
ಹೆಚ್ಚಿದ ಹೊರ ಹರಿವು: ಕಬಿನಿ, ಕೆಆರ್ಎಸ್, ಹೇಮಾವತಿ ಜಲಾಶಯ ನೀರಿನ ಮಟ್ಟ ಕುಸಿತ
ಬೆಂಗಳೂರು: ಕಾವೇರಿ ಕಣಿವೆಯ ಜಲಾಶಯಗಳಿಂದ ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ. ಕಬಿನಿ, ಕೆಆರ್ಎಸ್, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಿಂದ ಒಳಹರಿವಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಹರಿಸಲಾಗುತ್ತಿದೆ.
ಸದ್ಯ ನಾಲ್ಕು ಜಲಾಶಯಗಳಿಗೆ 10613 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, 25762 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯಗಳಲ್ಲಿ ಸದ್ಯ 76.85 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಶೇ 67ರಷ್ಟು ನೀರು ಲಭ್ಯವಿದೆ. ಇಲ್ಲಿ 114.57 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 113 ಟಿಎಂಸಿ ಅಡಿ ನೀರಿತ್ತು.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಈಗ 2855 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4660 ಕ್ಯುಸೆಕ್ ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 2269 ಅಡಿಗೆ ಕುಸಿದಿದ್ದು, ಶೇ 58ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಈಗ 11.39 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ 19.46 ಟಿಎಂಸಿ ಅಡಿ ನೀರು ಸಂಗ್ರಹವಾಗಿ ಬಹುತೇಕ ಭರ್ತಿಯಾಗಿತ್ತು.
ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯಕ್ಕೆ ಈಗ 2666 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಆದರೆ, ಹೊರ ಹರಿವಿನ ಪ್ರಮಾಣ 9252 ಕ್ಯುಸೆಕ್ ನಷ್ಟಿದೆ. ಜಲಾಶಯದ ನೀರಿನ ಮಟ್ಟವು 108 ಅಡಿಗೆ ಇಳಿಕೆಯಾಗಿದ್ದು, ಶೇ 60ರಷ್ಟು ನೀರು ಲಭ್ಯವಿದೆ. ಜಲಾಶಯದಲ್ಲಿ ಈಗಲೂ 29.91 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 48.34 ಟಿಎಂಸಿ ಅಡಿ ನೀರಿತ್ತು.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಈಗ 3789 ಕ್ಯುಸೆಕ್ ನೀರು ಹೊರ ಹರಿವು ಇದ್ದರೆ, ಹೊರ ಹರಿವಿನ ಪ್ರಮಾಣವನ್ನು 10150 ಕ್ಯುಸೆಕ್ಗೆ ಏರಿಕೆ ಮಾಡಲಾಗಿದೆ. ಜಲಾಶಯದ ನೀರಿನ ಮಟ್ಟವು 2910 ಅಡಿಯಷ್ಟಿದ್ದು, ಶೇ 73ರಷ್ಟು ನೀರು ಲಭ್ಯವಿದೆ. ಜಲಾಶಯದಲ್ಲಿ ಈಗ 27 ಟಿಎಂಸಿ ಅಡಿ ನೀರು ಲಭ್ಯವಿದ್ದು, ಕಳೆದ ವರ್ಷ ಇದೇ ದಿನ 36.96 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಕೊಡಗಿನ ಹಾರಂಗಿ ಜಲಾಶಯಕ್ಕೆ 1303 ಕ್ಯುಸೆಕ್ ನೀರು ಒಳಹರಿವು ಇದ್ದರೆ, ಹೊರ ಹರಿವು 1700 ಕ್ಯುಸೆಕ್ ನಷ್ಟಿದೆ. ಜಲಾಶಯದ ನೀರಿನ ಮಟ್ಟವು 2858 ಅಡಿ ನೀರಿದ್ದು ಶೇ 98ರಷ್ಟು ನೀರು ಲಭ್ಯವಿದೆ. ಜಲಾಶಯದಲ್ಲಿ ಈಗ 8.31 ಟಿಎಂಸಿ ಅಡಿ ನೀರಿದ್ದು, ಕಳೆದ ವರ್ಷ ಇದೇ ದಿನ 8.32 ಟಿಎಂಸಿ ಅಡಿ ನೀರಿತ್ತು.