
ತಂಬ್ರಹಳ್ಳಿ |ಮೀನು ಹಿಡಿಯಲು ಹೋದ ಇಬ್ಬರು ನಾಪತ್ತೆ, ಒಬ್ಬ ಜಲಸಮಾಧಿ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ತಂಬ್ರಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದ ಬಳಿಯ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಮಂಗಳವಾರ ಸಂಜೆ ಮೀನು ಹಿಡಿಯಲು ತೆರಳಿದ್ದ ಮೂವರು ಮೀನುಗಾರ ಪೈಕಿ ಒಬ್ಬರ ಮೃತ ದೇಹ ದೊರಕಿದ್ದು, ನಾಪತ್ತೆಯಾದ ಇನ್ನಿಬ್ಬರ ಹುಡುಕಾಟ ನಡೆದಿದೆ.
ಏಕಾಏಕಿ ಬೀಸಿದ ಗಾಳಿ ರಭಸಕ್ಕೆ ತೆಪ್ಪ ಮುಳುಗಿ ಮಡಿವಾಳರ ಯಮನೂ ರಪ್ಪ (20) ನದಿಯಲ್ಲಿ ಜಲಸಮಾಧಿ ಆಗಿದ್ದಾನೆ.
ಮೀನುಗಳೊಂದಿಗೆ ದಡ ಸೇರಬೇಕಿದ್ದ ಅವಿವಾಹಿತ ಯುವಕ ಜವರಾಯನ ಆಲಿಂಗನದಲ್ಲಿ ಬದುಕಿನ ಅಂತ್ಯ ಹಾಡಿದ್ದಾನೆ. ನಾಪತ್ತೆಯಾಗಿರುವ ಗ್ರಾಮದ ಮಡಿವಾಳರ ರಾಜ (22), ಮಡಿವಾಳರ ಅಜ್ಜಪ್ಪ (26) ಅವರಿಬ್ಬರನ್ನು ಶೋಧಿಸುವ ಕಾರ್ಯ ನಡೆದಿದೆ.
ಗ್ರಾಮದ ಲಕ್ಷ್ಮಮ್ಮ ಮತ್ತು ಚಂದ್ರಪ್ಪ ಅವರ ಪುತ್ರರಾದ ಮಡಿವಾಳರ ರಾಜ ಮತ್ತು ಯಮನೂರಪ್ಪ ಒಂದೇ ಮನೆಯಲ್ಲಿ ಇಬ್ಬರು ಏಕಕಾಲದಲ್ಲಿ ಮರೆಯಾಗಿರುವುದು ಮನೆಯವರ ಆಕ್ರಂದನ ಹೇಳತೀರದಾಗಿದೆ.
ಕುಟುಂಬಕ್ಕೆ ಆಸರೆಯಾಗಿದ್ದ ಪುತ್ರ ಯಮನೂರಪ್ಪನ ಸಾವು ಮತ್ತೊಬ್ಬನ ನಾಪತ್ತೆಯಿಂದ ಮನೆಯವರ ರೋಧನೆ ಮುಗಿಲುಮುಟ್ಟಿದೆ. ತಾಯಿ ಲಕ್ಷ್ಮಮ್ಮನ ಗೋಳಾಟಕ್ಕೆ ನೆರೆದಿದ್ದವರ ಕಣ್ಣಾಲಿಗಳು ನೀರಾಗಿದ್ದವು. ‘ರಾಜ ಎಲ್ಲಿದಿಯಾ ಬಾರೋ’ ‘ನನ್ನ ಮಗನನ್ನ ಗಂಗಮ್ಮ ಕರೆದೊಂಡಳಾ, ಅಯ್ಯೋ ದೇವರೆ’ ಎನ್ನುವ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು.
ಮತ್ತೊಬ್ಬ ಗ್ರಾಮದ ಮಡಿವಾಳರ ಮರಿಯಪ್ಪ ಮತ್ತು ಶಾಂತಮ್ಮ ಅವರ ಪುತ್ರ ಅಜ್ಜಪ್ಪ(26) ಮೀನು ಹಿಡಿಯಲು ಹೋಗಿ ನಾಪತ್ತೆಯಾದ ನತದೃಷ್ಟ, ಮೀನುಗಾರಿಕೆ ಬದುಕಿನ ಮುಖ್ಯ ಕಸುಬಾಗಿತ್ತು.
