
ಮುಂಡರಗಿ: ಕಬ್ಬು ದರ ನಿಗದಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ
ಮುಂಡರಗಿ: ‘ಪ್ರತಿ ಟನ್ ಕಬ್ಬಿಗೆ ₹5,500 ನೀಡುವುದು ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸೆ.21ರಂದು ತಾಲ್ಲೂಕಿನ ಗಂಗಾಪೂರ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು’ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ವಿವಿಧ ರೈತ ಮುಖಂಡರೊಂದಿಗೆ ಕಬ್ಬಿನ ದರ ನಿಗದಿ ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಯ ಕರಪತ್ರಗಳನ್ನು ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸರ್ಕಾರವು ಕಬ್ಬು ಕಟಾವು ಹಾಗೂ ಸಾಗಾಣಿಗೆ ಸೇರಿ ಶೇ 9.62 ಸಕ್ಕರೆ ಅಂಶವಿರುವ ರೈತರ ಪತ್ರಿಟನ್ ಕಬ್ಬಿಗೆ ₹3,462 ನೀಡುತ್ತಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಸಾಕಷ್ಟು ನಷ್ಟವಾಗುತ್ತಿದ್ದು, ಸಕ್ಕರೆ ಕಾರ್ಖಾನೆಯವರು ರೈತರ ಟನ್ ಕಬ್ಬಿಗೆ ₹5,500 ನೀಡಬೇಕು. ಆ ಮೂಲಕ ರೈತರ ನಷ್ಟವನ್ನು ಭರಿಸಬೇಕು ಎಂದು ಒತ್ತಾಯಿಸಿದರು.
ಈಚೆಗೆ ಸಕ್ಕರೆ ದರವು ಗಗನಕ್ಕೇರುತ್ತಿದ್ದು, ಅದರ ಸಂಪೂರ್ಣ ಲಾಭಾಂಶವು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಹಾಗೂ ಸಗಟು ಮತ್ತು ಕಿರುಕುಳ ವ್ಯಾಪಾರಿಗಳಿಗೆ ದೊರೆಯುತ್ತಿದೆ. ಕಬ್ಬಿಗೆ ಹೆಚ್ಚು ದರ ನೀಡುವ ಮೂಲಕ ಕಬ್ಬು ಬೆಳೆಗಾರರಿಗೂ ಲಾಭಾಂಶ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.
ಸಮರ್ಪಕ ದರ ದೊರೆಯದೆ ಕಬ್ಬು ಬೆಳೆಗಾರರು ಪ್ರತೀವರ್ಷ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಈ ವರ್ಷ ₹5,500ಗೆ ಟನ್ ಕಬ್ಬು ಮಾರಾಟ ಮಾಡಲು ರೈತರು ನಿರ್ಧರಿಸಿದ್ದು, ಈ ಕುರಿತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಬ್ಬಿನ ರಿಕವರಿ (ಕಬ್ಬಿನಲ್ಲಿರುವ ಸಕ್ಕರೆಯ ಅಂಶ) ಆಧಾರದ ಮೇಲೆ ದರ ನಿಗದಿಗೊಳಿಸಬೇಕು. ಕಬ್ಬಿನ ತೂಕ ಹಾಗೂ ಪ್ರಯೋಗಾಲಯದಲ್ಲಿ ನಡೆಸುವ ರಿಕವರಿ ಪ್ರಯೋಗ ಪಾರದರ್ಶಕವಾಗಿರಬೇಕು. ರೈತರ ಬೆಳೆಗೆ ಸೂಕ್ತ ದರ ದೊರೆಯಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.21ರಂದು ಧರಣಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿ ಕೊಳಲ, ತಾಲ್ಲೂಕು ಅಭಿವೃದ್ದಿ ಹೋರಾಟ ವೇದಿಕೆಯ ಅಧ್ಯಕ್ಷ ವೈ.ಎನ್.ಗೌಡರ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶರಣಪ್ಪ ಕಂಬಳಿ, ರೈತ ಮುಖಂಡರಾದ ಮುದ್ಲಿಂಗಪ್ಪ ಕೊರ್ಲಹಳ್ಳಿ, ಸೋಮನಗೌಡ್ರ ಗೌಡ್ರ, ಬಸವರಾಜ ನವಲಗುಂದ, ಚಂದ್ರಪ್ಪ ಕುರಿ, ಬಸಪ್ಪ ಬಳ್ಳಾರಿ ಇದ್ದರು.