-
ಶ್ರೀ ಜಗದ್ಗುರು ಪಂಚಾಚಾರ್ಯ ವೀರಶೈವ ಐಕ್ಯತಾ ಮಂಡಳಿಯಿಂದ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮ

ಬೆಂಗಳೂರು: ಶ್ರೀ ಜಗದ್ಗುರು ಪಂಚಾಚಾರ್ಯ ವೀರಶೈವ ಐಕ್ಯತಾ ಮಂಡಳಿ ಹಮ್ಮಿಕೊಂಡಿರುವ ಆನ್ಲೈನ್ ಪ್ರವಚನ ಮಾಲೆ ಕಾರ್ಯಕ್ರಮದಲ್ಲಿ ಎಲ್ಲಾ ನಿರ್ವಹಣೆಯನ್ನು ಮಹಿಳೆಯರೇ ಶುಕ್ರವಾರ ಸಂಜೆ 7ಗಂಟೆಗೆ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
ಜಗದ್ಗುರುಗಳ ಕುರಿತು ವಾರಕ್ಕೊಂದು ವಿಷಯದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಪ್ರವಚನ ಮಾಡುತ್ತಿರುವುದು ಸತತ ಮೂರು ವಾರಗಳಿಂದ ನಡೆಯುತ್ತಿದೆ.
ಉಜ್ಜಯಿನಿ ಸದ್ಧರ್ಮ ಪೀಠದ ಲಿಂ.ಶ್ರೀ ಸಿದ್ಧೇಶ್ವರ ಜಗದ್ಗುರುಗಳ ಜೀವನ ಚರಿತ್ರೆಯ ಪ್ರವಚನ ಮಾಲೆ ಮೊದಲ ವಾರ ನಡೆದಿದ್ದು, ಎರಡನೇ ವಾರ ರಂಭಾಪುರಿ ಪೀಠದ ಲಿಂ. ಶ್ರೀ ಗಂಗಾಧರ ಜಗದ್ಗುರುವಿನ ಚರಿತ್ರೆ ಕುರಿತು ಪ್ರವಚನ ನಡೆಯಿತು. ಪ್ರಸ್ತುತ ಈ ವಾರ ಯಡೆಯೂರು ಶ್ರೀ ತೋಂಟದ ಸಿದ್ಧಲಿಂಗೇಶ್ವರ ಸ್ವಾಮಿಯ ಜೀವನ ಚರಿತ್ರೆಯ ಕುರಿತು ಪ್ರವಚನ ಮಾಲೆ ಆನ್ಲೈನ್ನಲ್ಲಿ ನಡೆಯುತ್ತಿದೆ.
ಜೂ.18 ರಂದು ನಡೆದ ಆನ್ಲೈನ್ ಪ್ರವಚನ ಮಾಲೆ ಕಾರ್ಯಕ್ರಮದಲ್ಲಿ ತಾವರೆಕರೆ ಶಿಲಾಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಉಪದೇಶಾಮೃತ ನೀಡಿ,
ಯಡೆಯೂರು ಸುಕ್ಷೇತ್ರದ ಜಗದ್ಗುರು ತೋಂಟದ ಶ್ರೀ ಸಿದ್ಧಲಿಂಗೇಶ್ವರ ಶಿವಯೋಗಿಗಳನ್ನು ನೆನೆದರೆ ಕಾರುಣ್ಯ ಪ್ರಾಪ್ತಿಯಾಗುವುದು. ಅಂಥ ದಿವ್ಯ ಪವಾಡ ಪುರುಷರಾಗಿದ್ದ ಶ್ರೀಗಳು ನಡೆದಾಡಿದ ನೆಲ ಪಾವನವಾಗಿದೆ ಎಂದು ತಿಳಿಸಿದರು. ಅಲ್ಲದೆ, ಒಳ್ಳೆಯ ಕೆಲಸ ಮಾಡುವವರಿಗೆ ದೇವರು ಕಾಯುತ್ತಾನೆ. ಇದನ್ನರಿದು ಧರ್ಮ ಸಂಸ್ಕಾರದಿಂದ ಜೀವನವನ್ನು ಎಲ್ಲರೂ ನಡೆಸಬೇಕಿದೆ. ಸನಾತನ ವೀರಶೈವ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳು ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಬೇಕಿದೆ ಎಂದು ತಿಳಿಸಿದರು.
