
ಕುಣಿಗಲ್ನಲ್ಲಿ ಶಿಷ್ಟಾಚಾರ ಉಲ್ಲಂಘನೆ; ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆರೋಪ
ಕುಣಿಗಲ್: ತಾಲ್ಲೂಕಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸದಿರುವುದರಿಂದ ಸರ್ಕಾರಿ ಸಮಾರಂಭಗಳು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಾಗುತ್ತಿವೆ ಎಂದು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಬಿ.ಎನ್.ಜಗದೀಶ್ ಶುಕ್ರವಾರ ಆರೋಪಿಸಿದರು.
ಬೆಂಗಳೂರಿನಿಂದ ಕುಣಿಗಲ್ಗೆ ‘ವಜ್ರ ವಿಸ್ತಾರ’ ಸಾರಿಗೆ ಸೇವೆ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರವನ್ನು ಪಾಲಿಸಿಲ್ಲ. ಮಾಜಿ ಸಂಸದರು ಭಾಗಿಯಾಗಿರುವುದು ಸರಿಯಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕ್ಷೇತ್ರದ ಸಂಸದರಿಗೆ ಆಹ್ವಾನ ನೀಡಿಲ್ಲ. ಮಾಜಿ ಸಂಸದರು ವೇದಿಕೆ ಏರಿದ್ದು ಶಿಷ್ಟಾಚಾರದ ಉಲ್ಲಂಘನೆ. ಇವರನ್ನು ಆಹ್ವಾನಿಸಿದವರು ಯಾರು? ಇವರಿಗೆ ಶಿಷ್ಟಾಚಾರದ ಅರಿವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಜಿನಿಯರಿಂಗ್ ಕಾಲೇಜಿಗೆ ನಮ್ಮ ಸ್ವಾಗತವಿದೆ. ಆದರೆ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬುದು ನಮ್ಮ ಒತ್ತಾಸೆ ಎಂದರು.
ಮುಖಂಡರಾದ ಹರೀಶ್, ಮಂಜುನಾಥ್, ವಾಸು, ದೀಪು, ಜಗದೀಶ್, ಈ.ಮಂಜು, ತರಿಕೆರೆ ಪ್ರಕಾಶ್ ಉಪಸ್ಥಿತರಿದ್ದರು.