
ಲಾಯಲ್ ಪ್ರವಾಸೋದ್ಯಮ ಕೇಂದ್ರಕ್ಕೆ ವಿಶ್ವನಾಥ್ ಒತ್ತಾಯ
ಮಡಿಕೇರಿ: ಮೈಸೂರು, ಮಂಡ್ಯ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ‘ಲಾಯಲ್ ಪ್ರವಾಸೋದ್ಯಮ ಕೇಂದ್ರ’ವನ್ನಾಗಿ ಪರಿವರ್ತಿಸಬೇಕು ಎಂದು ಮಾಜಿ ಸಚಿವ ಅಡಗೂರು ಎಚ್. ವಿಶ್ವನಾಥ್ ಒತ್ತಾಯಿಸಿದರು.
ಈ ಮೂಲಕ ಈ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ ಅಭಿವೃದ್ಧಿ ಕಾಣಬಹುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಧಿಕಾರದಿಂದ ದೂರವಿರುವ ಕೊಡಗು ಜಿಲ್ಲೆಯ ಇಬ್ಬರು ಶಾಸಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದರೂ, ಇಲ್ಲಿನ ಶಾಸಕರಿಗೆ ಅಧಿಕಾರ ಸ್ಥಾನಗಳು ದೊರಕಿಲ್ಲ ಎಂದು ಬೇಸರಿಸಿದರು.
ಈ ಹಿಂದೆ ಜಿಲ್ಲೆಯ ಮೂವರು ಜನಪ್ರತಿನಿಧಿಗಳು ಸಚಿವರಾಗಿದ್ದನ್ನು ಪ್ರಸ್ತಾಪಿಸಿ, ಇತ್ತೀಚಿನ ದಿನಗಳಲ್ಲಿ ಕೊಡಗು ಅಧಿಕಾರ ಸ್ಥಾನದಿಂದ ವಂಚಿತವಾಗಿದೆ ಎಂದರು.
ಈ ಹಿಂದೆ ಇದ್ದ ಮುಖ್ಯಮಂತ್ರಿ ಕಟ್ಟಿದ ಮನೆಗೆ ಬಂದು ಸೇರಿದವರಾಗಿದ್ದರೆ, ಈಗ ಇರುವ ಮುಖ್ಯಮಂತ್ರಿ ಮನೆ ಕಟ್ಟಿ ಬಂದವರು ಎಂದು ಹೇಳಿದರು.
‘ಇಲ್ಲಿಯವರೆಗೆ ಉತ್ತಮವಾದ ರೀತಿಯಲ್ಲಿ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ಇನ್ನು ಮುಂದೆ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ. ದೊಡ್ಡ ಮೊತ್ತವನ್ನು ಬಯಸುವ ಚುನಾವಣಾ ರಾಜಕೀಯ ಸಾಧ್ಯವೂ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-51-1696290559