
ಬೆಳಗಾವಿ–ರಾಯಚೂರು ಹೆದ್ದಾರಿ ಕಾಮಗಾರಿ ವಿಳಂಬ: ಅಧಿಕಾರಿಗಳ ನಿರ್ಲಕ್ಷ್ಯ ಕಾರಣ
ಮುದಗಲ್: ಭಾರತ್ ಮಾಲಾ ಯೋಜನೆ ಅಡಿ ಕೈಗೆತ್ತಿಕೊಂಡಿರುವ ಬೆಳಗಾವಿ–ರಾಯಚೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಂದಗತಿಯಲ್ಲಿ ಸಾಗುತ್ತಿದೆ.
ಹೆದ್ದಾರಿಯ ಜಾಗವನ್ನು ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಿರುವ ದೂರುಗಳಿವೆ. ಭೂಮಿ ಕಳೆದುಕೊಂಡಿರುವವರಿಗೆ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡುತ್ತಿಲ್ಲ. ವಸತಿಗಾಗಿ ಭೂ ಪರಿವರ್ತನೆ ಮಾಡಿಸಿಕೊಂಡವರಿಗೂ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಗಳ ಸರ್ವೆ ಮಾಡಿಲ್ಲ.
ತಂದೆ ಹೆಸರಿನ ಜಮೀನು ಮಕ್ಕಳ ಹೆಸರಿಗೆ ವರ್ಗಾವಣೆ ಆಗದಿರುವುದು, ಕುಟುಂಬದವರ ಆಸ್ತಿ ಹಂಚಿಕೆ ಆಗದಿರುವುದು ಸೇರಿ ವಿವಿಧ ತಾಂತ್ರಿಕ ಸಮಸ್ಯೆಗಳಿಂದ ಭೂ ಪರಿಹಾರ ದೊರೆತಿಲ್ಲ. ಹೀಗಾಗಿ ರೈತರು ಮತ್ತು ಅಧಿಕಾರಿಗಳ ನಡುವೆ ಆಗಾಗ ವಾಗ್ವಾದಗಳು ನಡೆಯುತ್ತಲೇ ಇವೆ.
ಹೆದ್ದಾರಿಯ 5ನೇ ಪ್ಯಾಕೇಜ್ನ 45 ಕಿ.ಮೀ ಕಾಮಗಾರಿ ಮುದಗಲ್ ಹೋಬಳಿಯ ಬೆಳ್ಳಿಹಾಳ ಗ್ರಾಮದಿಂದ ಆರಂಭವಾಗಿ ಕನಸಾವಿ ಕ್ರಾಸ್, ಆಮದಿಹಾಳ, ಕನ್ನಾಪುರ ಹಟ್ಟಿಯ ಜವಾಹರ ನವೋದಯ ವಿದ್ಯಾಲಯ, ಮುದಗಲ್ ಪಟ್ಟಣದ ಹೊರ ಭಾಗದಿಂದ ಹಾದು ಹೋಗಿದೆ.
ಉಚಿತ ಹಾಗೂ ಕಡಿಮೆ ದರದಲ್ಲಿ ಮರಂ ಪಡೆಯುವುದರಲ್ಲಿ ಗುತ್ತಿಗೆದಾರರು ತಲ್ಲೀನರಾದ ಕಾರಣ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಪಟ್ಟಣದ ನಿವಾಸಿ ಅಮರೇಶ ದೂರುತ್ತಾರೆ.
‘ಕನ್ನಾಪುರ ಹಟ್ಟಿ ಗ್ರಾಮದ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಕೆರೆಯ ಹೂಳೆತ್ತುವ ನೆಪದಲ್ಲಿ ಅಲ್ಲಿಂದ ಉಚಿತವಾಗಿ ಮರಂ ಅಗೆದು ರಸ್ತೆಗೆ ಹಾಕಿದರು. ಕೆರೆಯಲ್ಲಿ ನಿಗದಿಗಿಂತ ಹೆಚ್ಚು ಆಳವಾಗಿ ಮರಂ ತೆಗೆದಿದ್ದಾರೆ’ ಎಂದು ಗ್ರಾಮಸ್ಥರು ದೂರುತ್ತಾರೆ.
ಆಮದಿಹಾಳ ಗ್ರಾಮದಲ್ಲಿ ಪರಿಹಾರದ ಹಣ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಕಾಮಗಾರಿ ಸ್ಥಗಿತಗೊಳಿಸಿದ್ದರು.
ತಹಶೀಲ್ದಾರ್ ಸತ್ಯಮ್ಮ, ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆ ಕಂಪನಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಆದರೆ, ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-32-818052361