
ಋತುಸ್ರಾವದ ನಡುವೆಯೇ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ಜ್ಞಾನೇಶ್ವರಿ ಯಾದವ್
ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 53 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎಲ್ಲರ ಕಣ್ಣು ಕೂಡ ಆ 23 ವರ್ಷದ ಯುವ ವೇಟ್ಲಿಫ್ಟರ್ ಮೇಲಿತ್ತು. ಏಷ್ಯನ್ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತೆಯಾಗಿದ್ದ ಆವರ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆದರೆ ಅದು ಅವರ ಋತುಚಕ್ರದ ಮೊದಲ ದಿನ. ಒಂದು ಕಡೆ ಮಾನಸಿಕ ಒತ್ತಡ, ಮತ್ತೊಂದು ಕಡೆ ದೈಹಿಕ ನೋವು. ಆದರೆ, ಅವರು ಆ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಭಾರತಕ್ಕಾಗಿ ಕಾಮನ್ವೆಲ್ತ್ನಲ್ಲಿ ಬೆಳ್ಳಿ ಪದಕ ಗೆದ್ದರು.
ಇದು ಈ ಬಾರಿಯ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಜ್ಞಾನೇಶ್ವರಿ ಯಾದವ್ ಅವರ ಕಥೆ.
ರಾಜನಂದಗಾಂವ್ನಿಂದ ಜಾಗತಿಕ ವೇದಿಕೆಗೆ:
ಜ್ಞಾನೇಶ್ವರಿ ಯಾದವ್ ಅವರು ಛತ್ತೀಸಗಢದ ರಾಜನಂದಗಾಂವ್ ಮೂಲದವರು. ಅವರ ತಂದೆ ದೀಪಕ್ ಯಾದವ್ ಅವರು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್. ಪ್ರವೃತ್ತಿಯಲ್ಲಿ ದೇಹದಾರ್ಢ್ಯಪಟು. ಆರ್ಥಿಕ ಸಂಕಷ್ಟದಿಂದ ಕ್ರೀಡೆಯಲ್ಲಿ ಮುಂದುವರಿಯಲು ಸಾಧ್ಯವಾಗದ ಅವರು, ಮಕ್ಕಳನ್ನು ಕ್ರೀಡಾಪಟುಗಳನ್ನಾಗಿಸಬೇಕೆಂಬ ಆಸೆ ಹೊಂದಿದ್ದರು. ಇದು ಜ್ಞಾನೇಶ್ವರಿ ಅವರನ್ನು ಕ್ರೀಡಾಲೋಕಕ್ಕೆ ಕಾಲಿಡುವಂತೆ ಮಾಡಿತು.
ಆರಂಭದಲ್ಲಿ ಪಟಿಯಾಲದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ಅವರು, ನಂತರ ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ನ ಸಹಕಾರದಿಂದ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಮತ್ತು ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು
ಗ್ಲಾಸ್ಗೊದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಜ್ಞಾನೇಶ್ವರಿ ಯಾದವ್ ಅವರು ‘ಸ್ನ್ಯಾಚ್’ ವಿಭಾಗದಲ್ಲಿ 88 ಕೆ.ಜಿ ಮತ್ತು 'ಕ್ಲೀನ್ ಅಂಡ್ ಜರ್ಕ್' ವಿಭಾಗದಲ್ಲಿ 111 ಕೆ.ಜಿ ಸೇರಿದಂತೆ ಒಟ್ಟು 199 ಕೆ.ಜಿ ತೂಕವನ್ನು ಎತ್ತುವ ಮೂಲಕ ಭಾರತಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟರು. 'ಕ್ಲೀನ್ ಅಂಡ್ ಜರ್ಕ್' ವಿಭಾಗದಲ್ಲಿ ಇದು ಅವರ ವೈಯಕ್ತಿಕ ಸಾಧನೆಯಾಗಿದೆ. ಪದಕ ಪಡೆದ ನಂತರ ಅವರು ಮಾತನಾಡಿದ್ದು, ಜಗತ್ತಿನ ಗಮನ ಸೆಳೆಯಿತು.
