
ರಾಮ ಮಂದಿರ ಟ್ರಸ್ಟ್ ಸಿಇಒ ನೇಮಕಾತಿ: ಸಂದರ್ಶನ ಸುತ್ತಿಗೆ 18 ಅಭ್ಯರ್ಥಿಗಳ ಆಯ್ಕೆ
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಹುದ್ದೆಯ ಸಂದರ್ಶನದ ಸುತ್ತಿಗೆ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನದ ಮೂಲಗಳು ಪಿಟಿಐಗೆ ಸೋಮವಾರ(ಆ.10) ತಿಳಿಸಿವೆ.
ಸಿಇಒ ಹುದ್ದೆಗಾಗಿ 5,300 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಆಡಳಿತಾತ್ಮಕ ಅನುಭವವಿರುವ 18 ಜನರನ್ನು ಸಂದರ್ಶನ ಸುತ್ತಿಗೆ ಆಯ್ಕೆ ಮಾಡಲಾಗಿದೆ. 50ರಿಂದ 70 ವರ್ಷದೊಳಗಿನ ಹಿಂದೂ ಸಂಪ್ರದಾಯವನ್ನು ಪಾಲಿಸುವ, ಸಸ್ಯಾಹಾರಿ ಅಭ್ಯರ್ಥಿಗಳಿಗೆ ಮಣೆ ನೀಡಲಾಗಿದೆ.
ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಮಂಗಳವಾರ(ಆ.11) ಮತ್ತು ಬುಧವಾರ(ಆ.12) ದೇವಾಲಯದ ಆವರಣದಲ್ಲಿ ಸಂದರ್ಶನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಂದರ್ಶನ ನಡೆಸುವ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿಷ್ಣುಕಾಂತ್ ಚತುರ್ವೇದಿ ಮತ್ತು ಶಿರಡಿ ಸಾಯಿಬಾಬಾ ಟ್ರಸ್ಟ್ನ ಮಾಜಿ ಅಧ್ಯಕ್ಷ ಹಾಗೂ ವಿಜ್ಞಾನಿ ಸುರೇಶ್ ಹವಾರೆ ಅವರು ಇರಲಿದ್ದಾರೆ.
ರಾಮ ಮಂದಿರ ದೇಣಿಗೆ ಕಳವು ಪ್ರಕರಣದ ನಂತರ ಸಿಇಒ ನೇಮಕಾತಿ ಮಾಡಿಕೊಳ್ಳಲು ಟ್ರಸ್ಟ್ ಮುಂದಾಗಿದ್ದು, ದೇವಸ್ಥಾನಕ್ಕೆ ಸಂಬಂಧಿಸಿದ ಆಡಳಿತ ಮತ್ತು ವ್ಯವಹಾರಗಳನ್ನು ನಿರ್ವಹಿಸುವ ಹೊಣೆ ಇವರ ಮೇಲಿರಲಿದೆ.
ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ಎಸ್ಐಟಿ ರಚನೆ ಮಾಡಿದ್ದು, ಇದುವರೆಗೂ 8 ಆರೋಪಿಗಳನ್ನು ಬಂಧಿಸಲಾಗಿದೆ.