‘ಜ್ಞಾನದ ಹನಿ’ ಕಾರ್ಯಕ್ರಮ: ಪ್ರತಿ ವಿದ್ಯಾರ್ಥಿಗೆ ನಿತ್ಯ ₹1 ಠೇವಣಿ
ಗದಗ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕ್ರಮೇಣ ಕುಸಿತವಾಗುತ್ತಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ಶಿಕ್ಷಕ ವಿನೂತನ ಕಾರ್ಯಕ್ರಮಗಳ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದೀಗ, ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನ ₹1 ರೂಪಾಯಿ ಮೀಸಲಿಡುವ ‘ಜ್ಞಾನದ ಹನಿ’ ಕಾರ್ಯಕ್ರಮ ಆರಂಭಿಸಿದ್ದಾರೆ.
ಜಿಲ್ಲೆಯ ಗಜೇಂದಗಡ ತಾಲ್ಲೂಕಿನ ಕೋಚಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಜಯಕುಮಾರ್ ಡಿ.ಆರ್. ಅವರು ಶಾಲೆಯ 1ರಿಂದ 7ನೇ ತರಗತಿಯ 43 ಮಕ್ಕಳಿಗೆ ಇಂತಹ ಅನುಕೂಲ ಕಲ್ಪಿಸುತ್ತಿದ್ದಾರೆ. ಇದಕ್ಕಾಗಿ ಈ ಹಿಂದೆ ಶಾಲೆಯಲ್ಲಿ ಸ್ಥಾಪಿಸಿದ ಶಾಲಾ ಬ್ಯಾಂಕಿನಲ್ಲಿ ತಿಂಗಳಿಗೆ ₹1,290 ಠೇವಣಿ ಇರಿಸುತ್ತಿದ್ದಾರೆ.
‘ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಿ ಆಗುವುದನ್ನು ತಡೆದು, ಉತ್ಸಾಹದಿಂದ ಶಾಲೆಗೆ ಬರುವಂತಾಗಬೇಕು. ಪ್ರತಿದಿನ ಶಾಲೆಗೆ ಬಂದರೆ ಕಲಿಕೆಯಲ್ಲೂ ಪ್ರಗತಿ ಸಾಧಿಸುತ್ತಾರೆ. ಈ ಉದ್ದೇಶದಿಂದ ಎಲ್ಲ ವಿದ್ಯಾರ್ಥಿಗಳಿಗೆ ಹಣ ಮೀಡಲಿಡಲು ಮುಂದಾಗಿರುವೆ. ಹೀಗೆ ಸಂಗ್ರಹವಾದ ಹಣವು ವಿದ್ಯಾರ್ಥಿಗಳ ಕಲಿಕೆ, ಶೈಕ್ಷಣಿಕ ಪ್ರವಾಸ, ಕಲಿಕೋಪಕರಣ ಖರೀದಿಲು ನೆರವಾಗುತ್ತದೆ’ ಎಂದು ಶಿಕ್ಷಕ ವಿಜಯಕುಮಾರ್ ಡಿ.ಆರ್. ಹೇಳಿದರು.
‘ಈ ಮೊದಲು ಸರ್ಕಾರದ ಯೋಜನೆಯಂತೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ಶಾಲಾ ಬ್ಯಾಂಕ್ನಲ್ಲಿ ಇಡಲಾಗುತ್ತಿತ್ತು. ಇದಲ್ಲದೆ, ಅವರಿಗೆ ಅಗತ್ಯವಿದ್ದಾಗ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಲಾಗಿತ್ತು. ಹಣಕಾಸಿನ ಉಳಿತಾಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಅನುಕೂಲಕಾರಿಯಾಗಿದೆ. ವಿವಿಧ ಅನುಕೂಲಕಾರಿ ಯೋಜನೆಗಳಿಂದ ಶಾಲೆಗೆ ಈ ವರ್ಷ 13 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ಆಧುನಿಕ ಸೌಕರ್ಯದಿಂದ ಗಮನಸೆಳೆವ ಶಾಲೆ ಮೂವರೇ ಶಿಕ್ಷಕರು ಇರುವ ಕೋಚಲಾಪುರ ಶಾಲೆಯು ಡಿಜಿಟಲ್ ಸೌಕರ್ಯ ಸ್ಮಾರ್ಟ್ ಕ್ಲಾಸ್ ವಿಜ್ಞಾನ ಹಾಗೂ ಕನ್ನಡ ಪ್ರಯೋಗಾಲಯ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಓದಿನ ಕಟ್ಟೆ ಚಂದದ ಭಿತ್ತಿಚಿತ್ರಗಳು ಆಧುನಿಕ ಕಲಿಕೋಪಕರಣಗಳು ಮೊದಲಾದ ಸೌಕರ್ಯಗಳಿಂದ ಗಮನ ಸೆಳೆದಿದೆ. ಗಿಡ–ಮರಗಳಿಗೆ ಮಹನೀಯರ ಹೆಸರು–ಬಾರ್ ಬೋಡ್ ಮೂಲಕ ಮಾಹಿತಿ ಜಲ ಕೃಷಿಯಂತಹ ಗಮನಾರ್ಹ ಕೆಲಸಗಳೂ ಈ ಶಾಲೆಯಲ್ಲಿ ಆಗಿವೆ. ದಾನಿಗಳು ಸಮುದಾಯದ ನೆರವಿನಿಂದ ಇವೆಲ್ಲವೂ ಸಾಧ್ಯವಾಗಿವೆ.