
ಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ
ಬೆಂಗಳೂರು: ಸ್ವಚ್ಚ, ಸುರಕ್ಷಿತ ಬೆಂಗಳೂರಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜತೆ ಕೈಜೋಡಿಸಿರುವ ಬೆಸ್ಕಾಂ, ನಗರದ ಜನರಿಗೆ ಸುರಕ್ಷಿತ ನಡಿಗೆಯ ಗ್ಯಾರಂಟಿ ನೀಡುವ ಉದ್ದೇಶದಿಂದ ಹಲವೆಡೆ ಪಾದಚಾರಿ ಮಾರ್ಗಗಳಲ್ಲಿ ಶನಿವಾರ ಹಾಗೂ ಭಾನುವಾರ ಸ್ವಚ್ಛತಾ ಅಭಿಯಾನ ಆರಂಭಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿರುವ ಕ್ಲೀನ್ ಅಪ್ ಬೆಂಗಳೂರು ತಿಂಗಳ ಅಭಿಯಾನದ ಭಾಗವಾಗಿ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರು ಆಗಸ್ಟ್ 1ರಂದು ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಇಂಧನ ಸಚಿವರ ಸೂಚನೆಯಂತೆ, ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ಬೆಳಗ್ಗೆ 7ಕ್ಕೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರು ಯಲಹಂಕದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು. ಯಲಹಂಕ, ಸಹಕಾರ ನಗರ, ದಾಸರಹಳ್ಳಿ, ಹೆಬ್ಬಾಳ, ಎಂಎಸ್ಆರ್ ನಗರ, ಹೆಚ್ಬಿಆರ್ ಬಡಾವಣೆ, ಕೃಷ್ಣರಾಜಪುರ, ಚನ್ನಸಂದ್ರ ಮುಖ್ಯರಸ್ತೆ, ವೈಟ್ಫೀಲ್ಡ್, ಬೆಳ್ಳಂದೂರು, ಹೆಚ್ಎಸ್ಆರ್ ಬಡಾವಣೆ, ಜೆಪಿ ನಗರ, ಶಿವಾಜಿ ನಗರ ಸೇರಿದಂತೆ ವಿವಿಧೆಡೆ ಪಾದಚಾರಿ ಮಾರ್ಗಗಳಲ್ಲಿರುವ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ಇತರ ಪರಿಕರಗಳನ್ನು ತೆರವುಗೊಳಿಸಲಾಯಿತು.
ʼಆಗಸ್ಟ್ 1ರಂದು ಅಭಿಯಾನದ ಆರಂಭವಾದಾಗನಿಂದ (ಆಗಸ್ಟ್ 8ರ ವರೆಗೆ) 356 ವಿದ್ಯುತ್ ಕಂಬಗಳು, 10 ಟ್ರಾನ್ಸ್ಫಾರ್ಮರ್ ಕೇಂದ್ರಗಳು, 199 ಇತರೆ ಮೂಲಸೌಕರ್ಯ ಕಾಮಗಾರಿಗಳು ಹಾಗೂ 323 ಜಿಎಸ್ ಆಪರೇಟಿಂಗ್ ರಾಡ್ಗಳ ಮಾರ್ಪಾಡು ಮಾಡಲಾಗಿದೆ. ಅಭಿಯಾನದಡಿ 1,730 ಡಿಟಿಸಿ ಯಾರ್ಡ್ಗಳು, 411 ಆರ್ಎಂಯು ಯಾರ್ಡ್ಗಳು ಹಾಗೂ 383 ಸ್ಪನ್ ಪೋಲ್/ಡಿಪಿ ಯಾರ್ಡ್ಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, 101 ಫೀಡರ್ ಪಿಲ್ಲರ್ ಬಾಕ್ಸ್ ರಿವೈರಿಂಗ್ ಮತ್ತು ಯಾರ್ಡ್ ಸ್ವಚ್ಛತಾ ಕಾಮಗಾರಿಗಳು ಹಾಗೂ 39 ಕಂಬಗಳ ರಿವೈರಿಂಗ್ ಮತ್ತು ಯಾರ್ಡ್ ಸ್ವಚ್ಛತಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆʼ ಎಂದು ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.
ʼಕ್ಲೀನ್ ಅಪ್ ಬೆಂಗಳೂರು ಅಭಿಯಾನಕ್ಕೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಿ ಇದನ್ನು ಆಂದೋಲನದ ರೀತಿ ರೂಪಿಸಲಾಗಿದೆ. ನೂರಾರು ಅಧಿಕಾರಿಗಳು, ಸಿಬ್ಬಂದಿ, ಸಾವಿರಾರು ಪವರ್ಮೆನ್ಗಳ ದೊಡ್ಡ ತಂಡದೊಂದಿಗೆ ಶನಿವಾರ ಕಾರ್ಯಾಚರಣೆ ನಡೆಸಲಾಗಿದ್ದು, ಇದೇ ರೀತಿ ಭಾನುವಾರವೂ ಕಾರ್ಯಾಚರಣೆ ಮುಂದುವರಿಯಲಿದೆʼ ಎಂದು ಹೇಳಿದ್ದಾರೆ.