ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ಕಚೇರಿಗೆ ಬಿಜೆಪಿ ಮುತ್ತಿಗೆ
ಹುಬ್ಬಳ್ಳಿ: ಇಲ್ಲಿನ ಆಸಾರ ಹೊಂಡದ ಭವಾನಿ ಶಂಕರ ದೇವಸ್ಥಾನ ಹತ್ತಿರ ನಡೆಯುತ್ತಿರುವ ರಸ್ತೆ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಅವರ ಕಚೇರಿಗೆ ಬಿಜೆಪಿ ಪಾಲಿಕೆ ಸದಸ್ಯರು ಸೋಮವಾರ ಮುತ್ತಿಗೆ ಹಾಕಿದರು.
ಪಾಲಿಕೆ ಆಯುಕ್ತ ಅವರು ರುದ್ರೇಶ್ ಘಾಳಿ, ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಕಾಮಗಾರಿ ನಡೆಸುತ್ತಿದ್ದಾರೆ. ಪುಷ್ಕರಣಿ ಉಳಿಯಲೇಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಭವಾನಿ ಶಂಕರ ದೇವಸ್ಥಾನದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ, ಮನೆಗಳನ್ನು ತೆರವುಗೊಳಿಸಬೇಕು. ಆಸಾರ ಹೊಂಡ ಸಂಸ್ಕೃತಿ ಭಾಗವಾಗಿದೆ. ಇದನ್ನು ಪುರಾತತ್ವ ಇಲಾಖೆಯ ಮೂಲಕ ಸಮೀಕ್ಷೆ ನಡೆಸದೇ ರಾತ್ರೋರಾತ್ರಿ ರಸ್ತೆ ಕಾಮಗಾರಿ ನಡೆಸಲಾಗಿದೆ ಎಂದು ದೂರಿದರು.
ಶಾಸಕ ಹಾಗೂ ಸರ್ಕಾರದ ಒತ್ತಡಕ್ಕೆ ಮಣಿದ ಪಾಲಿಕೆ ಆಯುಕ್ತರು ರಾತ್ರಿ ಪೊಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಕಾಮಗಾರಿ ಮಾಡಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ,ಸಂತೋಷ ಚವ್ಹಾಣ, ರಾಧಾಭಾಯಿ ಸಫಾರೆ, ರಾಮಣ್ಣ ಬಡಿಗೇರ, ಭೀರಪ್ಪ ಖಂಡೇಕರ, ಶಿವು ಮೆಣಸಿನಕಾಯಿ, ಶೀಲಾ ಕಾಟಕರ, ಸುನೀತಾ ಮಾಳದಕರ ಇದ್ದರು.