
ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿಕೆಶಿ
ಮಹಾಬಲಿಪುರಂ: ‘ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದಾಗ, ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ನಾವು ಭಾರತದ ಅಭಿವೃದ್ಧಿಯ ಪಾಲುದಾರರು. ನಮಗೆ ನಮ್ಮ ನಿಧಿಗಳಲ್ಲಿ, ನಮ್ಮ ಧ್ವನಿಯಲ್ಲಿ ನ್ಯಾಯ ಬೇಕು. ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡಿ ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದರು.
ತಮಿಳುನಾಡಿನ ಮಹಾಬಲಿಪುರಂನಲ್ಲಿ ಗುರುವಾರ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.
‘ಮುಂದಿನ ಚರ್ಚೆಯ ಸಂದರ್ಭದಲ್ಲಿ ಈ ಪ್ರತಿಯೊಂದು ವಿಷಯದ ಕುರಿತಾದ ನಿರ್ದಿಷ್ಟ ಸಮಸ್ಯೆಗಳು, ಸಂಬಂಧಿತ ಅಂಕಿ-ಅಂಶಗಳು ಹಾಗೂ ಕರ್ನಾಟಕ ಪ್ರಸ್ತಾಪಿಸುವ ಪರಿಹಾರ ಕ್ರಮಗಳನ್ನು ಈ ಮಂಡಳಿಯ ಮುಂದೆ ಮಂಡಿಸುತ್ತೇನೆ’ ಎಂದರು.
‘ಸ್ನೇಹಿತರೇ, ಕರ್ನಾಟಕ ಇಲ್ಲಿ ದೂರು ನೀಡಲು ಬಂದಿಲ್ಲ. ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ರಾಜ್ಯಗಳಿಗೆ ಸಲ್ಲಬೇಕಾದ ಗೌರವ, ನ್ಯಾಯಯುತ ಅಂಶಗಳನ್ನು ತಿಳಿಸಲು ಬಂದಿದ್ದೇವೆ. ನಮ್ಮೊಂದಿಗೆ ಹೆಜ್ಜೆ ಹಾಕಿ. ನಾವು ಭಾರತದ ಭವಿಷ್ಯ ಬೆಳಗುವ ಅವಕಾಶಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ’ ಎಂದರು.
ಕರ್ನಾಟಕ, ದಕ್ಷಿಣ ಭಾರತದ ಮೂಲಕ ಭಾರತದ ಅಭಿವೃದ್ಧಿ ಪಯಣ
‘ನಾನು ಹೆಮ್ಮೆಯ ಭಾರತೀಯನಾಗಿ ಹಾಗೂ 16 ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹೆಮ್ಮೆಯ ಕನ್ನಡಿಗನಾಗಿ ಮಾತನಾಡುತ್ತಿದ್ದೇನೆ. ನಾನು ಕರ್ನಾಟಕದ ಪರವಾಗಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಪರವಾಗಿ ಮಾತನಾಡುತ್ತಿದ್ದೇನೆ. ಭಾರತದ ಅಭಿವೃದ್ಧಿಯ ಪಯಣವು ದಕ್ಷಿಣ ಭಾರತದ ಮೂಲಕ ಸಾಗುತ್ತದೆ. ಭಾರತದ ಅಭಿವೃದ್ಧಿಯ ತೇರು ದಕ್ಷಿಣ ಭಾರತ ಮೂಲಕವೇ ಸಾಗುತ್ತಿತ್ತು, ಸಾಗುತ್ತಿದೆ, ಸಾಗುತ್ತದೆ’ ಎಂದರು.
‘ನಮ್ಮ ಐದು ರಾಜ್ಯಗಳು ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಶೇ.20ರಷ್ಟನ್ನು ಹೊಂದಿದ್ದರೂ, ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.33ರಷ್ಟು ಕೊಡುಗೆ ನೀಡುತ್ತಿವೆ. ಅಂದರೆ, ಭಾರತದ ಆರ್ಥಿಕತೆಯಲ್ಲಿ ಉತ್ಪತ್ತಿಯಾಗುವ ಪ್ರತಿ ಮೂರು ರೂಪಾಯಿಗಳಲ್ಲಿ ಒಂದು ರೂಪಾಯಿ ದಕ್ಷಿಣ ಭಾರತದಿಂದ ಬರುತ್ತದೆ. ಭಾರತದ ಆರ್ಥಿಕತೆಯ ಈ ಪ್ರಮುಖ ಎಂಜಿನ್ನಲ್ಲಿ ಕರ್ನಾಟಕವು ಅತ್ಯಂತ ಬಲಿಷ್ಠ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ’ ಎಂದು ಪುನರುಚ್ಚರಿಸಿದರು.
