
ಪ್ರಧಾನಿ ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆಗೆ ಮುಂದಾದ ದಸಂಸ ಮುಖಂಡರ ಬಂಧನ
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುವುದನ್ನು ವಿರೋಧಿಸಿ ಗೋ ಬ್ಯಾಕ್ ಮೋದಿ ಚಳುವಳಿಗೆ ಮುಂದಾಗಿದ್ದ ದಲಿತ ಸಂಘರ್ಷ ಸಮಿತಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ವಿವೇಕ ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಆಗಮವನ್ನು ವಿರೋಧಿಸಿ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಮುಂಭಾಗದಿಂದ ನಾರಾಯಣ ಶಾಸ್ತ್ರಿ ರಸ್ತೆಯ ವಿವೇಕ ಸ್ಮಾರಕದವರೆಗೆ ಜಾಥಾ ನಡೆಸಲು ಮುಂದಾಗಿದ್ದ ದಸಂಸ ಮುಖಂಡರನ್ನು ಪ್ರತಿಭಟನೆ ಮಾಡುವ ಮುನ್ನ ಕ್ಲಾಕ್ ಟವರ್ ಬಳಿ ಪೊಲೀಸರು ಬಂಧಿಸಿ ಕರೆದೊಯ್ದರು.
ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರನ್ನು ಶುಕ್ರವಾರ ರಾತ್ರಿಯೇ ಆಲನಹಳ್ಳಿ ಪೊಲೀಸರು ಚೋರನಹಳ್ಳಿಯಲ್ಲಿ ವಶಕ್ಕೆ ಪಡೆದು ಕರೆದೊಯ್ದಿದ್ದರು. ಇದಕ್ಕೆ ಬಗ್ಗದ ದಸಂಸ ಮುಖಂಡರು ದಸಂಸ ಸಂಚಾಲಕ ಎಡದೊರೆ ಮಹದೇವಯ್ಯ ಅವರ ನೇತೃತ್ವದಲ್ಲಿ ಗೋ ಬ್ಯಾಕ್ ಮೋದಿ ಚಳುವಳಿ ನಡೆಸಲು ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ಜಮಾಯಿಸಿದರು.
ವಿಷಯ ತಿಳಿದು ಮೊದಲೇ ಎಚ್ಚೆತ್ತುಕೊಂಡಿದ್ದ ಪೊಲೀಸರು, ಪ್ರತಿಭಟನೆ ನಡೆಸದಂತೆ ಒಂದು ಗಂಟೆಗೂ ಹೆಚ್ಚು ಕಾಲ ದಸಂಸ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನಾಕಾರರು, ನಾವು ಜಾಥ ಹೋಗುವುದಿಲ್ಲ ಹತ್ತು ನಿಮಿಷ ಪ್ರತಿಭಟನೆಗೆ ಕಾಲಾವಕಾಶ ನೀಡಿ ಎಂದು ಕೇಳಿಕೊಂಡರು ಪೊಲೀಸರು ಅವಕಾಶ ಕೊಡಲಿಲ್ಲ.
ಇದೇ ವೇಳೆ ಮಾತನಾಡಿದ ದಸಂಸ ಮುಖಂಡ ಎಡೆದೊರೆ ಮಹದೇವಯ್ಯ, ಹೋರಾಟ ನಮ್ಮ ಹಕ್ಕು ಅದಕ್ಕೆ ಅವಕಾಶ ಮಾಡಿಕೊಡಿ, ಹೋರಾಟವನ್ನು ಹತ್ತಿಕ್ಕಬೇಡಿ ಎಂದು ಹೇಳಿದರು.
ನೀಟ್ ಹಗರಣದಿಂದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬದವರಿಗೆ ಪರಿಹಾರ ನೀಡಿಲ್ಲ. ಆ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕೊಟ್ಟಿಲ್ಲ, ಜೊತೆಗೆ ರಾಮಕೃಷ್ಣ ಆಶ್ರಮದವರು ಎನ್ಟಿಎಂ ಹೆಣ್ಣು ಮಕ್ಕಳ ಶಾಲೆ ಇದ್ದ ಜಾಗದಲ್ಲಿ ಮಾತಿಗೆ ತಪ್ಪಿ ವಿವೇಕ ಸ್ಮಾರಕ ನಿರ್ಮಾಣ ಮಾಡಿದ್ದಾರೆರ. ಇದನ್ನು ಯಾವ ನೈತಿಕತೆ ಇಟ್ಟುಕೊಂಡು ಮೋದಿ ಉದ್ಘಾಟನೆ ಮಾಡಲು ಬರುತ್ತಿದ್ದಾರೆ? ಹಾಗಾಗಿ ಗೋ ಬ್ಯಾಕ್ ಮೋದಿ ಚಳುವಳಿ ಮಾಡುತ್ತೇವೆ ಎಂದರು.
ಮುಖಂಡರನ್ನು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದೊಯ್ದರು.