ಮುಂದಿನ ದಿನಗಳಲ್ಲಿ ಉತ್ತರಾಧಿಕಾರಿ ನೇಮಕ : ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.06  : ಭಕ್ತರು ಎಲ್ಲಿಯವರೆಗೂ ನನ್ನನ್ನು ಇಷ್ಟಪಡುತ್ತಾರೋ ಅಲ್ಲಿಯತನಕ ನಾನು ಸ್ವಾಮೀಜಿಯಾಗಿರುತ್ತೇನೆ. ಈಗಾಗಲೆ ರಾಜ್ಯಾದ್ಯಂತ ಸುತ್ತಾಡಿದ್ದೇನೆ. ನನಗೂ ವಯಸ್ಸು ಹಾಗೂ ಆರೋಗ್ಯದ ಸಮಸ್ಯೆ ಕಾಡಬಹುದು. ಹಾಗಾಗಿ ಯಾರಾದರೂ ಭಕ್ತರು ತಮ್ಮ ಮಕ್ಕಳನ್ನು ಮಠಕ್ಕೆ ನೀಡಿದರೆ ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದೆಂದು ಮಾಚಿದೇವ ಮಹಾಸಂಸ್ಥಾನ ಮಠ ಮಡಿವಾಳ ಗುರುಪೀಠದ ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ ಭಿನ್ನವಿಸಿಕೊಂಡರು.

ನಗರದ ಹೊರವಲಯ ದಾವಣಗೆರೆ ರಸ್ತೆಯಲ್ಲಿರುವ ಮಡಿವಾಳ ಗುರುಪೀಠದಲ್ಲಿ ಶನಿವಾರ ನಡೆದ ಶ್ರೀಮಠದ ಶಂಕುಸ್ಥಾಪನೆ ಹದಿನೈದನೆ ವಾರ್ಷಿಕೋತ್ಸವ, ಜಂಗಮದೀಕ್ಷೆಯ 25 ನೇ ವರ್ಷ ಹಾಗೂ 40 ನೇ ಜನ್ಮದಿನದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ ಜನೋತ್ಸವ-2024 ರ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಶರಣರು, ಸಂತರು ಆದರ್ಶವಾಗಿ ಬದುಕಿದವರು. ತತ್ವ ಸಿದ್ದಾಂತಗಳಿಗಾಗಿ ಬದುಕನ್ನೇ ಮುಡುಪಾಗಿಟ್ಟವರು. ಮಡಿವಾಳ ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮುದಾಯದ ಸಂಘಟನೆಗಾಗಿ ನಿರಂತರ ಶ್ರಮಿಸುತ್ತಿದ್ದೇನೆ. 2009 ರಲ್ಲಿ ಮಠಕ್ಕೆ ಶಂಕುಸ್ಥಾಪನೆಯಾಯಿತು. ಎಲ್ಲಾ ಸಮುದಾಯಕ್ಕೂ ಒಬ್ಬ ಸ್ವಾಮೀಜಿಯನ್ನು ನೇಮಿಸಬೇಕೆಂಬ ಮಹದಾಸೆಯಿಂದ ಮುರುಘಾಮಠದ ಶರಣರು ನನ್ನನ್ನು ಮಡಿವಾಳ ಜನಾಂಗದ ಸ್ವಾಮೀಜಿಯನ್ನಾಗಿ ನೇಮಕ ಮಾಡಿದರು ಎಂದು ಸ್ಮರಿಸಿದರು.

