
ಕಲಬುರಗಿ| ಕಸದ ಮೈದಾನದಂತಾದ ವಕ್ಕಲಗೇರಾ ಉದ್ಯಾನ; ಆವರಣದಲ್ಲಿ ಮಳೆ ನೀರು ಸಂಗ್ರಹ
ಕಲಬುರಗಿ: ಗಿಡಗಳಿಲ್ಲದ ಖಾಲಿ ಮೈದಾನ, ಉದ್ಯಾನದ ಮೂಲೆಗಳಲ್ಲಿ ಬಿದ್ದ ಕಸದ ರಾಶಿ, ಕೆಲವೆಡೆ ಹಾಳಾದ ಪೇವರ್ಸ್, ಮಳೆ ಬಂದರೆ ನೀರು ಸಂಗ್ರಹ...
ಇದು ರಹಮಾನ್ ಮಸೀದಿ ಪಕ್ಕದಲ್ಲಿರುವ ಉದ್ಯಾನದ ವಸ್ತುಸ್ಥಿತಿ. ಈ ಉದ್ಯಾನ ನಗರದ ವಾರ್ಡ್ ಸಂಖ್ಯೆ 19ರಲ್ಲಿರುವ ವಕ್ಕಲಗೇರಾ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿದೆ.
ಉದ್ಯಾನ ನೋಡಿದಾಕ್ಷಣ ಮೈದಾನದಂತೆ ಕಂಡುಬರುತ್ತದೆ. ಮಕ್ಕಳ ಆಟಿಕೆ ಸಾಮಗ್ರಿಗಳಿಲ್ಲ. ಮುಖ್ಯವಾಗಿ ಗಿಡಗಳಿಲ್ಲ. ಉದ್ಯಾನದ ಮೂಲೆಗಳಲ್ಲಿ ಕಸ ಸುರಿಯಲಾಗುತ್ತಿದೆ. ಇದರಿಂದ ಸುತ್ತಲೂ ದುರ್ವಾಸನೆ ಹರಡುತ್ತಿದೆ. ಮಳೆ ಬಂದಾಗೊಮ್ಮೆ ಆವರಣದಲ್ಲಿ ನೀರು ಸಂಗ್ರಹವಾಗುತ್ತದೆ. ಇದರಿಂದ ಆಟವಾಡುವ ಮಕ್ಕಳು ಜಾರಿಬೀಳುವಂತಾಗಿದೆ.
ಉದ್ಯಾನದಲ್ಲಿ ಒಂದು ಬೋರ್ವೆಲ್ ಇದ್ದು, ಸಸಿಗಳನ್ನು ನೆಟ್ಟರೆ ಅವುಗಳ ಪೋಷಣೆಗೆ ಅನುಕೂಲವಾಗುತ್ತದೆ. ಅಲ್ಲಲ್ಲಿ ಬೆಳೆದಿರುವ ಅನಗತ್ಯ ಗಿಡಗಳನ್ನು ಕತ್ತರಿಸಿ, ಸಸಿಗಳನ್ನು ನಾಟಿ ಮಾಡಬೇಕು. ಹಸಿರೀಕರಣ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
‘ನಮ್ಮ ಕಾಲೊನಿ ಸುತ್ತಮುತ್ತ ಹೇಳಿಕೊಳ್ಳುವಂತಹ ಉದ್ಯಾನಗಳಿಲ್ಲ. ಇದರಿಂದಾಗಿ ರಜಾ ದಿನಗಳಲ್ಲಿ ಉಳ್ಳವರು ಅಪ್ಪನ ಕೆರೆ ಉದ್ಯಾನ ಮತ್ತು ಮಹಾನಗರ ಪಾಲಿಕೆಯ ಸಾರ್ವಜನಿಕ ಉದ್ಯಾನಕ್ಕೆ ತೆರಳುತ್ತಾರೆ. ಒಳ್ಳೆಯ ಉದ್ಯಾನ ನಿರ್ಮಿಸಿದರೆ ಮಕ್ಕಳ ಜೊತೆಗೆ ವಯಸ್ಕರು ಮತ್ತು ಹಿರಿಯರಿಗೂ ಸಮಯ ಕಳೆಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಕಾಲೊನಿ ನಿವಾಸಿಗಳು.
‘40 ವರ್ಷಗಳಿಂದ ಉದ್ಯಾನವಿದೆ. ಅಧಿಕಾರಿಗಳು ಕೇವಲ ಭೇಟಿ ನೀಡಿ ಹೋಗುತ್ತಾರೆ. ಅಭಿವೃದ್ಧಿಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ. ಉದ್ಯಾನ ಈಗ ಕ್ರಿಕೆಟ್ ಆಟದ ಮೈದಾನವಾಗಿದೆ’ ಎಂದು ಸ್ಥಳೀಯರಾದ ಮೊಹಮ್ಮದ್ ಉಸ್ಮಾನ್ ಮತ್ತು ಜಮೀಲ್ ಅಹ್ಮದ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಉದ್ಯಾನವೆಂದರೆ ಸಾಕಷ್ಟು ಗಿಡಗಳಿರಬೇಕು. ಆದರೆ, ಇಲ್ಲಿ ಅಂತಹ ಯಾವುದೇ ವಾತಾವರಣ ಕಂಡುಬರುವುದಿಲ್ಲ. ಕುಳಿತುಕೊಳ್ಳುವ ಆಸನಗಳಿಲ್ಲ. ಹಾಗಾಗಿ, ಸಿಮೆಂಟ್ನ ಬೆಂಚ್ಗಳನ್ನು ಅಳವಡಿಸಬೇಕು. ಇದರಿಂದ ವಾಯುವಿಹಾರ ಮಾಡುವವರಿಗೆ ಮತ್ತು ವಿಶ್ರಾಂತಿ ಪಡೆಯುವವರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260803-34-1399880745