ಪಂದ್ಯದ ನಂತರದ ಸಂದರ್ಶನದಲ್ಲಿ ಮಾತನಾಡಿದ ಜ್ಞಾನೇಶ್ವರಿ ಯಾದವ್ ಅವರು, ‘ಇಂದು ನನ್ನ ಋತುಸ್ರಾವದ ಮೊದಲ ದಿನವೇ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನನ್ನ ದೇಹ ಹೇಗೆ ಸ್ಪಂದಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಆದ್ದರಿಂದ ನಾನು ನನ್ನ ಅತ್ಯುತ್ತಮ ಪ್ರಯತ್ನ ನೀಡಿದೆ, ತರಬೇತುದಾರರು ನನ್ನ ಮೇಲೆ ನಂಬಿಕೆ ಇಟ್ಟು 111 ಕೆಜಿ ಎತ್ತುವ ಸವಾಲು ನೀಡಿದರು. ನಾನು ತರಬೇತಿಯಲ್ಲಿ ಆ ಭಾರವನ್ನು ಎತ್ತಿದ್ದೆ’ ಎಂದು ಹೇಳಿದ್ದಾರೆ.
ಋತುಸ್ರಾವದ ಮೊದಲ ದಿನ ಕಠಿಣ ಶಾರೀರಿಕ ಸವಾಲುಗಳನ್ನು ತರುತ್ತದೆ. ಈ ವೇಳೆ ಹೊಟ್ಟೆನೋವು, ಆಯಾಸ ಮತ್ತು ಶಕ್ತಿಯಲ್ಲಿ ಏರಿಳಿತವಾಗುವುದು ಸಾಮಾನ್ಯ. ನನ್ನ ದೇಹದ ತೂಕಕ್ಕಿಂತ ಎರಡರಷ್ಟು ಹೆಚ್ಚಿನ ಭಾರವನ್ನು ಎತ್ತಬೇಕಾದ ಸವಾಲು ನನ್ನ ಮುಂದಿತ್ತು. ಆದರಲ್ಲೂ ಕ್ರೀಡಾಪಟುವಿಗೆ ಈ ಶಾರೀರಿಕ ಅಡೆತಡೆಗಳು ಅತ್ಯಂತ ಕಠಿಣವಾಗಿರುತ್ತವೆ. ಆದಾಗ್ಯೂ ನಾನು ಮಾನಸಿಕ ಸ್ಥಿರತೆ ಕಾಪಾಡಿಕೊಂಡೆ ಮತ್ತು ನನ್ನ ಮೇಲೆ ತರಬೇತುದಾರರು ಸಂಪೂರ್ಣ ನಂಬಿಕೆಯಿಟ್ಟಿದ್ದರಿಂದ ಇದು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ತನ್ನ ಸಾಧನೆಗೆ ಭಾರತದ ಅನುಭವಿ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರು ಸ್ಪೂತಿಯಾಗಿದ್ದಾರೆ ಎಂದು ಜ್ಞಾನೇಶ್ವರಿ ಯಾದವ್ ಹೇಳಿದ್ದಾರೆ.
ಮಹಿಳಾ ಕ್ರೀಡಾಲೋಕದಲ್ಲಿ ಮುಕ್ತ ಚರ್ಚೆಗೆ ಹಾದಿ:
ಜ್ಞಾನೇಶ್ವರಿ ಯಾದವ್ ಅವರ ಈ ಮುಕ್ತ ಹೇಳಿಕೆಯು ಕ್ರೀಡಾಲೋಕದಾದ್ಯಂತ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರಪಂಚದ ಹಲವು ಭಾಗಗಳಲ್ಲಿ ಮತ್ತು ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ, ಋತುಸ್ರಾವದ ಸಮಯದಲ್ಲಿ ಮಹಿಳೆಯರು ವಿಶ್ರಾಂತಿ ಪಡೆಯಬೇಕು ಅಥವಾ ದೈಹಿಕ ಶ್ರಮದಿಂದ ದೂರವಿರಬೇಕು ಎಂಬ ಮೂಢನಂಬಿಕೆಗಳು ಇನ್ನೂ ಇವೆ. ಹಾರ್ಮೊನ್ ಏರಿಳಿತಗಳು ಶಾರೀರಿ ಅಸ್ವಸ್ಥತೆಯನ್ನು ಉಂಟುಮಾಡಿದರೂ, ಸೂಕ್ತ ತರಬೇತಿ ಮತ್ತು ಮಾನಸಿಕ ಸಿದ್ಧತೆಯಿಂದ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಬಹುದು ಎಂದು ಕ್ರೀಡಾ ವೈದ್ಯಕೀಯ ತಜ್ಞರು ತಿಳಿಸುತ್ತಾರೆ.