
ಕರ್ನಾಟಕದ 10 ಜಿಲ್ಲೆಗಳಲ್ಲಿ ಈವರೆಗೂ ಭತ್ತದ ಬಿತ್ತನೆ ಪ್ರಮಾಣ ಅತ್ಯಲ್ಪ,ಕಾರಣವೇನು?
ಬೆಂಗಳೂರು: ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಈವರೆಗೂ 10 ಜಿಲ್ಲೆಗಳಲ್ಲಿ ಭತ್ತದ ಬಿತ್ತನೆ ಆರಂಭವಾಗಿಯೇ ಇಲ್ಲ. ಏಳು ಜಿಲ್ಲೆಗಳಲ್ಲಿ ಇನ್ನೂ ಬಿತ್ತನೆಯೇ ಆರಂಭವಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಈಗಷ್ಟೇ ಪ್ರಕ್ರಿಯೆ ಶುರುವಾಗಿದೆ.
ಕರ್ನಾಟಕ ದೇಶ ಪ್ರಮುಖ ಭತ್ತ ಬೆಳೆಯುವ ರಾಜ್ಯಗಳಲ್ಲಿ ಒಂದು. ಇಲ್ಲಿ ಮಳೆಯಾಶ್ರಿತವಾಗಿ ಭತ್ತ ಬೆಳೆಯುವ ಕೆಲವು ಜಿಲ್ಲೆಗಳಿದ್ದರೆ, ನಾಲೆ ನೀರು ಆಶ್ರಯಿಸಿ ಹೆಚ್ಚು ಜಿಲ್ಲೆಗಳಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ಈ ಬಾರಿ ಮಳೆಯೂ ಇಲ್ಲದೇ, ನಾಲೆಗಳಿಗೂ ನೀರು ಹರಿಸದೇ ಇರುವುದರಿಂದ ಭತ್ತ ಬಿತ್ತನೆ ಪ್ರಮಾಣ ಶೇ 20 ಅನ್ನು ದಾಟಿಲ್ಲ. ಏಳೆಂಟು ಜಿಲ್ಲೆಗಳಲ್ಲಿ ಮಾತ್ರ ಮಳೆ ನಂಬಿಯೇ ಬಿತ್ತನೆ ಮಾಡಲಾಗಿದೆ.
ಕರ್ನಾಟಕದಲ್ಲಿ 10 ಲಕ್ಷ ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಬಾರಿ ಬರೀ 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ಚಾಮರಾಜನಗರ, ಬಾಗಲಕೋಟೆ, ವಿಜಯಪುರ, ಮಂಡ್ಯ, ಮೈಸೂರು, ಬೆಂಗಳೂರು ದಕ್ಷಿಣ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬಿತ್ತನೆ ಪ್ರಮಾಣ ಶೂನ್ಯ ಇದೆ.
ಚಿತ್ರದುರ್ಗ, ಕೋಲಾರದಲ್ಲಿ ಶೇ 1, ಬೆಂಗಳೂರು ಗ್ರಾಮಾಂತರ, ರಾಯಚೂರು ಜಿಲ್ಲೆಗಳಲ್ಲಿ ಶೇ 2ರಷ್ಟು ಮಾತ್ರ ಭತ್ತದ ಬಿತ್ತನೆ ಪೂರ್ಣಗೊಂಡಿದೆ. ತುಮಕೂರು ಜಿಲ್ಲೆಯಲ್ಲಿ ಶೇ 9, ಹಾಸನ ಜಿಲ್ಲೆಯಲ್ಲಿ ಶೇ 7ರಷ್ಟು ಮಾತ್ರ ಬಿತ್ತನೆಯಾಗಿದೆ. ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ 10ರಷ್ಟು ಬಿತ್ತನೆಯಾಗಿದೆ.
ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ಬಿತ್ತನೆ ಮಾಡಲಾಗುತ್ತದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದರೂ ಈವರೆಗೂ ಬಿತ್ತನೆ ಆಗಿಲ್ಲ. ಮೈಸೂರು ಜಿಲ್ಲೆಯಲ್ಲಿ 77500 ಹೆಕ್ಟೇರ್ ಹಾಗೂ ಮಂಡ್ಯ ಜಿಲ್ಲೆಯಲ್ಲಿ 56889 ಹೆಕ್ಟೇರ್, ಬೆಂಗಳೂರು ದಕ್ಷಿಣದಲ್ಲಿ 3025 ಹೆಕ್ಟೇರ್ ಪ್ರದೇಶ ಭತ್ತ ಬೆಳದರೂ ಈವರೆಗೂ ಬಿತ್ತನೆ ಮಾಡಿಯೇ ಇಲ್ಲ.
