
ನರಸಿಂಹರಾಜಪುರ | ಕೆಸರು ಗದ್ದೆಯಾದ ರಸ್ತೆ; ಸಂಚಾರ ದುಸ್ತರ
ನರಸಿಂಹರಾಜಪುರ: ತಾಲ್ಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು, ಸಂಚಾರ ಮಾಡುವುದೇ ದುಸ್ತರವಾಗಿದೆ.
ಪ್ರಮುಖವಾಗಿ ಶೆಟ್ಟಿಕೊಪ್ಪದಿಂದ ನೇರಳೆ ಕೊಪ್ಪ, ಹಂಕಲು ಮನೆ, ನರಿ ಗುದ್ದು, ದಿಡಿಗಿ ಮಾವಿನಕೆರೆ, ಆಲಂದೂರು ಹೋಗುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಅಲ್ಲದೇ ಈ ಗ್ರಾಮದ ವ್ಯಾಪ್ತಿಯಲ್ಲಿ ಹರಿಯುವ ಹಳ್ಳಕ್ಕೆ ನಿರ್ಮಿಸಿರುವ ಸೇತುವೆಯ ಮೇಲೆ ಮಳೆಗಾಲದಲ್ಲಿ ನೀರು ತುಂಬಿ ಹರಿದು ಸಂಪರ್ಕಕ್ಕೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಮೊಗ್ಗ ಮುಖ್ಯರಸ್ತೆಯ ಹಾರೆಕೊಪ್ಪ ಗ್ರಾಮದಿಂದ ಗಾಂಧಿಗ್ರಾಮದ ಮೂಲಕ ಬಾಳೆಮನೆ, ಗರನಕೊಪ್ಪ, ಮಡಬೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ ರಸ್ತೆ ಕಾಮಗಾರಿಗೆ ಭೂಸೇನಾ ಅಭಿವೃದ್ಧಿ ನಿಗಮಕ್ಕೆ ಸರ್ಕಾರದಿಂದ ₹50 ಲಕ್ಷ ಬಿಡುಗಡೆಯಾಗಿದ್ದು, ಡಾಂಬರ್ ಅಳವಡಿಸುವ ರಸ್ತೆ ಕಾಮಗಾರಿ ಮಳೆಗಾಲಕ್ಕೂ ಮುನ್ನ ಆರಂಭವಾಗಿದೆ. ಕೇವಲ ಜಲ್ಲಿ ಅಳವಡಿಸುವ ಕಾಮಗಾರಿ ಮಾತ್ರ ಕೈಗೊಳ್ಳಲಾಗಿತ್ತು. ಆದರೆ ಪ್ರಸ್ತುತ ಮಳೆಗಾಲದಲ್ಲಿ ಈ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ರಸ್ತೆ ಕೆಸರು ಮಯವಾಗಿ ಮಾರ್ಪಟ್ಟಿದೆ.
ಈ ಗ್ರಾಮಗಳ ವ್ಯಾಪ್ತಿಗೆ ಖಾಸಗಿ ಶಾಲೆಯ ವಾಹನಗಳಾಗಲಿ ಆಟೊರಿಕ್ಷಾಗಳಾಗಲಿ ಬರುತ್ತಿಲ್ಲ. ಕೆಸರು ಮಯವಾದ ರಸ್ತೆಗಳಲ್ಲಿ ವಾಹನಗಳು ಹೂತು ಹೋಗುತ್ತಿದೆ. ಹಾಗಾಗಿ ಈ ವ್ಯಾಪ್ತಿಯ ಜನರು ಸುತ್ತಿ ಬಳಸಿ ದೂರದಲ್ಲಿರುವ ಮುಖ್ಯರಸ್ತೆಗೆ ಬಂದು ಮಕ್ಕಳನ್ನು ಶಾಲೆಯ ಬಸ್ ಹತ್ತಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಗ್ರಾಮದ ವ್ಯಾಪ್ತಿಯಲ್ಲಿರುವ ಹಳ್ಳಕ್ಕೆ ನಿರ್ಮಿಸಿರುವ ತಗ್ಗಿನ ಸೇತುವೆಗಳನ್ನು ತೆರವುಗೊಳಿಸಿ ಎತ್ತರಕ್ಕೆ ಅಭಿವೃದ್ಧಿಪಡಿಸಬೇಕು. ಗ್ರಾಮದ ರಸ್ತೆಗಳಿಗೆ ಅಭಿವೃದ್ಧಿಪಡಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ರಸ್ತೆ, ಸೇತುವೆ ಅಭಿವೃದ್ಧಿಯಾಗಿಲ್ಲ ಎಂದು ಗ್ರಾಮಸ್ಥ ಎ.ಬಿ. ಪ್ರಶಾಂತ್ ಬೇಸರ ವ್ಯಕ್ತಪಡಿಸಿದರು.
ಹಾರೆಕೊಪ್ಪ ಗ್ರಾಮದಿಂದ ಗಾಂಧಿ ಗ್ರಾಮಕ್ಕೆ ರಸ್ತೆ ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆಯಾಗಿದ್ದು, ಜಲ್ಲಿ ಅಳವಡಿಸಲಾಗಿತ್ತು. ಮಳೆಗಾಲವಾಗಿದ್ದರಿಂದ ಡಾಂಬರೀರಣ ಮಾಡಲು ಸಾಧ್ಯವಾಗಿರಲಿಲ್ಲ. ರಸ್ತೆ ಕೆಸರಾಗಿದ್ದ ವ್ಯಾಪ್ತಿಯಲ್ಲಿ ಜಲ್ಲಿ ಹಾಕಲಾಗಿತ್ತು. ಪುನಃ ಕೆಸರಾಗಿರುವುದರಿಂದ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭೂಸೇನಾ ಅಭಿವೃದ್ಧಿ ನಿಗಮದ ಎಇಇ ದಿಕ್ಷೀತ್ ಪ್ರತಿಕ್ರಿಯಿಸಿದರು.
ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ಹಳ್ಳಕ್ಕೆ ನೂತನ ಸೇತುವೆ ನಿರ್ಮಾಣಕ್ಕೆ, ರಸ್ತೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕೆಲವು ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಸೇತುವೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-126-1679288773