
RCB: ನನ್ನ ಕೆಲಸ ಆಡುವುದು, ಆಯ್ಕೆ ಮಾಡುವುದಲ್ಲ: ಆರ್ಸಿಬಿ ಸ್ಟಾರ್ ಭುವನೇಶ್ವರ್ ಕುಮಾರ್ ಹಿಂಗ್ ಹೇಳಿದ್ಯಾಕೆ?
Bhuvneshwar Kumar: ಈಗಾಗಲೇ ಟೀಮ್ ಇಂಡಿಯಾವು 2026ರ ಟಿ20 ವಿಶ್ವಕಪ್ ಗೆದ್ದಿದೆ. ಇದೀಗ ಮುಂಬರುವ 2027ರ ಏಕದಿನ ವರ್ಲ್ಡ್ಕಪ್ಗೆ ತೆರೆಮರೆಯಲ್ಲಿ ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಈ ನಡುವೆಯೇ ತಂಡಕ್ಕೆ ಪುನರಾಗಮನದ ಕುರಿತು ಆರ್ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ. ಇದು ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದು, ಐಪಿಎಲ್ ಇತಿಹಾಸದಲ್ಲೇ 200 ವಿಕೆಟ್ ಪೂರೈಸಿದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಭುವನೇಶ್ವರ್ ಕುಮಾರ್ ಪಾತ್ರರಾಗಿದ್ದಾರೆ. ಇದೀಗ ಅವರು ಭಾರತೀಯ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಹಾಗೂ 2027ರ ಏಕದಿನ ವಿಶ್ವಕಪ್ ಆಯ್ಕೆಯ ಕುರಿತು ಮಹತ್ವದ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶ ಟಿ20 ಲೀಗ್ನಲ್ಲಿ ಲಖನೌ ಫಾಲ್ಕನ್ಸ್ ತಂಡದ ನಾಯಕತ್ವ ವಹಿಸಿಕೊಂಡು ಅಭ್ಯಾಸದಲ್ಲಿ ನಿರತರಾಗಿರುವ ಅವರು, ಟೀಮ್ ಇಂಡಿಯಾದಲ್ಲಿ ಮತ್ತೆ ಅವಕಾಶ ಸಿಗುವ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
'ನಾನು ಕ್ರಿಕೆಟ್ ಪ್ರೀತಿಸುತ್ತೇನೆ, ಆಡುವುದಷ್ಟೇ ನನ್ನ ಕೆಲಸ'
ಭಾರತ ತಂಡದ ನೀಲಿ ಜೆರ್ಸಿ ಧರಿಸುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಅಥವಾ 2027ರ ಏಕದಿನ ವಿಶ್ವಕಪ್ ನಿಮ್ಮ ಗುರಿಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭುವನೇಶ್ವರ್ ಕುಮಾರ್ ಅವರು, 'ನಾನು ಇಲ್ಲಿ ಆಡಲು ಬಂದಿದ್ದೇನೆ. ಕ್ರಿಕೆಟ್ ಆಡುವುದು ನನ್ನ ಕೆಲಸ, ಎಷ್ಟು ಸಿದ್ಧನಾಗಿದ್ದೇನೆ ಎಂಬುದನ್ನು ನಿರ್ಧರಿಸುವುದು ನಾನಲ್ಲ. ಯಾವುದೋ ಲೀಗ್ ಆಡಿ ಬೇರೆ ಹಂತಕ್ಕೆ ಹೋಗಬೇಕು ಎಂಬ ಉದ್ದೇಶ ನನಗಿಲ್ಲ. ಕ್ರಿಕೆಟ್ ಆಡುವುದನ್ನು ಪ್ರೀತಿಸುತ್ತೇನೆ, ಅದಕ್ಕಾಗಿ ಆಡುತ್ತಿದ್ದೇನೆ. ಮುಂದೆ ತಂಡಕ್ಕೆ ಆಯ್ಕೆ ಮಾಡುವುದು ಅಥವಾ ಬಿಡುವುದು ಆಯ್ಕೆಗಾರರ ತೀರ್ಮಾನ,' ಎಂದು ನೇರವಾಗಿಯೇ ಹೇಳಿದ್ದಾರೆ.
