
ಪಾವಗಡ: ನಾಡಬಾಂಬ್ ಸ್ಫೋಟ ಆರೋಪಿ ವೆಂಕಟೇಶ್ಗೆ ನ್ಯಾಯಾಂಗ ಬಂಧನ
ಪಾವಗಡ: ತಾಲ್ಲೂಕಿನಲ್ಲಿ ನಡೆದ ನಾಡಬಾಂಬ್ ಸ್ಫೋಟ ಹಾಗೂ ನಕ್ಸಲರ ಹೆಸರಿನಲ್ಲಿ ಬೆದರಿಕೆ ಪತ್ರ ಅಂಟಿಸಿದ ಪ್ರಕರಣದ ಆರೋಪಿ ಕನಿಕಲಬಂಡೆ ವೆಂಕಟೇಶ್ಗೆ ಶುಕ್ರವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವೆಂಕಟೇಶ್ನನ್ನು ಮಂಗಳವಾರ ರಾತ್ರಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ಎರಡು ದಿನ ಪೊಲೀಸ್ ವಶಕ್ಕೆ ನೀಡಿದ್ದರು. ಕಸ್ಟಡಿಯ ಅವಧಿ ಮುಗಿದಿದ್ದರಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದರಿಂದ, ಮಧುಗಿರಿ ಕಾರಾಗೃಹಕ್ಕೆ ಕಳುಹಿಸಲಾಯಿತು.
ತಾಲ್ಲೂಕಿನ ವೀರಮ್ಮನಹಳ್ಳಿಯ ಬಲರಾಮಪ್ಪ ಅವರಿಗೂ ₹5 ಲಕ್ಷ ನೀಡುವಂತೆ ನಕ್ಸಲರ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದು, ಅವರ ತೋಟದ ಮನೆಯ ಕಬ್ಬಿಣದ ಕಂಬಿಗೆ ಕಟ್ಟಿದ್ದಾಗಿ ವಿಚಾರಣೆ ವೇಳೆ ವೆಂಕಟೇಶ್ ಪೊಲೀಸರಿಗೆ ತಿಳಿಸಿದ್ದಾರೆ. ನಾಗಭೂಷಣ್ ಅವರ ಜಮೀನಿನ ಶೆಡ್ ಬಾಗಿಲಿಗೆ ಕಟ್ಟಿದ್ದ ಪತ್ರದ ಮಾದರಿಯಲ್ಲಿಯೇ ಈ ಪತ್ರವನ್ನೂ ಬರೆಯಲಾಗಿದೆ ಎನ್ನಲಾಗಿದ್ದು, ಪೊಲೀಸರು ಪತ್ರವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿಯಿಂದ ನಾಡ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ನಾಗಭೂಷಣ್, ಬಲರಾಮಪ್ಪ ಅವರಿಗೆ ಬರೆಯಲಾಗಿದ್ದ ಎರಡು ಬೆದರಿಕೆ ಪತ್ರಗಳನ್ನು ಹಾಗೂ ಬರೆಯಲು ಬಳಸಿದ್ದವು ಎನ್ನಲಾದ ಕೆಂಪು, ನೀಲಿ, ಕಪ್ಪು ಬಣ್ಣದ ಪೆನ್ನುಗಳನ್ನು ಕನಿಕಲಬಂಡೆ ಗ್ರಾಮದ ಹೊರವಲಯದ ಗುಡ್ಡದ ಬಳಿಯ ಸೀಮೆಜಾಲಿ ಗಿಡಗಳ ಬಳಿಯಿಂದ ಪೊಲೀಸರು ಜಪ್ತಿ ಮಾಡಿದ್ದಾರೆ.