
ಶಿರಸಿ: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಡಿಕೆ ಕೊಳೆ ರೋಗ ತೀವ್ರ
ಶಿರಸಿ: ಜುಲೈ ತಿಂಗಳ ಮಧ್ಯ ಭಾಗದಿಂದ ಆಗಸ್ಟ್ ಮೊದಲ ವಾರದವರೆಗೆ ಸುರಿದ ನಿರಂತರ ಮಳೆಯ ಕಾರಣಕ್ಕೆ ಶಿರಸಿ, ಸಿದ್ದಾಪುರ ತಾಲ್ಲೂಕುಗಳ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ತೀವ್ರವಾಗಿ ಆವರಿಸಿದೆ. ಮೋಡ ಕವಿದ ವಾತಾವರಣದಿಂದ ತೋಟಗಳಲ್ಲಿ ಎಳೆಯ ಅಡಿಕೆ ಉದುರು ವ್ಯಾಪಕವಾಗಿದೆ.
ಮುಂಗಾರು ಆರಂಭದದಲ್ಲಿ ಮಳೆ ಕಡಿಮೆ ಇದ್ದ ಕಾರಣಕ್ಕೆ ಅನೇಕ ರೈತರು ಬೋರ್ಡೋ ಸಿಂಪಡಣೆ ವಿಳಂಬ ಮಾಡಿದ್ದರು. ಅಲ್ಲದೆ, ಬೋರ್ಡೋ ತಯಾರಿಕೆಗೆ ಬಳಸುವ ಮೈಲು ತುತ್ತದ ದರವು ಪ್ರತಿ ಕೆಜಿಗೆ ₹300ರಿಂದ ಏಕಾಏಕಿ ₹500ಕ್ಕೆ ಏರಿಕೆಯಾಗಿದ್ದರಿಂದ ರೈತರಿಗೆ ಆರ್ಥಿಕ ಹೊರೆಯೂ ಹೆಚ್ಚಾಗಿತ್ತು.
‘ಕಳೆದ ಎರಡು ವರ್ಷವೂ ಅಧಿಕ ಮಳೆಯಿಂದಾಗಿ ಕೊಳೆ ರೋಗ ವ್ಯಾಪಕವಾಗಿ ಹಬ್ಬಿತ್ತು. ಈ ವರ್ಷ ಜೂನ್ ಸಂಪೂರ್ಣ ತಿಂಗಳು ಮಳೆ ಇರದಿದ್ದಾಗ ರೈತರಲ್ಲಿ ಸಮಾಧಾನ ಇತ್ತು. ಈಚೆಗೆ ಸುರಿದ ಭಾರಿ ಮಳೆ ರೈತರ ಯೋಚನೆಗಳನ್ನೆಲ್ಲ ತಲೆಕೆಳಗು ಮಾಡಿದೆ’ ಎನ್ನುತ್ತಾರೆ ಬೆಳೆಗಾರ ರಾಮಚಂದ್ರ ಹೆಗಡೆ ಗೋಳಿಕಟ್ಟಾ.
‘ಜುಲೈ ಮಧ್ಯಭಾಗದಲ್ಲಿ ತೋಟಗಳಲ್ಲಿ ಅಲ್ಲಲ್ಲಿ ಒಂದೆರಡು ಮರಗಳಲ್ಲಿ ಕಾಣಿಸಿಕೊಂಡಿದ್ದ ಕೊಳೆ ರೋಗವು, ಮಳೆಯ ಆರ್ಭಟ ಜಾಸ್ತಿಯಿದ್ದ ಕಾರಣ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಹಲವು ರೈತರು ಮಳೆಯಲ್ಲೇ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದ್ದರಾದರೂ, ಅದು ಪರಿಣಾಮ ಬೀರದೆ ಕೊಳೆ ರೋಗ ವ್ಯಾಪಕವಾಗಿ ಹರಡಿದೆ. ಎಳೆ ಅಡಿಕೆಗಳು ಕೊಳೆತು ನೆಲಕ್ಕೆ ಉದುರಲಾರಂಭಿಸಿವೆ’ ಎಂದು ರೈತ ಕೇಶವ ಹೆಗಡೆ ಕೊಪ್ಪ ಹೇಳಿದರು.
‘ಸಂಪಖಂಡ, ಹುಲೇಕಲ್, ಮತ್ತಿಗಾರ, ನೇರ್ಲವಳ್ಳಿ, ಗೋಳಿ, ಬಂಡಲ, ವಾನಳ್ಳಿ, ಜಡ್ಡಿಗದ್ದೆ, ಶಿವಳ್ಳಿ, ಬೆಣಗಾಂವ, ಬಾಳಗಾರ ಹಾಗೂ ಸಿದ್ದಾಪುರದ ನಿಲ್ಕುಂದ, ತಟ್ಟಿಕೈ, ದೊಡ್ಮನೆ ಸೇರಿದಂತೆ 40ಕ್ಕೂ ಅಧಿಕ ಗ್ರಾಮಗಳಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ತೀವ್ರವಾಗಿ ಆವರಿಸಿದೆ. ಪ್ರಸ್ತುತ 700 ಎಕರೆಗೂ ಅಧಿಕ ಕ್ಷೇತ್ರದಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ಪ್ರಸ್ತುತ ತೇವಾಂಶ ಹೊಂದಿದ ಹವಾಮಾನ ಇರುವುದರಿಂದ ರೋಗ ಇನ್ನಷ್ಟು ಹೆಚ್ಚುತ್ತಿದೆ’ ಎಂಬುದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
‘ತೋಟಗಾರಿಕೆ ಅಧಿಕಾರಿಗಳು ತೋಟಗಳಿಗೆ ತೆರಳಿ ಕೊಳೆ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ರೋಗಬಾಧಿತ ತೋಟಗಳ ಹಾನಿಯ ಪ್ರಮಾಣವನ್ನು ದಾಖಲಿಸಿಕೊಳ್ಳುತ್ತಿದ್ದಾರೆ’ ಎಂದೂ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-20-823954892