ರೋಣ |ಜಿಟಿ ಜಿಟಿ ಮಳೆಗೆ ಹೆಸರು ಕಾಳು ಒಣಗಿಸಲು ರೈತರು ಪರದಾಟ
ರೋಣ: ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಆಗಾಗ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಹೆಸರು ಕಾಳು ಒಣಗಿಸಲು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಾಲ ಮಾಡಿ ಮುಂಗಾರು ಹಂಗಾಮಿನ ಹೆಸರು ಬಿತ್ತನೆ ಮಾಡಿದ್ದ ರೈತರಿಗೆ ಸದ್ಯ ಕೈಗೆ ಬಂದ ತುತ್ತು ಬಾಯಿಗೆ ಬರದು ಎನ್ನುವಂತಾಗಿದೆ. ತಾಲ್ಲೂಕಿನ ರೈತರು, ಅಲ್ಪ ಸ್ವಲ್ಪ ಬೆಳೆಯನ್ನು ಕಾಪಾಡಿಕೊಳ್ಳಲು ಒದ್ದಾಡುವಂತಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆ ಸುರಿದಿದ್ದರಿಂದ ತೇವಾಂಶ ಕೊರತೆ ಕಾರಣ ಹೆಸರು ಬೆಳೆ ನಿರೀಕ್ಷಿತ ಇಳುವರಿ ದಕ್ಕಿಲ್ಲ. ಸದ್ಯ ಬೆಳೆ ಕಟಾವು ಪ್ರಾರಂಭವಾಗಿದೆ. ಕಾಳುಗಳನ್ನು ತೇವಾಂಶದಿಂದ ಮುಕ್ತಗೊಳಿಸಲು ಒಣ ಹವೆ ಅವಶ್ಯವಿದೆ.
ರೋಣ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ಬಯಲು ಪ್ರದೇಶಗಳಲ್ಲಿ ಹೆಸರು ಕಾಳುಗಳನ್ನು ಒಣ ಹಾಕಿರುವ ರೈತರನ್ನು ಆಗಾಗ ಸುರಿಯುತ್ತಿರುವ ಜಿಟಿಜಿಟಿ ಮಳೆ ಹೈರಾಣಾಗಿಸುತ್ತಿದೆ. ಇದನ್ನೇ ನೆಪ ಮಾಡಿಕೊಂಡಿರುವ ದಲ್ಲಾಳಿಗಳು ಹಾಗೂ ಖರೀದಿದಾರರು ಕಾಳುಗಳಲ್ಲಿನ ತೇವಾಂಶ ಮುಂದಿಟ್ಟುಕೊಂಡು ಕಡಿಮೆ ದರ ನಿಗದಿಗೊಳಿಸುತ್ತಿದ್ದಾರೆ.
ಎರಡು ವಾರಗಳ ಹಿಂದೆ ₹12 ಸಾವಿರದವರೆಗೆ ಮಾರಾಟವಾಗಿದ್ದ ಹೆಸರು ಕಾಳುಗಳು ಸದ್ಯ ಮಾರುಕಟ್ಟೆಯಲ್ಲಿ ₹6 ಸಾವಿರಿಂದ ₹7 ಸಾವಿರಕ್ಕೆ ಮಾರಾಟವಾಗುತ್ತಿದ್ದು, ರೈತರನ್ನು ಆತಂಕಕ್ಕೆ ದೂಡಿದೆ. ಸರ್ಕಾರದ ಬೆಂಬಲಬೆಲೆ ಯೋಜನೆ ಅಡಿ ಖರೀದಿ ದರ ಹೆಚ್ಚಾಗಿದ್ದರೂ ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರ ತೆರೆಯದಿರುವುದು ದಳ್ಳಾಳಿಗಳು ಹಾಗೂ ಖರೀದಿದಾರರಿಗೆ ಇಂಬು ನೀಡುತ್ತಿದೆ ಎಂಬುದು ರೈತರ ಆರೋಪ.
ತಾಡಪತ್ರಿ ಖಾಲಿ: ಸರ್ಕಾರವು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸುತ್ತಿದ್ದ ತಾಡಪತ್ರಿಗಳು ಸದ್ಯ ರೋಣ ಮತ್ತು ಹೊಳೆಆಲೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿಯಾಗಿವೆ. ಇದರಿಂದ ಹೆಸರು ಕಾಳುಗಳನ್ನು ರಕ್ಷಿಸಲು ರೈತರಿಗೆ ತೀವ್ರ ತೊಂದರೆ ಉಂಟಾಗಿದೆ. ಕೆಲವು ಸ್ಥಿತಿವಂತ ರೈತರು ಹೆಚ್ಚಿನ ಬೆಲೆ ಕೊಟ್ಟು ಮಾರುಕಟ್ಟೆಯಲ್ಲಿ ತಾಡಪತ್ರಿ ಖರೀದಿ ಮಾಡುತ್ತಿದ್ದಾರೆ. ಬಡ ರೈತರಿಗೆ ಇದು ಸಾಧ್ಯವಾಗುತ್ತಿಲ್ಲ.
ಇದ್ದೂ ಇಲ್ಲದಂತಾದ ಎಪಿಎಂಸಿ
ರೋಣ ಪಟ್ಟಣದಲ್ಲಿರುವ ಎಪಿಎಂಸಿ ಉಪಕೇಂದ್ರ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ವಹಿವಾಟು ನಡೆಸಲು ಸಾಧ್ಯವಾಗಿಲ್ಲ. ಎಪಿಎಂಸಿ ಮೂಲಕ ವಹಿವಾಟು ನಡೆಸಲು ಪಟ್ಟಣದ ಕೆಲವು ವರ್ತಕರು, ರಾಜಕೀಯ ಪ್ರಭಾವಿಗಳು ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ. ಕೃಷಿ ಇಲಾಖೆಯ ಸಚಿವರು ಇತ್ತ ಗಮನಹರಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-23-1681174748