ಲಿ ಬೆಳೆದ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.