
‘ಅಯೋಗ್ಯನನ್ನು ಮತ್ತೆ ಉಳಿಸಿದ್ದೀರಿ’ ಸಿನಿಮಾ ಬಿಡುಗಡೆ ಬಳಿಕ ಸತೀಶ್ ಪ್ರತಿಕ್ರಿಯೆ
ನಟ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅಯೋಗ್ಯ–2 ಸಿನಿಮಾ ಆಗಸ್ಟ್ 7ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಸತೀಶ್ ನೀನಾಸಂ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡು, ಸಿನಿಮಾದ ಬಿಡುಗಡೆಯ ಬಳಿಕ ಅಭಿಮಾನಿಗಳು ನೀಡುತ್ತಿರುವ ಪ್ರತಿಕ್ರಿಯೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಡಿಯೊದಲ್ಲಿ, ನಟ ಗಿರಿ ಕೂಡ ಇದ್ದು, ಇಬ್ಬರೂ ಒಟ್ಟಿಗೆ ಕಾರಿನಲ್ಲಿ ಪ್ರಯಾಣ ಮಾಡುವ ವೇಳೆ ‘ನಾವು ತುಂಬಾನೆ ಖುಷಿ ಆಗಿದ್ದೀವಿ, ಸಂತೋಷವಾಗಿದ್ದೀವಿ. ಚಿತ್ರ ಎಲ್ಲ ಕಡೆಗೆ ಹೌಸ್ ಫುಲ್ ಆಗಿದೆ. ಇದನ್ನ ನೋಡಿ ತುಂಬಾ ಸಂತೋಷವಾಗಿದೆ’ ಎಂದು ಹೇಳಿಕೊಂಡಿದ್ದಾರೆ.
‘ನಮ್ಮ ಇಡೀ ಚಿತ್ರತಂಡ ಇದಕ್ಕಾಗಿಯೇ ಕಾಯುತ್ತಿದ್ದೆವು. ಸಿನಿಮಾ ನೋಡಿದ ಎಲ್ಲರೂ ಉತ್ತಮ ವಿಮರ್ಶೆ ನೀಡುತ್ತಿದ್ದೀರಿ. ನಮ್ಮ ಚಿತ್ರತಂಡ ಪರವಾಗಿದೆ ಎಲ್ಲರಿಗೂ ಧನ್ಯವಾದಗಳು. ಅಯೋಗ್ಯನನ್ನು ಮತ್ತೆ ಉಳಿಸಿದ್ದೀರಿ, ಕಾಪಾಡಿಕೊಂಡಿದ್ದೀರಿ. ಇದಕ್ಕಿಂತ ಮತ್ತೇನೂ ಬೇಕಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳನ್ನು ಕೊಡುತ್ತೇವೆ’ ಎಂದು ವಿಡಿಯೊದಲ್ಲಿ ಅಭಿಮಾನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
2018ರಲ್ಲಿ ತೆರೆಕಂಡ 'ಅಯೋಗ್ಯ' ಸಿನಿಮಾದ ಮುಂದುವರಿದ ಭಾಗ ಇದಾಗಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ರವಿಶಂಕರ್, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ 'ಅಯೋಗ್ಯ' ಸಿನಿಮಾದಲ್ಲಿ ಅಭಿನಯಿಸಿದ ಬಹುತೇಕ ಕಲಾವಿದರು ಸೀಕ್ವೆಲ್ನಲ್ಲೂ ಇದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ರವಿಶಂಕರ್, ಸಾಧುಕೋಕಿಲ, ತಬಲಾ ನಾಣಿ, ಸುಂದರ್ರಾಜ್, ಶಿವರಾಜ್ ಕೆ.ಆರ್.ಪೇಟೆ, ಮಂಜು ಪಾವಗಡ, ಕಿರಣ್ ನಾಯ್ಕ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಿನಿಮಾವನ್ನು ಎಂ.ಮುನೇಗೌಡ ಅವರು ನಿರ್ಮಾಣ ಮಾಡಿದ್ದಾರೆ.