
ಚನ್ನಮ್ಮನ ಕಿತ್ತೂರು ಬಸವೇಶ್ವರ ಕಾಲೊನಿ: ರಸ್ತೆ ಗುಂಡಿಯಿಂದ ತಪ್ಪದ ಸಂಕಷ್ಟ
ಚನ್ನಮ್ಮನ ಕಿತ್ತೂರು: ಇಲ್ಲಿನ ಸೋಮವಾರ ಪೇಟೆಯ ನಿಚ್ಚಣಕಿ ಮಾರ್ಗದಲ್ಲಿರುವ ಬಸವೇಶ್ವರ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ತಗ್ಗುಗಳು ಬಿದ್ದು ನೀರು ಸಂಗ್ರಹಗೊಂಡಿದೆ. ಇದರಿಂದ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಓಡಾಡಲು ತೊಂದರೆಯಾಗಿದ್ದು, ಪರಿಹಾರ ಮಾತ್ರ ಶೂನ್ಯವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ದಶಕಗಳ ಹಿಂದೆ ನಿರ್ಮಾಣಗೊಂಡ ಈ ಬಡಾವಣೆಯಲ್ಲಿ 15ಕ್ಕೂ ಹೆಚ್ಚು ಕುಟುಂಬ ವಾಸಿಸುತ್ತವೆ. ಇದೇ ಬಡಾವಣೆ ಬಳಿ ಅಂಗನವಾಡಿ ಕೇಂದ್ರ ಇದೆ. ನಿತ್ಯವೂ ಅಲ್ಲಿಗೆ ಮಕ್ಕಳು ಓಡಾಡುತ್ತಾರೆ. ಹದಗೆಟ್ಟ ರಸ್ತೆಯಿಂದಾಗಿ ಎಲ್ಲರೂ ಪರದಾಡುವಂತಾಗಿದೆ ಎನ್ನುತ್ತಾರೆ ಅಲ್ಲಿಯ ನಿವಾಸಿಗಳು.
ರಸ್ತೆಯೇನೂ ತುಂಬಾ ಉದ್ದವಾಗಿಲ್ಲ. ಕೇವಲ 250 ಅಂದಾಜು ಮೀಟರ್ ಉದ್ದವಿರುವ ರಸ್ತೆಯಲ್ಲಿ ಅಲ್ಲಲ್ಲಿ ಬಿದ್ದಿರುವ ಗುಂಡಿಗಳನ್ನು ಮಳೆಗಾಲದಲ್ಲಾದರೂ ಮುಚ್ಚುವ ಗೋಜಿಗೆ ಪಟ್ಟಣ ಪಂಚಾಯಿತಿ ಹೋಗಿಲ್ಲ. ಮಳೆ ಬೀಳುವ ಸಮಯದಲ್ಲಾದರೂ ಜನರ ಕಾಳಜಿಯನ್ನು ಪಂಚಾಯಿತಿ ಮಾಡಬೇಕಿತ್ತು ಎಂದು ಅವರು ಹೇಳುತ್ತಾರೆ.
8 ವರ್ಷ ಸವೆಸಿದ ರಸ್ತೆ: ಎಂಟು ವರ್ಷಗಳ ಹಿಂದೆ ಈ ರಸ್ತೆ ದುರಸ್ತಿ ಭಾಗ್ಯ ಕಂಡಿತ್ತು. ನಂತರ 2021ರಲ್ಲಿ ರಸ್ತೆಗೆ ತಾತ್ಕಾಲಿಕವಾಗಿ ಮೆಟಲಿಂಗ್ ಕಾಮಗಾರಿ ಕೈಗೊಳ್ಳಲಾಗಿತ್ತು. ಮಳೆಗೆ ಸಿಕ್ಕು ಅದೂ ಸರಿಯಾಗಿ ಉಳಿಯಲಿಲ್ಲ. ಅಲ್ಲಲ್ಲಿ ಗುಂಡಿ ಜನ್ಮ ತಾಳಿದವು. ಇದರಲ್ಲೀಗ ನೀರು ಆಶ್ರಯ ಪಡೆದುಕೊಂಡು ನಿಂತಿದೆ. ಇದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯನ್ನು ತಂದೊಡ್ಡಿದೆ ಎಂದು ನಿವಾಸಿಗಳು ನೋವು ತೋಡಿಕೊಂಡರು.
ಕಾಲೊನಿಯ ಮುಖ್ಯ ರಸ್ತೆಗಳ ಕಡೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕಿತ್ತು. ಅವರೂ ಈ ಕಡೆಗೆ ತಲೆ ಹಾಕಲು ಹೋಗಿಲ್ಲ. ಮಕ್ಕಳು, ವೃದ್ಧರು ಜಾರಿ ಬಿದ್ದರೆ ನಮಗೇನು ಎಂಬ ನಿರ್ಲಕ್ಷ್ಯ ಧೋರಣೆ ಅವರದ್ದಾಗಿರಬಹುದು ಎಂದು ಆರೋಪಿಸುತ್ತಾರೆ.
ಯುವಕರನ್ನು ಬಿಡಿ, ಅಂಗನವಾಡಿಗೆ ತೆರಳುವ ಮಕ್ಕಳು, ಕಾಲೊನಿಯ ವೃದ್ಧರ ಸಂಚಾರ ಸಂಕಷ್ಟ ನೋಡಿಯಾದರೂ ಗುಂಡಿಗಳನ್ನು ಮುಚ್ಚಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಕಿರಣ ವಾಳದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಬಸವೇಶ್ವರ ಕಾಲೊನಿ ನಿವಾಸಿಗಳ ಗೋಳು ಏನೆಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೇಳಲು ಹೋಗಿಲ್ಲ. ನಾನು ಸದಸ್ಯನಾಗಿದ್ದಾಗ ಮೆಟಲಿಂಗ್ ಮಾಡಿಸಿದ್ದೆ. ನಂತರ ಏನೂ ಕೆಲಸವಾಗಿಲ್ಲ ಕಿರಣ ವಾಳದ, ಮಾಜಿ ಸದಸ್ಯ, ಪಟ್ಟಣ ಪಂಚಾಯಿತಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-21-1025552802