
ಹುಬ್ಬಳ್ಳಿ | ಬೀಡಾಡಿ ದನಗಳ ಹಾವಳಿ: ಜನರಿಗೆ ತಪ್ಪದ ಗೋಳು
ಹುಬ್ಬಳ್ಳಿ: ನಗರದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇವುಗಳಿಂದ ಸಾರ್ವಜನಿಕರಿ, ವಾಹನ ಸವಾರರು, ಬೀದಿಬದಿ ವ್ಯಾಪಾರಿಗಳು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ರೈಲು ನಿಲ್ದಾಣದಿಂದ ಸಿಬಿಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿತ್ಯ ಹತ್ತಾರು ಬೀಡಾಡಿ ದನಗಳು ಮಲಗಿರುತ್ತವೆ. ಈ ಮಾರ್ಗದಲ್ಲಿ ವೇಗವಾಗಿ ಸಂಚರಿಸುವ ಬಸ್, ಕಾರು, ಜೀಪು ಹಾಗೂ ಬೈಕ್ಗಳು ಏಕಾಏಕಿ ಬ್ರೇಕ್ ಹಾಕುವ ಕಾರಣ ವಾಹನಗಳು ಸಾಲುಗಟ್ಟಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.
ಕಿತ್ತೂರು ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಹೊಸೂರು ಕ್ರಾಸ್, ಗೋಕುಲ ರಸ್ತೆ, ಶಿರೂರು ಪಾರ್ಕ್, ಉಣಕಲ್ ಕೆರೆ, ಎಪಿಎಂಸಿ ಮಾರುಕಟ್ಟೆ, ಸಿಬಿಟಿ, ಹಳೇ ಹುಬ್ಬಳ್ಳಿ, ಕಾರವಾರ ರಸ್ತೆಯ ಇಂಡಿ ಪಂಪ್ ಹೀಗೆ ಹಲವು ಕಡೆ ಬೀಡಾಡಿ ದನಗಳ ಹಾವಳಿ ಮೀತಿ ಮೀರಿದೆ. ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಆಡಳಿತ ಮೌನ ವಹಿಸಿದೆ ಎಂಬುದು ಜನರ ಆರೋಪ.
‘ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ಬೀಡಾಡಿ ದನಗಳಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಕೆಲವು ಸರಿ ಅಪಘಾತಕ್ಕೂ ಇವು ಕಾರಣವಾಗಿವೆ. ಅವುಗಳನ್ನು ಹಿಡಿದು ಬೇರೆಡೆ ಸಾಗಿಸುವ ಕೆಲಸವನ್ನು ಪಾಲಿಕೆ ಮಾಡಬೇಕು. ಅವುಗಳ ಮಾಲೀಕರಿಗೆ ದಂಡ ವಿಧಿಸಿ ಕಠಿಣ ಎಚ್ಚರಿಕೆ ನೀಡಬೇಕು’ ಎಂಬುದು ಸಾರ್ವಜನಿಕರ ಆಗ್ರಹ.
‘ಬೀಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಹಲವು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿದರೂ, ಸಮಸ್ಯೆ ಬಗೆಹರಿದಿಲ್ಲ. ಇವುಗಳಿಂದ ಸಂಚಾರ ದಟ್ಟಣೆಯೂ ಆಗುತ್ತಿದೆ’ ಎಂದು ವಾಹನ ಸವಾರ ರಮೇಶ ದೂರಿದರು.
‘ಬೀಡಾಡಿ ದನಗಳನ್ನು ನಿಯಂತ್ರಿಸುವುದು ಪಾಲಿಕೆ ಕೆಲಸ. ಆದರೆ, ಸಂಚಾರ ನಿಯಂತ್ರಣದಲ್ಲಿ ತೊಡಗಿರುವ ಪೊಲೀಸರೇ ಎಷ್ಟೋ ಬಾರಿ ದನಗಳನ್ನು ಓಡಿಸುವ ಕೆಲಸ ಮಾಡಬೇಕಾಗುತ್ತದೆ’ ಎಂದು ಹುಬ್ಬಳ್ಳಿಯ ಸಂಚಾರ ವಿಭಾಗದ ಪೊಲೀಸರೊಬ್ಬರು ತಿಳಿಸಿದರು.
‘ನಗರದಲ್ಲಿ ಬೀಡಾಡಿ ದನಗಳ ಹಾವಳಿ ನಿಯಂತ್ರಿಸಲು ಪಾಲಿಕೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ದನಗಳನ್ನು ಹಿಡಿಯುವ ಪರಿಣಿತರು ಸ್ಥಳೀಯವಾಗಿ ಸಿಗುತ್ತಿಲ್ಲ. ರಸ್ತೆಯಲ್ಲಿ ಸಂಚರಿಸುವ ದನಗಳ ಮಾಲೀಕರಿಗೆ ದಂಡ ಹಾಕುವುದು ಹಾಗೂ ಈ ದನಗಳನ್ನು ಹಿಡಿದು ಬೇರೆ ಕಡೆಗೆ ಸಾಗಿಸುವ ಚಿಂತನೆ ಇದೆ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಪ ಆಯುಕ್ತರು (ಅಭಿವೃದ್ಧಿ) ವಿಜಯಕುಮಾರ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-24-1976632546