ಪ್ರತಿ ವರ್ಷ ಜ.6 ರಂದು ಮಠದಲ್ಲಿ ಕಾಯಕ ಜನೋತ್ಸವ ನಡೆಯುತ್ತದೆ. ಈ ವರ್ಷ ಬರಗಾಲವಿರುವುದರಿಂದ ಸರಳವಾಗಿ ಆಚರಿಸಲು ತೀರ್ಮಾನಿಸಿದೆವು. ನಾವು ಯಾರನ್ನು ಆಹ್ವಾನಿಸುವುದಿಲ್ಲ. ಮಠ ನಿಮ್ಮದು ಎಂದು ತಿಳಿದುಕೊಂಡು ಪ್ರತಿ ವರ್ಷವೂ ಬರಬೇಕು. ಭಕ್ತರಿಗೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಜವಾಬ್ದಾರಿ ನಿಭಾಯಿಸುತ್ತೇನೆ. ಮುಂದಿನ ದಿನಗಳಲ್ಲಿ ಉತ್ತರಾಧಿಕಾರಿಯನ್ನು ನೇಮಕ ಮಾಡೋಣ. ಸಭಾಂಗಣದ ಮೇಲೆ ನಾಲ್ಕು ಸಾವಿರ ಜನ ಕುಳಿತುಕೊಳ್ಳುವಷ್ಟು ವಿಶಾಲವಾದ ಹಾಲ್ ನಿರ್ಮಾಣ ಮಾಡಲಾಗುವುದು. ಭಕ್ತಾಧಿಗಳು ತನು, ಮನ, ಧನವನ್ನು ನೀಡಿ ಮಠದ ಅಭಿವೃದ್ದಿಗೆ ಕೈಜೋಡಿಸುವಂತೆ ಸ್ವಾಮೀಜಿ ಮನವಿ ಮಾಡಿದರು.

ಯಡಿಯೂರ ಮೂಡಲಗಿರಿ ಮಾತನಾಡಿ ಹನ್ನೆರಡನೆ ಶತಮಾನದ ಮಡಿವಾಳ ಮಾಚಿದೇವರ ವಚನಗಳನ್ನು ಇಂದಿನ ಪೀಳಿಗೆಗೆ ಅಭ್ಯಾಸ ಮಾಡಿಸಬೇಕು. ಮಡಿವಾಳ ಜನಾಂಗ ಎನ್ನುವ ಕಾರಣಕ್ಕಾಗಿ ನಮ್ಮನ್ನು ಬೇರೆಯವರು ನಿರ್ಲಕ್ಷೆಯಿಂದ ಕಾಣುವಂತಾಗಿದೆ. ಅದಕ್ಕಾಗಿ ಎಷ್ಟೆ ಕಷ್ಟವಿರಲಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಹೊಣೆಗಾರಿಕೆ ಪೋಷಕರುಗಳ ಮೇಲಿದೆ. ಶಿಕ್ಷಣದಿಂದ ಮಾತ್ರ ಕೀಳರಿಮೆಯಿಂದ ಮಡಿವಾಳ ಜನಾಂಗ ಹೊರಬರಲು ಸಾಧ್ಯ ಎಂದು ಹೇಳಿದರು.

ಮಾಚಿದೇವರ 900 ವಚನಗಳಿವೆ. ಅವುಗಳನ್ನು ಎಲ್ಲರೂ ಕಂಠ ಪಾಠ ಮಾಡಬೇಕಿದೆ ಅದುವೆ ಮಡಿವಾಳ ಮಾಚಿದೇವರಿಗೆ ನಮ್ಮ ಜನಾಂಗ ಸಲ್ಲಿಸುವ ನಿಜವಾದ ಭಕ್ತಿ ಎಂದರು.

ಎಂ.ಕೆ.ಹನುಮಂತಪ್ಪ, ಫಕೀರಪ್ಪ, ಡಾ.ಸಂಗಮೇಶ್ ಕಳಾಲ್, ನಿಜಲಿಂಗಪ್ಪ, ಶ್ರೀಮತಿ ಮಂಜುಳಮ್ಮ, ಮಧು ಶಾಮನೂರ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ, ಮಡಿವಾಳ ಸಮಾಜದ ಮುಖಂಡರುಗಳಾದ ಶಿವಲಿಂಗಪ್ಪ, ಕೆ.ಆರ್.ಮಂಜುನಾಥ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಗಂಗಾಧರ್ ಮತ್ತು ತಂಡದವರು ಪ್ರಾರ್ಥಿಸಿದರು. ವಕೀಲ ಸಿದ್ದನಕೊಪ್ಪಲು ಕುಮಾರ್ ಸ್ವಾಗತಿಸಿದರು. ಮಡಿವಾಳ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ನಿರೂಪಿಸಿದರು.

The post ಮುಂದಿನ ದಿನಗಳಲ್ಲಿ ಉತ್ತರಾಧಿಕಾರಿ ನೇಮಕ : ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ first appeared on Kannada News | suddione.

[Collection]

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