‘ಸಾಫ್ಟ್ವೇರ್ ರಫ್ತಿನಲ್ಲಿ ನಾವು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ. ಭಾರತದ ಸಾಫ್ಟ್ವೇರ್ ರಪ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ.42ರಷ್ಟಿದೆ. ಸುಮಾರು 1,100 ಗ್ಲೋಬಲ್ ಕೇಪಬಲಿಟಿ ಸೆಂಟರ್ಗಳನ್ನು ಹೊಂದಿರುವ ನಾವು, ದೇಶದಲ್ಲೇ ಅತಿ ಹೆಚ್ಚು GCCಗಳನ್ನು ಹೊಂದಿರುವ ರಾಜ್ಯವಾಗಿದ್ದೇವೆ. 2019ರಿಂದ 2025ರ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಬಂಡವಾಳ (ಎಫ್ಡಿಐ) ಈಕ್ವಿಟಿ ಒಳಹರಿವಿನಲ್ಲಿ ಶೇ.21ಕ್ಕಿಂತ ಹೆಚ್ಚಿನ ಪಾಲನ್ನು ಕರ್ನಾಟಕ ಆಕರ್ಷಿಸಿದೆ’ ಎಂದು ವಿವರಿಸಿದರು.
‘ಭಾರತದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ.5.5ರಷ್ಟಿದ್ದರೂ, ದೇಶದ ಜಿಡಿಪಿಗೆ ನಮ್ಮ ಕೊಡುಗೆ ಶೇ.9ರಷ್ಟಿದೆ. ಕರ್ನಾಟಕದ ತಲಾ GSDP ದೇಶದಲ್ಲೇ ಅತ್ಯಧಿಕವಾಗಿದ್ದು, ಭಾರತದ ತಲಾ GSDPಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ದೇಶದ ಏರೋಸ್ಪೇಸ್ ಉದ್ಯಮದ ಶೇ.60ರಷ್ಟು ಭಾಗ ಕರ್ನಾಟಕದಲ್ಲಿದೆ. ಭಾರತದ ಕಾಫಿ ಉತ್ಪಾದನೆಯ ಸುಮಾರು ಶೇ 70 ಮತ್ತು ಸಂಸ್ಕರಿಸಿದ ಸೌತೆಕಾಯಿ ರಫ್ತಿನ ಶೇ90 ಕೊಡುಗೆ ನಮ್ಮದಾಗಿದೆ. ಬೆಂಗಳೂರು ಇಂದು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ, ನ್ಯೂಯಾರ್ಕ್, ಬೀಜಿಂಗ್ ಮತ್ತು ಲಂಡನ್ಗಳೊಂದಿಗೆ ವಿಶ್ವದ ಪ್ರಮುಖ ಐದು ಎ.ಐ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ’ ಎಂದು ಹೇಳಿದರು.
ನಾವು ನ್ಯಾಯಯುತ ಪಾಲು ನಿರೀಕ್ಷಿಸುತ್ತಿದ್ದೇವೆ
‘15ನೇ ಹಣಕಾಸು ಆಯೋಗದ ಅವಧಿಯಲ್ಲಿ ವಿಭಜಿಸಬಹುದಾದ ತೆರಿಗೆ ಭಾಗದಲ್ಲಿ ಕರ್ನಾಟಕದ ಪಾಲು ಶೇ.4.7ರಿಂದ ಶೇ.3.6ಕ್ಕೆ ಇಳಿಕೆಯಾಯಿತು. ಇದು ಸುಮಾರು ಶೇ.23ರಷ್ಟು ಕಡಿತವಾಗಿದ್ದು, ಆರು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಅಂದಾಜು ₹65,000 ಕೋಟಿಯಷ್ಟು ನಷ್ಟ ಉಂಟಾಗಿದೆ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನ ಮತ್ತು ₹6,000 ಕೋಟಿ ರಾಜ್ಯ-ನಿದಿ ಷ್ಟ ಅನುದಾನವನ್ನು ಶಿಫಾರಸು ಮಾಡಿತ್ತು. ಆದರೆ, ಈ ಎರಡೂ ಶಿಫಾರಸು ಮಾಡಿದ ಅನುದಾನಗಳು ಬಿಡುಗಡೆಯಾಗಿಲ್ಲ" ಎಂದು ಆಗಿರುವ ಅನ್ಯಾಯ ವಿವರಿಸಿದರು.
‘16ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ಭಾಗಶಃ ನ್ಯಾಯ ಒದಗಿಸಿದ್ದು, ಕರ್ನಾಟಕದ ಪಾಲನ್ನು ಶೇ.3.64ರಿಂದ ಶೇ.4.131ಕ್ಕೆ ಹೆಚ್ಚಿಸುವ ಮೂಲಕ ಕೆಲವು ಮಟ್ಟಿಗೆ ಮರುಸ್ಥಾಪಿಸಿದೆ. ಆದಾಗ್ಯೂ, ನಮ್ಮ ಪಾಲನ್ನು ಸಂಪೂರ್ಣವಾಗಿ ಶೇ.4.7ಕ್ಕೆ ನಿಲ್ಲಿಸಬೇಕಿದೆ. ಕರ್ನಾಟಕವು GST ಮತ್ತು ಆದಾಯ ತೆರಿಗೆಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ. ಬೆಳವಣಿಗೆ ಮತ್ತು ಆದಾಯದ ವಿಷಯದಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯವನ್ನು ಪ್ರೋತ್ಸಾಹಿಸಬೇಕೇ ಹೊರತು, ದಂಡಿಸಬಾರದು’ ಎಂದರು.