
ರಾಘವೇಂದ್ರಸ್ವಾಮಿ ದೇಗುಲದ ಬಳಿ ನಿರ್ಮಿಸಿದ ಉದ್ಯಾನ:ಕೋಟಿ ಖರ್ಚಾದರೂ ಈಡೇರದ ಉದ್ಧೇಶ
ಹಗರಿಬೊಮ್ಮನಹಳ್ಳಿ: ಈ ಉದ್ಯಾನ ನಿರ್ಮಾಣಕ್ಕೆ ಬರೋಬ್ಬರಿ ₹ 1ಕೋಟಿ ಖರ್ಚಾಗಿದೆ, ಆದರೆ ಇಲ್ಲಿ ಸುತ್ತಲೂ ಗೋಡೆಗಳನ್ನು ಮಾತ್ರ ನಿರ್ಮಿಸಿ ಅರೆಬರೆ ಕಾಮಗಾರಿಯಲ್ಲೆ ಮುಗಿಸಲಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಬೀದಿ ನಾಯಿಗಳ ಆವಾಸ ಸ್ಥಾನವೂ ಇದಾಗಿದೆ. ನಿರ್ಮಾಣಗೊಂಡು ವರ್ಷ ಮೇಲಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಕೂಡ್ಲಿಗಿ ರಸ್ತೆಯಿಂದ ರಾಘವೇಂದ್ರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ 14 ಮತ್ತು 17ನೇ ವಾರ್ಡ್ ಗಳಲ್ಲಿ ಹರಿದು ಹಂಚಿರುವ ನಿವೇಶನದಲ್ಲಿ ಉದ್ಯಾನ ನಿರ್ಮಾಣಕ್ಕಿಟ್ಟ ಅನುದಾನ ನೀರಿನಂತೆ ಖರ್ಚಾದರೂ ಉದ್ಯಾನ ನಿರ್ಮಾಣದ ಮೂಲ ಉದ್ಧೇಶ ಈಡೇರಿಲ್ಲ, ಇಲ್ಲಿನ ನಿವಾಸಿಗಳಿಗೆ ಉಪಯೋಗವೂ ಆಗಿಲ್ಲ.
₹ 1ಕೋಟಿ ಮೊತ್ತದ ಉದ್ಯಾನ ಕಾಮಗಾರಿ ಹರಿದ ಅಂಗಿಯಂತಾಗಿದೆ. ಸರ್ಕಾರದ ಅನುದಾನ ಪೋಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನದ ಯೋಜನೆಯ ಡಿಎಂಎಫ್ ಅನುದಾನದಲ್ಲಿ ಬೆಂಗಳೂರಿನ ಕರ್ನಾಟಕ ಸ್ಟೇಟ್ ಹೆಬೆಟೇಟ್ ಸೆಂಟರ್ (ಕೆಎಸ್ಎಚ್ಸಿ) ಗೆ ನಿರ್ಮಾಣದ ಹೊಣೆ ನೀಡಲಾಗಿತ್ತು.
ಈ ಸಂಸ್ಥೆ ತಾಳೆಬಸಾಪುರ ತಾಂಡಾದ ಎರಡನೇ ವ್ಯಕ್ತಿಗೆ ಉಪಗುತ್ತಿಗೆ ನೀಡಿತ್ತು. ಉದ್ಯಾನ ನಿರ್ಮಾಣ ಮಾಡಬೇಕಿದ್ದ ಗುತ್ತಿಗೆದಾರ ನಿವೇಶನದ ಸುತ್ತಲೂ ಸುತ್ತುಗೋಡೆ ನಿರ್ಮಿಸಿ, ಕಾಲುದಾರಿ ಯಲ್ಲಿ ಪಾರ್ಕಿಂಗ್ ಟೈಲ್ಸ್ ಹಾಕಿ, ನಾಲ್ಕು ಸಿಮೆಂಟ್ ಆಸನಗಳನ್ನು ಹಾಕಿ ಅರ್ಧಂಬರ್ಧ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ ಎನ್ನುವುದು ನಿವಾಸಿಗಳ ಅಳಲು.
ಗುತ್ತಿಗೆದಾರ ಉದ್ಯಾನ ನಿರ್ಮಾಣದ ಕ್ರಿಯಾಯೋಜನೆಯ ಅಂದಾಜು ಪಟ್ಟಿ ಕೊಡುತ್ತಿಲ್ಲ, ಕೋಟಿ ಅನುದಾನ ಮಾತ್ರ ಖರ್ಚಾಗಿದೆ ಎಂದು ನಿವಾಸಿ ಎನ್.ಕೊಟ್ರೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ,
ಈ ಕುರಿತಂತೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಹೇಳುತ್ತಾರೆ.
ಉದ್ಯಾನದ ಉತ್ತರ ದಿಕ್ಕಿನಲ್ಲಿ ಪ್ರವೇಶ ದ್ವಾರ ನಿರ್ಮಿಸಿ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದ ಕೆಎಸ್ಎಚ್ ಸಿ ಎಂಜಿನಿಯರ್ ಮಾತು ಸುಳ್ಳಾಗಿದೆ, ಈ ಕುರಿತು ಎಲ್ಲ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ ಎನ್ನುತ್ತಾರೆ 17ನೇ ವಾರ್ಡ್ ನಿವಾಸಿ ದಾದಾಪೀರ್.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-25-738899826