ರಣಜಿ ಟ್ರೋಫಿ ಬಗ್ಗೆ ಭುವನೇಶ್ವರ್ ಕುಮಾರ್ ಹೇಳಿದ್ದೇನು?
ಉತ್ತರ ಪ್ರದೇಶ ಕ್ರಿಕೆಟ್ನ ಅನುಭವಿ ಆಟಗಾರರಾಗಿರುವ ಭುವನೇಶ್ವರ್ ಕುಮಾರ್ ಅವರು, ಟೀಮ್ ಇಂಡಿಯಾ ಪರ ಕೊನೆಯ ಬಾರಿಗೆ 2022ರಲ್ಲಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಆಡಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ 2018ರ ಬಳಿಕ ಕಾಣಿಸಿಕೊಂಡಿರಲಿಲ್ಲ. ಇನ್ನೂ ಮುಂಬರುವ ರಣಜಿ ಟ್ರೋಫಿ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾಗವಹಿಸುವ ಬಗ್ಗೆ ಮಾತನಾಡಿದ ಅವರು, 'ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಈಗಲೇ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತೇನೆಯೇ ಅಥವಾ ಇಲ್ಲವೇ ಎಂದು ಹೇಳಲಾಗುವುದಿಲ್ಲ. ಆದರೆ ಕ್ರಿಕೆಟ್ ಆಡುವುದೇ ನನ್ನ ಮುಖ್ಯ ಗುರಿ,' ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
'ಸ್ಪೀಡ್ ಹಂಟ್' ಶ್ಲಾಘಿಸಿದ ಭುವಿ
ಕಳೆದ ಆವೃತ್ತಿಯಲ್ಲಿ ಉತ್ತರ ಪ್ರದೇಶ ತಂಡವು ವೇಗದ ಬೌಲಿಂಗ್ ವಿಭಾಗದಲ್ಲಿ ಕೊರತೆ ಎದುರಿಸಿತ್ತು. ಈ ಕೊರತೆಯನ್ನು ನೀಗಿಸಲು ಯುಪಿಸಿಎ ಆಯೋಜಿಸಿರುವ 'ಸ್ಪೀಡ್ ಹಂಟ್' ಯೋಜನೆಯನ್ನು ಭುವನೇಶ್ವರ್ ಕುಮಾರ್ ಶ್ಲಾಘಿಸಿದ್ದಾರೆ. 'ಪ್ರವೀಣ್ ಕುಮಾರ್, ಆರ್ಪಿ ಸಿಂಗ್, ಸುದೀಪ್ ತ್ಯಾಗಿ ಮತ್ತು ನನ್ನಂತಹ ವೇಗಿಗಳನ್ನು ನೀಡಿದ ಹೆಗ್ಗಳಿಕೆ ಉತ್ತರ ಪ್ರದೇಶಕ್ಕಿದೆ. ಸ್ಪೀಡ್ ಹಂಟ್ ಮೂಲಕ ರಾಜ್ಯಾದ್ಯಂತ ಹಲವು ಪ್ರತಿಭಾವಂತ ಯುವ ವೇಗಿಗಳನ್ನು ಹುಟ್ಟುಹಾಕಲಾಗಿದೆ,' ಎಂದು ಹೇಳಿದ್ದಾರೆ. ಕಳೆದ ದಿನಗಳ ಹಿಂದೆಯಷ್ಟೇ ಆರ್.ಅಶ್ವಿನ್ ಅವರು ಭುವನೇಶ್ವರ್ ಕುಮಾರ್ ಅವರು ಟೀಮ್ ಇಂಡಿಯಾಗೆ ಅಗತ್ಯ ಇದೆ. ಅವರನ್ನು 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲೇಬೇಕು ಎಂದು ಮನವಿ ಮಾಡಿ ಗಮನ ಸೆಳೆದಿದ್ದರು.