ತಾಯಿ, ಸಹೋದರಿ ಮತ್ತು ಸಹೋದರನನ್ನು ಸಲಹುದಕ್ಕೆ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ. ಮೀನುಗಾರಿಕೆ ಈ ಎರಡೂ ಬಡ ಕುಟುಂಬಗಳ ಬದುಕಿಗೆ ನೆರವಾಗಿತ್ತು, ಆದರೆ ಅದೇ ಇಂದು ಅವರ ಬದುಕನ್ನು ಬಲಿ ತೆಗೆದುಕೊಂಡಿದೆ.
ಅಜ್ಜಪ್ಪ ಅವರ ವೃದ್ಧೆ ತಾಯಿ ಶಾಂತಮ್ಮ ಅವರನ್ನು ಸಂತೈಸುವವರ ಕಣ್ಣುಗಳೆಲ್ಲಾ ನೀರಿನಿಂದ ತುಂಬಿಕೊಂಡಿವೆ, ಮನೆಯಲ್ಲಿ ಸಂಬಂಧಿಕರ ಗೋಳಾಟ ಹೇಳತೀರದಾಗಿದೆ.
ಸ್ಥಳಕ್ಕೆ ಧಾವಿಸಿದ ಎಸ್ಡಿಆರ್ಎಫ್ ಸಿಬ್ಬಂದಿ
ಮೀನು ಹಿಡಿಯಲು ತೆರಳಿದ್ದ ಮೂವರಲ್ಲಿ ಯಮನೂರಪ್ಪ (20) ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯ ಮೀನುಗಾರರೊಂದಿಗೆ ಬುಧವಾರ ಬೆಳಿಗ್ಗೆ ಪತ್ತೆ ಮಾಡಿದೆ.
ಆದರೆ ಇನ್ನೂ ಇಬ್ಬರ ಶೋಧನಾ ಕಾರ್ಯ ಸಂಜೆವರೆಗೂ ನಡೆದಿತ್ತು, ಕಲಬುರ್ಗಿಯಿಂದ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್ಡಿಆರ್ಎಫ್) ಬಂದಿಳಿದು ಶೋಧ ಕಾರ್ಯಚಾರಣೆ ಮುಂದುವರೆಸಿತ್ತು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯಾಂತ್ರಿಕ ದೋಣೆಯಲ್ಲಿ ದೇಹಗಳ ಪತ್ತೆಗೆ ನೀರಿನಲ್ಲಿ ‘ಪಾತಾಳ ಗರಡಿ’ಯೊಂದಿಗೆ ಶೋಧ ಕಾರ್ಯ ಮುಂದುವರೆಸಿತು.
ಆದರೆ ಎಷ್ಟೆ ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ. ಮೃತದೇಹಗಳು ಗರಡಿಯ ಕೊಂಡಿಗೆ ತಾಕಲಿಲ್ಲ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ನುರಿತ ಈಜು ತಜ್ಞರನ್ನು ಕರೆಯಿಸಿ ಶೋಧ ಕಾರ್ಯ ನಡೆಸಿದರೂ ಸಫಲವಾಗಲಿಲ್ಲ..
ಸ್ಥಳದಲ್ಲಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮೊಕ್ಕಾಂ ಹೂಡಿದ್ದರು, ಕ್ಷಣಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದರು, ಘಟನೆ ನಡೆದ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು, ಮುಂಜಾಗ್ರತೆ ಕ್ರಮವಾಗಿ ವಿವಿಧ ಪೊಲೀಸ್ ಠಾಣೆಗಳಿಂದ ಪೊಲೀಸ್ ಅಧಿಕಾರಿಗಳು ಮತ್ತು ಕಾನ್ಸ್ಟೆಬಲ್ಗಳನ್ನು ನಿಯೋಜಿಸಲಾಗಿತ್ತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-25-219300691