
ಕಾವೇರಿ ವನ್ಯಧಾಮದಲ್ಲಿನ ಶೂಟೌಟ್ಗೆ ಪ್ರತೀಕಾರ ಶಂಕೆ: 10 ಎಕರೆ ಕಾಡು ಭಸ್ಮ
ಕೊಳ್ಳೇಗಾಲ (ಚಾಮರಾಜನಗರ): ಮಲೆ ಮಹದೇಶ್ವರ ವನ್ಯಧಾಮದ ಕೊಳ್ಳೇಗಾಲ ಬಫರ್ ವಲಯ ವ್ಯಾಪ್ತಿಯ ಜಾಗೇರಿ ಗ್ರಾಮದ ಶಿಲುಬೆಪುರ ಅರಣ್ಯದಲ್ಲಿ ಬುಧವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು 10 ಎಕರೆಗೂ ಹೆಚ್ಚು ಕಾಡು ಸುಟ್ಟು ಭಸ್ಮವಾಗಿದೆ.
ಮತ್ತೊಂದೆಡೆ ಜಾಗೇರಿ ಬಳಿಯ ಕಳ್ಳಬೇಟೆ ತಡೆ ಶಿಬಿರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ. ಶಿಬಿರದ ಪೀಠೊಪಕರಣ ಮತ್ತು ಸಲಕರಣೆಗಳನ್ನು ಧ್ವಂಸಗೊಳಿಸಿದ್ದಾರೆ.
ಕಾವೇರಿ ವನ್ಯಧಾಮದಲ್ಲಿ ಈಚೆಗೆ ನಡೆದ ಶೂಟೌಟ್ ಘಟನೆಗೆ ಪ್ರತೀಕಾರವಾಗಿ ಕಾಡಿಗೆ ಬೆಂಕಿ ಹಚ್ಚಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಅರಣ್ಯದ ಹಲವೆಡೆ ಬೆಂಕಿ ಹಚ್ಚಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು, ಬೆಂಕಿಯ ಕೆನ್ನಾಲಿಗೆಗೆ ನೂರಾರು ಮರಗಳು, ಹುಲ್ಲುಗಾವಲು ಹಾಗೂ ವನ್ಯಜೀವಿಗಳ ಆವಾಸ ಸ್ಥಾನಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಜೊತೆಗೂಡಿ ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು ಉದ್ದೇಶ ಪೂರ್ವಕವಾಗಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮಲೆ ಮಹದೇಶ್ವರ ವನ್ಯಧಾಮದ ಎಸಿಎಫ್ ವಿರಾಜ್ ಹೊಸೂರು ‘ಪ್ರಜಾವಾಣಿ’ಗೆ ತಿಳಿಸಿದರು.
ಸಿಬ್ಬಂದಿ ಯುದ್ಧೋಪಾದಿಯಲ್ಲಿ ಬೆಂಕಿ ನಂದಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಎಫ್ ಮಾಲತಿ ಪ್ರಿಯಾ
ತಿಳಿಸಿದರು.
ಎಂಟು ಶಿಬಿರ ಧ್ವಂಸ :ಶೂಟೌಟ್ ಘಟನೆ ಬಳಿಕ ಇದುವರೆಗೂ ಎಂಟು ಕಳ್ಳಬೇಟೆ ತಡೆ ಶಿಬಿರ ಹಾಗೂ ಒಂಬತ್ತು ವಸತಿ ಗೃಹಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.
10 ವರ್ಷಗಳಲ್ಲಿ ಚಾಮರಾಜನಗರ ವೃತ್ತ ವ್ಯಾಪ್ತಿಯ ಅರಣ್ಯದಲ್ಲಿ 3,289 ಅರಣ್ಯ ಅಪರಾಧ ಪ್ರಕರಣ ದಾಖಲಾಗಿವೆ. ಇವುಗಳಲ್ಲಿ 777 ವನ್ಯಜೀವಿ ಅಪರಾಧ, 378 ಕಳ್ಳಬೇಟೆ ಹಾಗೂ 66 ಫೈರಿಂಗ್ ಪ್ರಕರಣ ದಾಖಲಾಗಿವೆ.