
ಮಹಾಲಿಂಗಪುರ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ|ಮಳಿಗೆಗಳ ಬಾಡಿಗೆ: ₹1.67 ಕೋಟಿ ಬಾಕಿ
ಮಹಾಲಿಂಗಪುರ: ಪಟ್ಟಣದ ಪುರಸಭೆಯು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ‘ಮೆತ್ತನೆ ಧೋರಣೆಗೆ’ ಸಾಕ್ಷಿಯಾಗಿದೆ.
ನಿಯಮಿತವಾಗಿ ಬಾಡಿಗೆ ವಸೂಲಿ ಮಾಡಬೇಕಾದ ಪುರಸಭೆಯು ತನ್ನ ಜವಾಬ್ದಾರಿಯಿಂದ ಹಿಂದೆ ಬಿದ್ದ ಪರಿಣಾಮ, ಬರೋಬ್ಬರಿ ₹1.67 ಕೋಟಿಗೂ ಅಧಿಕ ಬಾಡಿಗೆ ಹಣ ಬಾಕಿ ಉಳಿದಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಮಾಹಿತಿ ಪ್ರಕಾರ, 2019-20ನೇ ಸಾಲಿನಿಂದ 2026-27ನೇ ಸಾಲಿನವರೆಗೆ ಒಟ್ಟು ಬಾಕಿ ₹5.03 ಕೋಟಿಯಲ್ಲಿ ₹3.36 ಕೋಟಿ ವಸೂಲಿಯಾಗಿದ್ದು, ₹1.67 ಕೋಟಿ ಬಾಕಿ ಬರಬೇಕಿದೆ.
ವಿವಿಧ ಯೋಜನೆಗಳ ಅಡಿಯಲ್ಲಿ ಪುರಸಭೆ ವ್ಯಾಪ್ತಿಯ ಎಪಿಎಂಸಿ ರಸ್ತೆ, ಜೋಳದ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಗಾಂಧಿ ವೃತ್ತ, ಬಸ್ ನಿಲ್ದಾಣದ ಹತ್ತಿರ ಹಾಗೂ ತಿನಿಸು ಕಟ್ಟೆ ಸೇರಿ ಒಟ್ಟು 154 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 10ಕ್ಕೂ ಹೆಚ್ಚು ಮಳಿಗೆಗಳು ಖಾಲಿ ಬಿದ್ದಿವೆ.
ಪುರಸಭೆಯ ಹರಾಜಿನಲ್ಲಿ ಅತ್ಯಂತ ಕಡಿಮೆ ದರಕ್ಕೆ ಮಳಿಗೆ ಗಿಟ್ಟಿಸಿಕೊಂಡ ಕೆಲ ಪ್ರಭಾವಿಗಳು, ತಾವೇ ವ್ಯಾಪಾರ ಮಾಡದೆ ಬೇರೆಯವರಿಗೆ ದುಬಾರಿ ಬಾಡಿಗೆಗೆ ನೀಡಿ ಮಧ್ಯವರ್ತಿಗಳಾಗಿ ಹಣ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
‘ಪುರಸಭೆಯ ದಾಖಲೆಯಲ್ಲಿರುವ ಅಧಿಕೃತ ಬಾಡಿಗೆದಾರನೇ ಬೇರೆ, ಪ್ರತ್ಯಕ್ಷವಾಗಿ ಅಂಗಡಿ ನಡೆಸಿ ವ್ಯಾಪಾರ ಮಾಡುತ್ತಿರುವ ನೈಜ ವ್ಯಾಪಾರಿಯೇ ಬೇರೆ. ಈ ಸಬ್ಲೀಸ್ (ಉಪ-ಬಾಡಿಗೆ) ದಂಧೆಯಿಂದಾಗಿ ನೈಜ ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆಗೆ ಬರಬೇಕಾದ ₹1.67 ಕೋಟಿಗೂ ಅಧಿಕ ಸ್ವಂತ ಆದಾಯ ಕೈತಪ್ಪಿರುವುದರಿಂದ ಪಟ್ಟಣದ ರಸ್ತೆ, ಚರಂಡಿ, ದೀಪ ಹಾಗೂ ಕುಡಿಯುವ ನೀರಿನಂತಹ ಮೂಲಸೌಕರ್ಯಗಳಿಗೆ ಬಳಸಲು ಹಣವಿಲ್ಲದೆ ಪುರಸಭೆ ಪರದಾಡುವಂತಾಗಿದೆ. ಸರ್ಕಾರದ ಅನುದಾನವನ್ನೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-19-1887524343