ಚಾಮರಾಜನಗರ ಜಿಲ್ಲೆಉಯಲ್ಲಿ 8330 ಭತ್ತದ ಪ್ರದೇಶವಿದ್ದರೂ ಈವರೆಗೂ ಬಿತ್ತನೆ ಮಾಡುವ ಸಾಹಸಕ್ಕೆ ರೈತರು ಹೋಗಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 150 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದರೂ ಶೇ 2, ರಾಯಚೂರು ಜಿಲ್ಲೆಯಲ್ಲಿ 190638 ಹೆಕ್ಟೇರ್ ಭತ್ತದ ಪ್ರದೇಶವಿದ್ದರೂ ಈವರೆಗೂ 4020 ಹೆ್ಕ್ಟೇರ್ ನೊಂದಿಗೆ ಶೇ 2 ಗುರಿ ಮಾತ್ರ ತಲುಪಲಾಗಿದೆ. ಕೋಲಾರ ಜಿಲ್ಲೆಯ 3916 ಹೆಕ್ಟೇರ್ ನಲ್ಲಿ 32 ಹೆಕ್ಟೇರ್ ಹಾಗೂ ಚಿತ್ರದುರ್ಗ ಜಿಲ್ಲೆಯ 1100 ಹೆಕ್ಟೇರ್ ನಲ್ಲಿ ಬರೀ 11 ಹೆಕ್ಟೇರ್ ನೊಂದಿಗೆ ಶೇ 1ರ ಗುರಿ ಮುಟ್ಟಲಾಗಿದೆ.
ಹಾಸನ ಜಿಲ್ಲೆಯಲ್ಲಿ 30500 ಹೆಕ್ಟೇ್ರ್ ಗುರಿ ಇದ್ದರೂ ಈವರೆಗೂ 2255 ಹೆಕ್ಟೇರ್ ನೊಂದಿಗೆ ಶೇ 7, ಕೊಡಗು ಜಿಲ್ಲೆಯಲ್ಲೂ 17500 ಹೆಕ್ಟೇರ್ ಗುರಿ ಇದ್ದರೂ 1186 ಹೆಕ್ಟೇರ್ ಬಿತ್ತನೆಯೊಂದಿಗೆ ಶೇ 7ರ ಗುರಿ ತಲುಪಲಾಗಿದೆ. ತುಮಕೂರು ಜಿಲ್ಲೆಯಲ್ಲಿ 3050 ಹೆಕ್ಟೇರ್ ನಲ್ಲಿ 277 ಹೆಕ್ಟೇರ್ ಮಾತ್ರ ಭತ್ತ ಬಿತ್ತನೆಯಾಗಿ ಶೇ 9 ಗುರಿ ಮುಟ್ಟಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ 87741 ಹೆಕ್ಟೇರ್ ಪ್ರದೇಶವಿದ್ದರೂ ಬರೀ 8547 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ2000 ಹೆಕ್ಟೇರ್ ಪ್ರದೇಶದಲ್ಲಿ ಬರೀ 200 ಹೆಕ್ಟೇರ್ ನೊಂದಿಗೆ ಶೇ 10ರ ಗುರಿ ಮುಟ್ಟಲಾಗಿದೆ.
ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಹಾಗೂ ನಾಲೆಗಳಲ್ಲಿ ನೀರು ಬಾರದೇ ಇರುವುದರಿಂದ ಹೆಚ್ಚು ಬಿತ್ತನೆ ಮಾಡಿಲ್ಲ. ಸರ್ಕಾರ ತಿಂಗಳ ಹಿಂದೆಯೇ ಈ ಬಾರಿ ಬೆಳೆಗೆ ನೀರು ಇಲ್ಲ ಎಂದು ಘೋಷಿಸಿದ ನಂತರ ಕೆಲವರು ಬಿತ್ತನೆ ಮಾಡಲು ಮುಂದಾಗಿಲ್ಲ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಿವರಣೆ.