
ನನ್ಹೆ ಫರಿಶ್ತೆ: 2,760 ಮಕ್ಕಳ ರಕ್ಷಣೆ
ಹುಬ್ಬಳ್ಳಿ: ಬಡತನ, ಶೋಷಣೆ, ಪರೀಕ್ಷೆಯಲ್ಲಿ ಅನುತ್ತೀರ್ಣ ಸೇರಿ ವಿವಿಧ ಕಾರಣಗಳಿಂದ ಮನೆ ತೊರೆದ 2,760 ಮಕ್ಕಳನ್ನು ನೈರುತ್ಯ ರೈಲ್ವೆ ವಿಭಾಗ ವ್ಯಾಪ್ತಿಯ ರೈಲ್ವೆ ಸುರಕ್ಷಾ ಪಡೆಯು (ಆರ್ಪಿಎಫ್) ರಕ್ಷಿಸಿದೆ. ನಾಲ್ಕು ವರ್ಷ ಏಳು ತಿಂಗಳ ಅವಧಿಯಲ್ಲಿ ಈ ಕಾರ್ಯಾಚರಣೆ ನೆರವೇರಿದೆ.
ಮಕ್ಕಳ ರಕ್ಷಣೆಗಾಗಿ 2018ರ ಮೇ ತಿಂಗಳಲ್ಲಿ ‘ನನ್ಹೆ ಫರಿಶ್ತೆ’ ಕಾರ್ಯಕ್ರಮ ಅನುಷ್ಠಾನ ಮಾಡಲಾಯಿತು. ದೇಶದಾದ್ಯಂತ ಈವರೆಗೆ ಸಾವಿರಾರು ಮಕ್ಕಳನ್ನು ರಕ್ಷಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಈ ಮಕ್ಕಳು 18 ವರ್ಷದ ಒಳಗಿನವರಾಗಿದ್ದು, ಇದರಲ್ಲಿ 14 ರಿಂದ 16 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಾಜ್ಯದ ಮಕ್ಕಳು ಸೇರಿ ಹೊರ ರಾಜ್ಯದವರು ಸಹ ಇದ್ದಾರೆ.
‘ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಅಥವಾ ಒಂಟಿಯಾಗಿ ಓಡಾಡುವ ಮಕ್ಕಳನ್ನು ಗುರುತಿಸಿ ತಪಾಸಣೆ ಮಾಡಲಾಗುತ್ತದೆ. ಪ್ರಮುಖವಾಗಿ ಮನೆಯವರೊಂದಿಗೆ ಜಗಳವಾಡಿ ಓಡಿ ಬರುವ ಮಕ್ಕಳ ಸಂಖ್ಯೆ ಹೆಚ್ಚಿರುತ್ತದೆ. ಜಾತ್ರೆ ಅಥವಾ ಪ್ರಯಾಣದ ಸಂದರ್ಭದಲ್ಲಿ ಕುಟುಂಬದಿಂದ ತಪ್ಪಿಸಿಕೊಂಡವರು, ಬಾಲ ಕಾರ್ಮಿಕ ಪದ್ಧತಿ ಅಥವಾ ಅಕ್ರಮ ಮಕ್ಕಳ ಸಾಗಣೆಗೆ ಒಳಗಾಗುವ ಮಕ್ಕಳು ಹಾಗೂ ಮಾನಸಿಕ ಅಸ್ವಸ್ಥ, ಅನಾಥ ಮಕ್ಕಳು ಇರುತ್ತಾರೆ ಎಂದು ಆರ್ಪಿಎಫ್ ಸಿಬ್ಬಂದಿಯೊಬ್ಬರು ತಿಳಿಸಿದರು.
‘ಕಲಿಕೆಯಲ್ಲಿ ನಿರಾಸಕ್ತಿ, ಪೋಷಕರೊಂದಿಗೆ ಜಗಳ, ಊರು ನೋಡುವ ಆಸೆ, ಕೌಟುಂಬಿಕ ವಿವಾದ, ಉತ್ತಮ ಅವಕಾಶಗಳನ್ನು ಅರಸುತ್ತಾ ಹಾಗೂ ಅಧಿಕ ಕೂಲಿ ಆಸೆ ಸೇರಿದಂತೆ ವಿವಿಧ ಕಾರಣಗಳಿಂದಲೂ ಮಕ್ಕಳು ಮನೆ ತೊರೆದು ಬರುತ್ತಾರೆ. ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ಗಳಲ್ಲಿ ಅಥವಾ ರೈಲುಗಳಲ್ಲಿ ಒಂಟಿ ಮಗು ಕಂಡು ಬಂದಲ್ಲಿ ತಕ್ಷಣವೇ ಅವರನ್ನು ಆರ್ಪಿಎಫ್ ಕಚೇರಿಗೆ ಕರೆತಂದು ಕೌನ್ಸೆಲಿಂಗ್ ಮಾಡಲಾಗುತ್ತದೆ. ದೇಶದ 135ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ’ ಎಂದು ಹೇಳಿದರು.
‘ಮೊದಲು ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ಅವರು ಈ ಪ್ರಕರಣಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಶಿಫಾರಸು ಮಾಡುತ್ತಾರೆ. ಸಿಡಬ್ಲ್ಯುಸಿಯು ಸಮಗ್ರ ಸಮಾಲೋಚನೆಯ ನಂತರ, ಮಕ್ಕಳನ್ನು ಅವರ ಪೋಷಕರೊಂದಿಗೆ ಕಳುಹಿಸಬೇಕೋ ಅಥವಾ ಹೆಚ್ಚಿನ ಆರೈಕೆ ಮತ್ತು ರಕ್ಷಣೆಗಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕೋ ಎಂಬುದನ್ನು ನಿರ್ಧರಿಸುತ್ತದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದರು.
ರೈಲ್ವೆ ನಿಲ್ದಾಣಗಳಲ್ಲಿ ಪೋಷಕರಿಲ್ಲದೆ ಒಂಟಿ ಅಥವಾ ಸಂಕಷ್ಟದಲ್ಲಿರುವ ಮಗು ಕಂಡರೆ, ಸಾರ್ವಜನಿಕರು ಕೂಡಲೇ ರೈಲ್ವೆ ಸುರಕ್ಷತಾ ಸಹಾಯವಾಣಿ 139 ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.
ನೈರುತ್ಯ ರೈಲ್ವೆ ವಿಭಾಗದಲ್ಲಿ ಮಕ್ಕಳ ರಕ್ಷಣೆ
ವರ್ಷ;ರಕ್ಷಿಸಿದ ಮಕ್ಕಳ ಸಂಖ್ಯೆ
2026;354 (ಜುಲೈ31ರವರೆಗೆ)