ಹರಪನಹಳ್ಳಿಯ ವೀಣಾ ಮಹಾಂತೇಶ್ ಚರಂತಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿಯ ಜೀವನ ಕುರಿತು ಚಿಕ್ಕವಯಸ್ಸಿನಲ್ಲಿ ನಾಟಕ ನೋಡಿದ್ದನ್ನು ಸ್ಮರಿಸಿದರು. ಅಲ್ಲದೆ, ವೀರಶೈವ ಧರ್ಮದ ಪಾಲನೆಗೆ ಮುಂದಾಗುವ ಮೂಲಕ ಅದನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಮೌನೇಶ್ವರಿ ಶಶಿಧರ ಅವರು ಶ್ರೀ ಸಿದ್ಧಲಿಂಗೇಶ್ವರರ ವಚನ ವಾಚಿಸಿದರು. ಬೆಂಗಳೂರಿನ ಅಂಬಿಕಾ ಚಂದ್ರಶೇಖರ ಅವರು ವೇದಘೋಷ ನಡೆಸಿಕೊಟ್ಟರು. ಪ್ರಾರ್ಥನೆಯನ್ನು ಹುಬ್ಬಳ್ಳಿಯ ವಿಜಯಲಕ್ಷ್ಮಿ ಬಂಗಾರೇಶ್ ಹಿರೇಮಠ ಹಾಡಿದರು. ಗದಗದ ಶಿಕ್ಷಕಿ ಕುಸುಮಾ ಸಿ.ಹಿರೇಮಠ ಅವರು ಸ್ವಾಗತಿಸಿದರೆ, ಚಿತ್ರದುರ್ಗದ ಶಿಕ್ಷಕಿ ಉಮಾ ಸಿದ್ದೇಶ್ ವಂದನಾರ್ಪಣೆ ಸಲ್ಲಿಸಿದರು.
ಇನ್ನು, ಕಾರ್ಯಕ್ರಮವನ್ನು ಬೆಂಗಳೂರಿನ ಆಕಾಶವಾಣಿ ನಿರೂಪಕಿ ಸವಿತಾ ಶಿವಕುಮಾರ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಅಮೇರಿಕಾದಲ್ಲಿದ್ದುಕೊಂಡೇ ಈ ಆನ್ಲೈನ್ ನಿರ್ವಹಣೆಯನ್ನು ಗಂಗಾಧರ ಮಠದ್ ನಿರ್ವಹಿಸಿದರೆ, ವೀರಶೈವ ಐಕ್ಯತಾ ಮಂಡಳಿಯ ಅಧ್ಯಕ್ಷ ಸತೀಶ್ ಆರಾಧ್ಯ, ಉಪಾಧ್ಯಕ್ಷ ಸತೀಶ್ ಕೆಂಭಾವಿಮಠ, ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಮಠದ್, ಕಾಶೀನಾಥ ಹಿರೇಹಳ್ಳಿ, ಮೈಲನಹಳ್ಳಿ ದಿನೇಶ್, ಶಶಿಧರ ಎಂ.ಕೆ, ಬಸವರಾಜ ಸಂಗೇವಾಡಿಮಠ, ವಿಕಾಸ್ ಬುಕ್ಕಾಂಬೂದಿ, ಸಿದ್ಧಲಿಂಗ ಸ್ವಾಮಿ, ಪ್ರವೀಣ್ ಸಾಲಿಮಠ, ಫಣಿಭೂಷಣ್, ರುದ್ರೇಶ್ ಸಾಸಲು ಸೇರಿ ಅನೇಕರು ಈ ಗೂಗಲ್ ಮೀಟ್ ಪ್ರವಚನ ಮಾಲೆಯನ್ನು ಅಚ್ಚುಕಟ್ಟಾಗಿ ನಡೆಯಲು ಶ್ರಮಿಸುತ್ತಿದ್ದಾರೆ.
ನಿತ್ಯ ಸಂಜೆ 6.45ಗಂಟೆಗೆ ಪ್ರವಚನ ಮಾಲೆ ಕಾರ್ಯಕ್ರಮ ಆರಂಭಗೊಂಡು, ರಾತ್ರಿ 8.30 ಗಂಟೆಗೆ ಮುಕ್ತಾಯಗೊಳ್ಳಲಿದೆ. ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು, ಕಾಶಿ, ಶ್ರೀಶೈಲ ಪೀಠದ ಜಗದ್ಗುರುಗಳು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿ ಅನೇಕ ಗಣ್ಯರು ಈ ಆನ್ಲೈನ್ ಪ್ರವಚನ ಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಸ್ಮರಿಸಬಹುದಾಗಿದೆ.
ನಿತ್ಯ ಈ ಆನ್ ಲೈನ್ ಪ್ರವಚನ ಮಾಲೆ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳಿಂದ 400 ರಿಂದ 500 ಜನರು ಭಾಗವಹಿಸುತ್ತಿರುವುದು ವಿಶೇಷ.